Cheemangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಕಿ ನಂದಿಸುವ ಮತ್ತು ಬೆಂಕಿಯಿಂದ ಉಂಟಾಗುವ ಪರಿಣಾಮಗಳ ಪ್ರಾತ್ಯಕ್ಷಿಕೆ ನಡೆಯಿತು.
ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಅಧಿಕಾರಿ ಮುನಿಕೃಷ್ಣ ಮಾತನಾಡಿ, ಮನೆ, ಮಳಿಗೆ, ವಾಣಿಜ್ಯ ಸಂಕೀರ್ಣ ಹೀಗೆ ಮಾನವ ಜೀವನ ನಡೆಸಲು ಮಾಡಿಕೊಂಡಿರುವ ವ್ಯವಸ್ಥೆಗಳಿರುವ ಎಲ್ಲ ಕಡೆಗಳಲ್ಲೂ ಬೆಂಕಿ ಆಕಸ್ಮಿಕಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ರೀತಿ ಉಂಟಾದ ಬೆಂಕಿ ಆಕಸ್ಮಿಕಗಳಿಂದ ಆಸ್ತಿಪಾಸ್ತಿ, ಬೆಲೆಬಾಳುವ ಪದಾರ್ಥಗಳು, ದಾಖಲೆಗಳು ನಾಶವಾಗುವ ಜತೆಗೆ ಪ್ರಾಣ ಹಾನಿಗಳು ಸಂಭವಿಸುತ್ತವೆ. ಆದ್ದರಿಂದ ಬೆಂಕಿ ಆಕಸ್ಮಿಕಗಳ ಸಂದರ್ಭದಲ್ಲಿ ನಮ್ಮ ಸೇವೆ ಪಡೆಯುವುದು ಒಂದು ಭಾಗವಾದರೆ. ಮುನ್ನೆಚ್ಚರಿಕೆ ಕ್ರಮಗಳು ಇನ್ನೂ ಪರಿಣಾಮಕಾರಿ ಎಂದು ತಿಳಿಸಿದರು.
ಬೆಂಕಿ ಆಕಸ್ಮಿಕಗಳು ಸಂಭವಿಸಿದಾಗ ಅಗ್ನಿಶಾಮಕ ಉಪಕರಣಗಳ ಬಳಕೆ ಬಗ್ಗೆ ತಿಳಿಸಿಕೊಟ್ಟರು. ಪ್ರತಿ ಕಟ್ಟಡಗಳಲ್ಲಿ ತುರ್ತು ನಿರ್ಗಮನಕ್ಕೆ ವ್ಯವಸ್ಥೆ ಇರುವಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಅಧಿಕಾರಿಗಳಾದ ರಕ್ಷಿತ್, ಸಂದೀಪ್, ಅಶೋಕ್, ಗಣೇಶ, ಶಾಲೆಯ ಮುಖ್ಯೋಪಾಧ್ಯಾಯ ಎಸ್. ಶಿವಶಂಕರ್, ಶಿಕ್ಷಕರಾದ ಶಿವಕುಮಾರ್, ಶ್ರೀನಿವಾಸ್, ಪಲ್ಲವಿ, ಅಪೂರ್ವ, ಬೀರಪ್ಪ ಹಾಜರಿದ್ದರು.








