ಸಾಧಕರು ಎಲ್ಲೇ ಇದ್ದು ಸಾಧನೆ ಮಾಡಿದರೂ ಅವರ ಹುಟ್ಟೂರು ಸಂಭ್ರಮಿಸುತ್ತದೆ. ಹುಟ್ಟೂರಿನೊಂದಿಗೆ ತಳುಕು ಹಾಕಿಕೊಂಡ ಅವರ ಹೆಸರಿನಿಂದ ‘ನಮ್ಮ ಊರಿನವರು ಈ ಸಾಧನೆ ಮಾಡಿದ್ದಾರೆ’ ಎಂದು ಊರಿನವರು ಹೆಮ್ಮೆ ಪಡುತ್ತಾರೆ. ಈ ರೀತಿ ಊರಿನ ನಂಟನ್ನು ಹೆಸರಲ್ಲಿ ಇಟ್ಟುಕೊಂಡು ದೂರದೂರುಗಳಲ್ಲಿದ್ದುಕೊಂಡೇ ಸಾಧನೆ ಮಾಡಿರುವವರನ್ನು ಹುಟ್ಟೂರಿಗೆ ಕರೆಸಿ ಗೌರವಿಸುವ ಕೆಲಸ ಅಲ್ಲಲ್ಲಿ ನಡೆಯುತ್ತದೆ.
ಶಿಡ್ಲಘಟ್ಟದಲ್ಲಿಯೂ ಈ ರೀತಿಯ ರಾಷ್ಟ್ರಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಹುಟ್ಟಿದ ಊರಿನ ಘನತೆ ಗೌರವವನ್ನು ಹೆಚ್ಚಿಸಿರುವವರನ್ನು ಕರೆಸಿ ಇಂದು ಗೌರವಿಸಲಾಗುತ್ತಿದೆ. ಈ ಸಾಧಕರನ್ನು ಗೌರವಿಸುತ್ತಿರುವವರು ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಸೂರ್ಯನಾರಾಯಣರಾವ್, ಎಚ್.ವಿ.ರಾಮಚಂದ್ರರಾವ್, ನಾರಾಯಣಾಚಾರ್, ವಿ.ಸೀತಾಲಕ್ಷ್ಮಿ, ಪ್ರಕಾಶ್ಚಂದ್ರ ಕೃಷ್ಣಮೂರ್ತಿ ಅವರನ್ನು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಗೌರವಿಸುತ್ತಿದ್ದಾರೆ.
ಡಾ.ಸೂರ್ಯನಾರಾಯಣರಾವ್: ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಎನ್.ಪಿ.ನಾಗೇಶ ರಾವ್ ಮತ್ತು ಕೃಷ್ಣವೇಣಮ್ಮ ದಂಪತಿಗಳ ಮಗ 79 ವರ್ಷ ವಯಸ್ಸಿನ ಡಾ.ಸೂರ್ಯನಾರಾಯಣರಾವ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದ ನಂತರ ಬೆಂಗಳೂರಿನ ಪದ್ಮಶ್ರೀ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇಂಗ್ಲೆಂಡಿನ ಲಿವರ್ಪೂಲ್ನಲ್ಲಿಯೂ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ವರ್ಲ್ಡ್ ಬ್ಯಾಂಕ್ ಡ್ಯಾನಿಡಾ, ಯೂನಿಸೆಫ್, ಫೋರ್ಡ್ ಫೌಂಡೇಶನ್ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ತಾಂತ್ರಿಕ ಸಲಹೆಗಾರರು. ಬಯೋ ಸ್ಟಾಟಿಕ್ಸ್ ವಿಭಾಗದಲ್ಲಿ ಇವರು ನೀಡಿರುವ ಕೊಡುಗೆಯನ್ನು ಸ್ಮರಿಸಿ ಉತ್ತರಪ್ರದೇಶದ ಹಿಂದೂ ವಿಶ್ವವಿದ್ಯಾಲಯ ಮತ್ತು ಇಂಡಿಯನ್ ಸೊಸೈಟಿ ಫಾರ್ ಮೆಡಿಕಲ್ ಸ್ಟಾಟಿಸ್ಟಿಕ್ಸ್ ಸಂಸ್ಥೆಗಳು ಗೌರವಿಸಿವೆ. ಇವರು ಹಲವಾರು ವೈಜ್ಞಾನಿಕ ಲೇಖನಗಳು ಹಾಗೂ ಪುಸ್ತಕಗಳನ್ನು ರಚಿಸಿದ್ದಾರೆ.
ಎಚ್.ವಿ.ರಾಮಚಂದ್ರರಾವ್: ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಶ್ಯಾನುಬೋಗರ ಕುಟುಂಬದಲ್ಲಿ ಜನಿಸಿದ 85 ವರ್ಷ ವಯಸ್ಸಿನ ಎಚ್.ವಿ.ರಾಮಚಂದ್ರರಾವ್, ಎಸ್ಎಸ್ಎಲ್ಸಿವರೆಗೆ ಓದಿದ್ದು ಚಿಕ್ಕಬಳ್ಳಾಪುರದಲ್ಲಿ. ಮುಂದೆ ಕಾಲೇಜಿನಲ್ಲಿ ಓದಲು ಅವಕಾಶವಿಲ್ಲದೆ ಆಗಿನ ಮೈಸೂರು ರಿಯಾಸತ್ ಹಿಂದಿ ಪ್ರಚಾರ ಸಮಿತಿಯಲ್ಲಿ 1949ರಲ್ಲಿ ರಾಷ್ಟ್ರ ಭಾಷಾ ವಿಶಾರದ ಪಾಸು ಮಾಡಿ ಶಿಡ್ಲಘಟ್ಟದ ಬಿ.ವಿರೂಪಾಕ್ಷಪ್ಪ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು. ಬನಾರಸ್ ಹಿಂದಿ ವಿವಿಯ ಅಂಚೆ ಶಿಕ್ಷಣದ ಮೂಲಕ ಬಿ.ಎ ಪದವಿ, ನಂತರ ಹಿಂದಿ ಎಂ.ಎ ಮುಗಿಸಿ 1962 ರಲ್ಲಿ ಆಕಾಶವಾಣಿಗೆ ಪ್ರೋಗ್ರಾಂ ಎಕ್ಸಿಕ್ಯೂಟಿವ್ ಆಗಿ ಆಯ್ಕೆಯಾದರು. ಮುಂಬಯಿ, ಧಾರವಾಡ, ಗುಲ್ಬರ್ಗಾ, ಮಿಜೋರಾಮ್, ವಿಶಾಖಪಟ್ಟಣ, ಮಂಗಳೂರು, ಅಹ್ಮದಾಬಾದ್, ಬರೋಡಾ, ದೆಹಲಿ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಹಲವಾರು ಹಿಂದಿ ಮತ್ತು ಕನ್ನಡ ಅನುವಾದಗಳನ್ನು ಮಾಡಿದ್ದು, ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ತುಳಸಿ ರಾಮಾಯಣದ ಮೇಲೆ ಬರೆದ ‘ರಾಮಚರಿತ ಮಾನಸ ಒಂದು ರಸಯಾತ್ರೆ’, ಗ್ರಾಮಾಯಣ, ಸತ್ಯಾಗ್ರಹ ಮತ್ತು ಇತರ ಕಥೆಗಳು, ಕಬೀರ ವಚನಾವಳಿ, ಹರಿಕಥಾಮೃತಸಾರ ಮುಂತಾದ 16 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಹಿಂದಿ ಮಾತನಾಡದ ರಾಜ್ಯದ ಲೇಖಕರಿಗೆ ನೀಡುವ ಮಾನವ ಸಂಪನ್ಮೂಲ ಮಂತ್ರಾಲಯದ ಪ್ರಶಸ್ತಿ, ಶಬ್ಧ ಸಾಹಿತ್ಯ ಸನ್ಮಾನ, ಹಿಂದಿ ಮಾರ್ತಾಂಡ ಪ್ರಶಸ್ತಿ, ಹಿಂದಿ ಸೌಹಾರ್ಧ ಸನ್ಮಾನ್, ವಿಶಿಷ್ಠ ಹಿಂದಿ ಸೇವಾ ಸನ್ಮಾನ್ ಪ್ರಶ್ತಿ ಪುರಸ್ಕೃತರು. ಶಿಡ್ಲಘಟ್ಟದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಪ್ರಥಮ ಅಧ್ಯಕ್ಷರಾಗಿದ್ದರು.
ಸಿ.ಕೆ. ನಾರಾಯಣಾಚಾರ್: ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿ ಗ್ರಾಮದ ರಾಮಾನುಜಚನ್ನಮಾಚಾರ್ಯ ಮತ್ತು ಕನ್ನಮ್ಮ ದಂಪತಿಗಳ ಮಗ 85 ವರ್ಷ ವಯಸ್ಸಿನ ಸಿ.ಕೆ. ನಾರಾಯಣಾಚಾರ್ ಎಸ್ಎಸ್ಎಲ್ಸಿ ಓದಿದ್ದು ಶಿಡ್ಲಘಟ್ಟದ ಬಿ.ವಿರೂಪಾಕ್ಷಪ್ಪ ಪ್ರೌಢಶಾಲೆಯಲ್ಲಿ. ಪಿಯುಸಿ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ. 1953 ರಲ್ಲಿ ಆಂಧ್ರದ ಮೆಹಬೂಬ್ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿ 1978ರಲ್ಲಿ ಅಧೀಕ್ಷಕರಾಗಿ ಸ್ವಯಂ ನಿವೃತ್ತಿ ಪಡೆದರು. ನಿವೃತ್ತಿಯ ನಂತರ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸದಸ್ಯರಾಗಿ ಅದರ ಚಟುವಟಿಕೆಗಳನ್ನು ಜಿಲ್ಲಾಧ್ಯಂತ ವ್ಯಾಪಕವಾಗಿ ನಡೆಸಿ ಮೆಹಬೂಬ್ನಗರದಲ್ಲಿ ರಕ್ತನಿಧಿ ಘಟಕವನ್ನು ಸ್ಥಾಪಿಸಿದರು. ಇವರ ಸೇವೆಯನ್ನು ಗುರುತಿಸಿ ಮೆಹಬೂಬ್ನಗರದ ಅಂದಿನ ಜಿಲ್ಲಾಧಿಕಾರಿ ಎಲ್.ವಿ.ಸುಬ್ರಮಣ್ಯಂ ಇವರಿಗೆ ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆಂಧ್ರದ ರಾಜ್ಯಪಾಲರಿಂದ ಇವರ ಸೇವೆಗೆ ಮೂರು ಬಾರಿ ಚಿನ್ನದ ಪದಕ ಲಭಿಸಿದೆ. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಇವರ ನಂಟು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಮುಂದುವರೆಯಿತು. ರೆಡ್ಕ್ರಾಸ್ ಸೊಸೈಟಿ ಕಾರ್ಯದರ್ಶಿಯಾಗಿ ರಕ್ತನಿಧಿ ಘಟಕವನ್ನು ಸ್ಥಾಪಿಸಿ, ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಇದರೊಂದಿಗೆ ಆರೋಗ್ಯ ಶಿಬಿರ, ನೇತ್ರದಾನ ಶಿಬಿರ, ವಿಪತ್ತು ನಿರ್ವಹಣ ಜಾಗೃತಿ ಶಿಬಿರ, ನೇತ್ರ ಶಸ್ತ್ರಚಿಕಿತ್ಸಾ ಶಿಬಿರ, ವೃದ್ಧಾಶ್ರಮ ಅನಾಥಾಶ್ರಮಗಳಿಗೆ ಸೌಲಭ್ಯ ಕಲ್ಪಿಸುವುದು, ಅಪೌಷ್ಟಿಕತೆ ನಿವಾರಣೆಗೆ ಕಾರ್ಯಕ್ರಮಗಳನ್ನು ರೆಡ್ಕ್ರಾಸ್ ಸೊಸೈಟಿ ಮೂಲಕ ನಡೆಸುತ್ತಿದ್ದಾರೆ.
ವಿ.ಸೀತಾಲಕ್ಷ್ಮಿ : ಶಿಡ್ಲಘಟ್ಟದ ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷೆಯಾದ 60 ವರ್ಷ ವಯಸ್ಸಿನ ವಿ.ಸೀತಾಲಕ್ಷ್ಮಿ ಅವರು ಗೈಡ್ಸ್ ಕ್ಯಾಪ್ಟನ್ ಆಗಿ, ಎನ್.ಸಿ.ಸಿ ಅಧಿಕಾರಿಯಾಗಿ ಹಲವಾರು ರಾಜ್ಯಗಳಲ್ಲಿ ಶಿಬಿರಗಳಲ್ಲಿ ಪಾಲಗೊಂಡು ಮುಖ್ಯಮಂತ್ರಿಗಳಿಂದ ಮನ್ನಣೆ ಪಡೆದಿದ್ದಾರೆ. ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಪುರಸ್ಕಾರ, ಡಾ.ಎಸ್.ರಾಧಾಕೃಷ್ಣನ್ ಪ್ರಶಸ್ತಿ, 2015 ರ ಸಾಲಿನ ಸೀನಿಯರ್ ಗೈಡರ್ ಎಂದು ಕರ್ನಾಟಕ ರಾಜ್ಯಪಾಲರಿಂದ ಪುರಸ್ಕೃತರು.
ಪ್ರಕಾಶ್ ಚಂದ್ರ ಕೃಷ್ಣಮೂರ್ತಿ : ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಕೆ.ಎನ್.ಕೃಷ್ಣಮೂರ್ತಿ ಮತ್ತು ಇಂದ್ರಮ್ಮ ದಂಪತಿಗಳ ಮಗ 50 ವರ್ಷ ವಯಸ್ಸಿನ ಪ್ರಕಾಶ್ ಚಂದ್ರ ಕೃಷ್ಣಮೂರ್ತಿ ಎಸ್ಎಸ್ಎಲ್ಸಿ ಓದಿದ್ದು ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ. 1990 ರಲ್ಲಿ ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮ ಭಾರತೀಯ ವಿದ್ಯಾಭವನದಲ್ಲಿ ಪೂರೈಸಿದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದ ಇವರೀಗ ಉದಯ ಟೀವಿಯಲ್ಲಿ ಸುದ್ಧಿ ಸಂಪಾದಕರು. ಅಂಚೆ ಚೀಟಿ ಹವ್ಯಾಸವನ್ನು ಹೊಂದಿರುವ ಪ್ರಕಾಶ್ ಚಂದ್ರ ಕೃಷ್ಣಮೂರ್ತಿ ಅವರ ಬಳಿ 20 ಸಾವಿರಕ್ಕೂ ಹೆಚ್ಚು ಅಂಚೆ ಚೀಟಿಗಳ ಸಂಗ್ರಹವಿದೆ. 2015 ರಲ್ಲಿ ನಡೆದ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನ ಕರ್ನಾಪೆಕ್ಸ್ನಲ್ಲಿ ಇವರ ಸ್ವಾತಂತ್ರ್ಯಪೂರ್ವ ಅಂಚೆಚೀಟಿಗಳ ಸಂಗ್ರಹಕ್ಕೆ ರಜತ ಪದಕ ಲಭಿಸಿದೆ. ಕರ್ನಾಟಕ ಅಂಚೆ ಚೀಟಿ ಸಂಗ್ರಹಕಾರರ ಸಂಘಕ್ಕೆ ಆಜೀವ ಸದಸ್ಯ ಹಾಗೂ ಪೋಸ್ಟ್ ಕ್ರಾಸಿಂಗ್ ಎಂಬ ವಿಶಿಷ್ಠ ಹವ್ಯಾಸವನ್ನೂ ಹೊಂದಿದ್ದಾರೆ.
–ಡಿ.ಜಿ.ಮಲ್ಲಿಕಾರ್ಜುನ
- Advertisement -
- Advertisement -
- Advertisement -
- Advertisement -