ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಕೆರಳಿಸಿ ಯಶಸ್ವಿ ಬೋಧನೆ ಕೈಗೊಳ್ಳಲು ಶಿಕ್ಷಕರಲ್ಲಿ ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಈಚೆಗೆ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಗಣಿತ ಮತ್ತು ಕನ್ನಡ ಬೋಧಿಸುವ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಲ್ಲಿಯೂ ಕಲಿಕಾಸಕ್ತಿಯನ್ನು ವೃದ್ಧಿಸಲು ಪೂರಕವಾಗಿ ಶಿಕ್ಷಕರು ವಿನೂತನ ಕ್ರಮಗಳನ್ನು ಅನುಸರಿಸಬೇಕು. ಎಸ್ಎಸ್ಎಲ್ಸಿ ಮಕ್ಕಳಲ್ಲಿ ಕನಿಷ್ಟ ಕಲಿಕಾಮಟ್ಟವನ್ನು ತಲುಪಿಸಿ ಕನಿಷ್ಟ ಅಂಕಗಳನ್ನು ಆದರೂ ಗಳಿಸುವ ಮಾರ್ಗೋಪಾಯಗಳನ್ನು ತಿಳಿಸಬೇಕು. ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ಪಡೆಯಲು ಪೂರಕವಾಗಿ ಶಿಕ್ಷಕರು ಶ್ರಮವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ತಾಲ್ಲೂಕಿನ ಸುಮಾರು ೪೦ ಕ್ಕೂ ಹೆಚ್ಚು ಪ್ರೌಢಶಾಲೆಗಳ ಗಣಿತ ಮತ್ತು ಕನ್ನಡ ಬೋಧಿಸುವ ೮೦ ಕ್ಕೂ ಹೆಚ್ಚು ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಜಂಗಮಕೋಟೆ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಎಂ.ಎಸ್.ಈರಯ್ಯ, ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಗೋಪಿನಾಥ್, ಕಾರ್ಯದರ್ಶಿ ಶ್ರೀಕಂಠ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಲ್.ವಿ.ವೆಂಕಟರೆಡ್ಡಿ, ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಗೋವಿಂದರಾಜುಲು, ಖಜಾಂಚಿ ಇಂದಿರಾ, ಎಂ.ಶಿವಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -