ಸರ್ಕಾರ ರಸ್ತೆಗಳ ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿರುವ ಹಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ, ಯಾವ ಗತಿ ಬರುತ್ತದೆ ಎಂಬುದಕ್ಕೆ ಶಿಡ್ಲಘಟ್ಟದ ಟಿ.ಬಿ.ರಸ್ತೆಯೇ ಜೀವಂತ ಸಾಕ್ಷಿಯಾಗಿದೆ.
ಜನನಿಬಿಡ ರಸ್ತೆಗಳಲ್ಲಿ ಒಂದಾದ ಟಿ.ಬಿ.ರಸ್ತೆಯಲ್ಲಿ ಆಳವಾದ ಗುಂಡಿ ಬಿದ್ದಿದ್ದು ಅದನ್ನು ದುರಸ್ಥಿಗೊಳಿಸಲು ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದು, ಇದರಿಂದ ರಸ್ತೆಯು ಅಪಾಘಾತದ ಕೂಪವಾಗಿ ಪರಣಮಿಸಿದೆ. ಅಕ್ಷರಶಃ ಈ ಗುಂಡಿ ದ್ವಿಚಕ್ರ ವಾಹನ ಸವಾರರ ಪಾಲಿಗೆ ಮೃತ್ಯಕೂಪವಾಗಿದೆ.
ಸಾರಿಗೆ ಬಸ್ ನಿಲ್ದಾಣಕ್ಕೆ ಹೋಗಿ ಬರಲು ಪ್ರಯಾಣಿಕರು, ವಾಹನ ಸವಾರರು, ಎಲ್ಲಾ ಶಾಲಾ ಕಾಲೇಜು, ಕಚೇರಿಗಳಿಗೆ ಇದೇ ರಸ್ತೆಯಲ್ಲಿ ಹೋಗಬೇಕಾಗಿದೆ. ರಸ್ತೆಯ ಮಧ್ಯದಲ್ಲಿ ಗುಂಡಿ ಬಿದ್ದಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ. ಈ ರಸ್ತೆಯಲ್ಲಿ ಬಾಯಿ ತೆರೆದು ನಿಂತಿರುವ ಗುಂಡಿಯನ್ನು ಮುಚ್ಚಲು ನಗರಸಭೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸಿದ್ದು ಅನಾಹುತ ಸಂಭವಿಸಿದ ಬಳಿಕ ಅಧಿಕಾರಿಗಳು ಎಚ್ಚತ್ತುಕೊಳ್ಳುತ್ತಾರೇಯೇ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ನೋಡುವ ಬದಲಿಗೆ ಗುಂಡಿಯನ್ನು ತಪ್ಪಿಸಲು ಹರಸಾಹಸ ಮಾಡುತ್ತಿದ್ದು ರಸ್ತೆಯ ಇಕ್ಕೆಲಗಳಲ್ಲಿ ಸಂಚರಿಸುವ ಪಾದಚಾರಿಗಳು ಗುಂಡಿಗಳನ್ನು ತಪ್ಪಿಸುವ ಭರಾಟೆಯಲ್ಲಿ ಎಲ್ಲಿ ವಾಹನಗಳು ತಮ್ಮ ಮೇಲೆ ಸವಾರಿ ಮಾಡುತ್ತಾರೋ ಎಂದು ಆತಂಕ ಪಡುವಂತಾಗಿದೆ. ಬೀದಿ ದೀಪಗಳನ್ನೂ ಸಹ ನಗರಸಭೆಯವರು ಸಮರ್ಪಕವಾಗಿ ಹಾಕಿಲ್ಲ. ಹೀಗಾಗಿ ಕತ್ತಲಾದಾಗ ನಿಜಕ್ಕೂ ಇದು ಅಪಘಾತದ ತಾಣವಾಗಿದೆ. ಅನಾಹುತವಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಗುಂಡಿಯನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
- Advertisement -
- Advertisement -
- Advertisement -
- Advertisement -