ಸ್ವಯಂ ಪ್ರೇರಿತ ರಕ್ತದಾನದ ಮೂಲಕ ಸಂಗ್ರಹಿಸುವಂತಹ ರಕ್ತವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಪ್ರಾಣ ರಕ್ಷಣೆಗಾಗಿ ಉಪಯೋಗ ಮಾಡಲಾಗುತ್ತಿದೆ ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಅಧ್ಯಕ್ಷರಾದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಹೇಳಿದರು.
ನಗರದ ದಿ ಕ್ರೆಸೆಂಟ್ ಶಾಲೆಯ ಆವರಣದಲ್ಲಿ ಬುಧವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ಕ್ರೆಸೆಂಟ್ ಶಾಲೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತದಾನದ ಜೊತೆಗೆ ಇತ್ತಿಚೆಗೆ ದೇಹದ ಅಂಗಾಂಗ ದಾನ ಮಾಡುವಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಗಳಿಸುತ್ತಿರುವ ದೇಶದಲ್ಲಿ ಜನತೆ ಮಾನವೀಯತೆಯನ್ನು ಮೆರೆಯುತ್ತಿರುವುದು ಶ್ಲಾಘನೀಯ. ರಕ್ತದಾನದಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಪಾಲ್ಗೊಳ್ಳುವುದರೊಂದಿಗೆ ರಕ್ತದಾನದಿಂದ ಆಗುವಂತಹ ಉಪಯೋಗಗಳ ಬಗ್ಗೆ ತಿಳಿದು ಇನ್ನೊಬ್ಬರಿಗೆ ಮನವರಿಕೆ ಮಾಡಿಕೊಡುವಂತಹ ಕೆಲಸ ಮಾಡಬೇಕು ಎಂದರು.
ಅಪಘಾತಗಳು ಸಂಭವಿಸಿದಾಗ ರಕ್ತಸ್ರಾವ ಹೆಚ್ಚಾಗಿ ಅಪಘಾತಕ್ಕೀಡಾದವರು ಮೃತ ಪಡುವುದು ಸೇರಿದಂತೆ ಹೆರಿಗೆ ಹಾಗು ಶಸ್ತ್ರಚಿಕಿತ್ಸೆ ಸಮಯದಲ್ಲಿ ರಕ್ತದ ಅಗತ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ೧೮ ವರ್ಷಕ್ಕೂ ಮೇಲ್ಪಟ್ಟ ಎಲ್ಲರೂ ರಕ್ತದಾನ ಮಾಡುವುದರಿಂದ ಬಹಳಷ್ಟು ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದರು.
ದಿ ಕ್ರೆಸೆಂಟ್ ಶಾಲೆಯ ಅಧ್ಯಕ್ಷ ತಮೀಮ್ ಅನ್ಸಾರಿ ಮಾತನಾಡಿ, ಪ್ರತಿವರ್ಷ ಡಿಸೆಂಬರ್ ೦೧ ರಂದು ವಿಶ್ವ ಏಡ್ಸ್ದಿನಾಚರಣೆಯ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವನ್ನು ಶಾಲೆಯ ವತಿಯಿಂದ ಮಾಡುತ್ತಿದ್ದು, ಈ ಬಾರಿ ಸಂಸ್ಥೆಯ ಮೂಲಕ ಉಚಿತ ರಕ್ತದಾನ ಶಿಬಿರವನ್ನು ಮಾಡಲಾಗುತ್ತಿದೆ. ಶಾಲಾ ಮಕ್ಕಳ ಮೂಲಕ ಅವರ ಪೋಷಕರನ್ನು ರಕ್ತದಾನ ಮಾಡುವಂತೆ ಮನವೊಲಿಸಲಾಗಿದ್ದು ಹೆಚ್ಚಿ ಸಂಖ್ಯೆಯಲ್ಲಿ ರಕ್ತ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗು ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ.ಗುರುರಾಜ್ರಾವ್ ಮಾತನಾಡಿ ತಾಲೂಕಿನಾದ್ಯಂತ ಉಚಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಈಗಾಗಲೇ ಸುಮಾರು ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥಗೌಡ, ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಸಿರಾಜ್, ಶಿಕ್ಷಕರು ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -