Sidlaghatta : ಶಿಡ್ಲಘಟ್ಟ ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ PUC ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ‘ಪರಿಚಯಂ-2026’ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಅಂತರಾಷ್ಟ್ರೀಯ ಖ್ಯಾತಿಯ ಶಸ್ತ್ರ ಚಿಕಿತ್ಸಕ ಹಾಗೂ ಐಎಂಎ ಸದಸ್ಯ ಡಾ. ಆಂಜನಪ್ಪ ಮಾತನಾಡಿ, “ಸಂಪತ್ತಿಗಿಂತ ಆರೋಗ್ಯ ಮುಖ್ಯ. ತಪ್ಪು ಆಹಾರ ಪದ್ಧತಿ ಹಾಗೂ ಮಾನಸಿಕ ಒತ್ತಡವೇ ರೋಗಗಳಿಗೆ ಮೂಲ. ವಿದ್ಯಾರ್ಥಿಗಳು ಆರೋಗ್ಯದ ಕಡೆ ಗಮನಹರಿಸಿ, ವೈದ್ಯಕೀಯ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ತೋರಬೇಕು,” ಎಂದು ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಎ. ನಾಗರಾಜ್ ಮಾತನಾಡಿ, “ವಿದ್ಯಾರ್ಥಿಗಳಿಗೆ ಆಮಿಷ ಒಡ್ಡಿ ದಾರಿ ತಪ್ಪಿಸುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ. ನಾವು ಕಡಿಮೆ ಶುಲ್ಕದಲ್ಲಿ NEET, KCET ಮತ್ತು JEE ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದರು. ವ್ಯವಸ್ಥಾಪಕ ನಿರ್ದೇಶಕ ಎನ್. ಅಶೋಕ್ ಅವರು “ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಪುಸ್ತಕಗಳ ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡರೆ ಮಾತ್ರ ಯಶಸ್ಸು ಸಾಧ್ಯ,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರಾಂಶುಪಾಲ ಪ್ರೊ. ಎನ್. ಶ್ರೀನಿವಾಸಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರಿ ಸಿರಿಸಿಂಚನ ಮತ್ತು ಕೌಸರ್ ನಿರೂಪಣೆ ಮಾಡಿದರು. ಅಫ್ಷಾಫಾತೀಮ ಸ್ವಾಗತಿಸಿದರು. ಭವ್ಯ ವಂದನಾರ್ಪಣೆ ಮಾಡಿದರು. ಕುಮಾರಿ ವರ್ಷ ಮತ್ತು ಲಿಖಿತ ಪ್ರಾರ್ಥಿಸಿದರು.








