Sidlaghatta : ಯಾವುದೆ ರೀತಿಯ ಸಾಂಕ್ರಾಮಿಕ ಅಥವಾ ಅಸಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಆರೋಗ್ಯ ಕುರಿತು ವಯುಕ್ತಿಕವಾಗಿ ಮುನ್ನೆಚ್ಚರಿಕೆ ಅಗತ್ಯ ಇರಬೇಕಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ “ಮಲೇರಿಯಾ ವಿರೋಧಿ ಮಾಸಾಚರಣೆ ಜೂನ್-2025”ರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇದೀಗ ಮಳೆಗಾಲವಾದ್ದರಿಂದ ಸಹಜವಾಗಿ ಮಳೆ ನೀರು ಪರಿಸರದಲ್ಲಿ ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚು, ಸೊಳ್ಳೆಗಳ ಕಡಿತದಿಂದ ನಾನಾ ರೀತಿಯ ಜ್ವರ, ರೋಗಗಳೂ ಹೆಚ್ಚು ಕಾಡುತ್ತವೆಯಾದ್ದರಿಂದ ಹೆಚ್ಚು ಜಾಗ್ರತೆಯಿಂದ ಇರಬೇಕೆಂದರು.
ಮಲೇರಿಯಾ ವಿರೋಧಿ ಮಾಸಾಚರಣೆ ನಡೆಸುತ್ತಿದ್ದು ಮಲೇರಿಯಾ ರೋಗದ ವಿರುದ್ದ ನಾವು ಹೋರಾಡಬೇಕಿದೆ. ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇಲಾಖೆಯಿಂದ ಮಾಡಲಾಗುತ್ತಿದೆ ಎಂದರು.
ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆ, ಕ್ಲಿನಿಕ್, ಪಾಲಿ ಕ್ಲಿನಿಕ್, ಡಯಾಗೋಸ್ಟಿಕ್ ಲ್ಯಾಬೊರೇಟರಿಗಳ ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು, ಆರ್. ಎಂ. ಪಿ, ಆಯುಷ್, ಹೋಮಿಯೋಪಥಿ, ಸಿದ್ದ , ನ್ಯಾಚುರೋಪಥಿ ಸೇರಿದಂತೆ ಇತರ ತಜ್ಞರು ಮಲೇರಿಯಾ ಕಾರ್ಯಕ್ರಮದ ಅಡ್ವೊಕೆಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮೂರ್ತಿ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಡಾ. ಪ್ರಕಾಶ್, ನಗರಸಭೆ ಪೌರಾಯುಕ್ತ ಮೋಹನ್ ಕುಮಾರ್, ರಾಜ್ಯಮಟ್ಟದ ಮೇಲ್ವಿಚಾರಕ ರೇಣುಕಾ ಸ್ವಾಮಿ, ಡಾ. ಸತ್ಯನಾರಾಯಣರಾವ್, ಜಿಲ್ಲಾ ಮೇಲ್ವಿಚಾರಕ ಶಶಿಕುಮಾರ್, ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ದೇವರಾಜ್, ಎಪಿಡೆಮಾಲಜಿಸ್ಟ್ ಅಪೇಕ್ಷ, ಶಿಡ್ಲಘಟ್ಟ ನಗರ ಮತ್ತು ತಾಲೂಕಿನ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ನ ಪ್ರಯೋಗಶಾಲೆಯ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.