Sidlaghatta : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸುತ್ತಿರುವ ಅಖಿಲ ಭಾರತ ಸೇವಾ ಕೇರಂ ಪಂದ್ಯಾವಳಿಗೆ ನಗರದ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯ ತಂತ್ರಜ್ಞ ಟಿ.ಟಿ.ನರಸಿಂಹಪ್ಪ ತರಬೇತುದಾರರಾಗಿ ಮತ್ತು ತಾಲ್ಲೂಕಿನ ಕಂಬದಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುಂದರಾಚಾರಿ ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ನವದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ ಫೆಬ್ರುವರಿ 17 ರಿಂದ 24 ರವರೆಗೆ ನಡೆಯಲಿರುವ ಕೇರಂ ಪಂದ್ಯಾವಳಿಯಲ್ಲಿ 6 ಮಂದಿ ಪುರುಷರ ತಂಡ ಮತ್ತು 6 ಮಂದಿ ಮಹಿಳೆಯರ ತಂಡ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಒಟ್ಟು 12 ಮಂದಿಯ ತಂಡಕ್ಕೆ ಶಿಡ್ಲಘಟ್ಟದ ಟಿ.ಟಿ.ನರಸಿಂಹಪ್ಪ ತರಬೇತುದಾರರಾಗಿ ಆಯ್ಕೆಯಾಗಿದ್ದು, ಅವರೊಂದಿಗೆ ಒಬ್ಬರು ವ್ಯವಸ್ಥಾಪಕ ಜೊತೆಗಿರುವರು.
“ನಮ್ಮ ರಾಜ್ಯವನ್ನು ಕೇರಂ ಪಂದ್ಯದಲ್ಲಿ ಪ್ರತಿನಿಧಿಸುತ್ತಿರುವ ತಂಡದಲ್ಲಿ ಇಬ್ಬರು ಶಿಡ್ಲಘಟ್ಟದವರಿರುವುದು ನಮಗೆ ಹೆಮ್ಮೆ. ತರಬೇತುದಾರರಾಗಿ ಟಿ.ಟಿ.ನರಸಿಂಹಪ್ಪ ಮತ್ತು ಆಟಗಾರರಾಗಿ ಸುಂದರಾಚಾರಿ ಆಯ್ಕೆಯಾಗಿದ್ದಾರೆ. ಸರ್ಕಾರಿ ನೌಕರರ ಸಂಘದಿಂದ ನಡೆದ ಸ್ಪರ್ಧೆಯಲ್ಲಿ ಇವರು ವಿಜೇತರಾಗಿದ್ದರು. ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ಶಿಡ್ಲಘಟ್ಟ ತಾಲ್ಲೂಕಿಗೆ ಇವರು ಕೀರ್ತಿ ತರುವುದಲ್ಲದೆ, ಇವರುಗಳು ಇತರರಿಗೆ ತರಬೇತಿ ನೀಡುವ ಮೂಲಕ ತಾಲ್ಲೂಕಿನಲ್ಲಿ ಕೇರಂ ಆಟದ ಪ್ರತಿಭೆಗಳ ಹುಟ್ಟಿಗೆ ಕಾರಣರಾಗಬೇಕು” ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ ತಿಳಿಸಿದರು.








