Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ, ಜೈ ಕರ್ನಾಟಕ ವಾಲೀಬಾಲ್ ಸಂಸ್ಥೆಯಿಂದ ಹಿರಿಯ ಮತ್ತು ಕಿರಿಯ ವಾಲಿಬಾಲ್ ಆಟಗಾರರ ಜ್ಞಾಪಕಾರ್ಥವಾಗಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ, ಪ್ರಥಮ ಬಹುಮಾನವನ್ನು ಸರ್ಜಾಪುರದ ಜೈಭೀಮ್ ತಂಡವು ಪಡೆದುಕೊಂಡಿದ್ದು, ಒಂದು ಲಕ್ಷ ನಗದು ಬಹುಮಾನ, ಆಕರ್ಷಕ ಟ್ರೋಫಿ ಪಡೆಯಿತು.
ಹಾಸನ ತಂಡವು ದ್ವಿತೀಯ ಬಹುಮಾನ 75 ಸಾವಿರ ನಗದು, ಆಕರ್ಷಕ ಟ್ರೋಫಿ, ತೃತೀಯ ಬಹುಮಾನ ಮೇಲೂರು ರಿಪಬ್ಲಿಕ್ ತಂಡವು 50 ಸಾವಿರ ನಗದು, ಆಕರ್ಷಕ ಟ್ರೋಪಿ ಪಡೆದುಕೊಂಡರು. ನಾಲ್ಕನೇ ಬಹುಮಾನ ಬೆಂಗಳೂರು ನಗರದ ರೆಡ್ಡಿ ತಂಡವು ಪಡೆದಿದ್ದು, 25 ಸಾವಿರ ನಗದು, ಆಕರ್ಷಕ ಟ್ರೋಪಿ ಪಡೆದುಕೊಂಡರು.
ವಾಲಿಬಾಲ್ ಟೂರ್ನಿಮೆಂಟ್ ಗೆ ಚಾಲನೆ ನೀಡಿದ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ ಯುವಕರು, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುವುದರ ಜೊತೆಗೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಇಂತಹ ಕ್ರೀಡೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆಗೊಳ್ಳುವ ಮೂಲಕ ಯುವ ಸಮೂಹದಲ್ಲಿ ಒಗ್ಗಟ್ಟಿನ ಜೊತೆಗೆ ಅವರನ್ನು ಸಂಘಟಿತರನ್ನಾಗಿ ಮಾಡಲು ಹೆಚ್ಚು ಸಹಕಾರಿಯಾಗಲಿದೆ. ಕ್ರೀಡೆಗಳನ್ನು ಕ್ರೀಡಾಸ್ಫೂರ್ತಿಯಿಂದ ಆಡುವುದನ್ನು ರೂಢಿಸಿಕೊಳ್ಳಬೇಕು. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕಾರ ಮಾಡಿಕೊಳ್ಳಬೇಕು ಎಂದರು.
ಗ್ರಾಮದ ಹಿರಿಯ ವಾಲಿಬಾಲ್ ಆಟಗಾರರನ್ನು ಸನ್ಮಾನಿಸಲಾಯಿತು. ಕ್ರೀಡಾ ಪಟುಗಳಿಗೆ ಮತ್ತು ಪಂದ್ಯಗಳ ವೀಕ್ಷಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿತ್ತು.
ಗಂಗಾದೇವಿ ಟ್ರಸ್ಟ್ ನ ಧರ್ಮದರ್ಶಿ ರಾಮಕೃಷ್ಣಪ್ಪ, ಜೈ ಕರ್ನಾಟಕ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಸಿ.ಎನ್.ಸೂರೇಗೌಡ, ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಗ್ರಾ.ಪಂ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾಗರಾಜ್, ವಹ್ನಿಕುಲ ರಾಜ್ಯ ಸಂಘದ ನಿರ್ದೇಶಕ ಶಿವರಾಜ್, ವಾಲ್ಮೀಕಿ ಸಂಘದ ಅಧ್ಯಕ್ಷ ಗಿರೀಶ್ ನಾಯಕ್, ಆಯೋಜಕರಾದ ಎಸ್.ಎನ್.ಪಾರ್ಥಸಾರಥಿ, ಟಿ.ವಿಜಯಕುಮಾರ್, ರಾಜು,(ಕೆ.ಜಿ.ಎಫ್), ಪ್ರದೀಪ್ ಜೋಗಿ, ಆರ್.ಚಂದ್ರೇಗೌಡ, ತಿಮ್ಮರಾಜು, ಡಿ.ಮುನಿಶಾಮಯ್ಯ, ಅಣ್ಣಪ್ಪ, ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.







