Talakayalabetta, Sidlaghatta : ತಾಲ್ಲೂಕಿನ ಪುಣ್ಯಕ್ಷೇತ್ರ ತಲಕಾಯಲಬೆಟ್ಟದಲ್ಲಿ ಭಾನುವಾರ ಮಾಘ ಮಾಸದ ಹುಣ್ಣಿಮೆಯ ಶುಭ ಮುಹೂರ್ತದಲ್ಲಿ ಭೂನೀಳಾ ಸಮೇತ ಶ್ರೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಸುಧಾಕರ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ಬಿ.ಎನ್. ರವಿಕುಮಾರ್, ಜಿಲ್ಲಾಧಿಕಾರಿ ಡಾ. ಪ್ರಭು ಜಿ ಹಾಗೂ ತಹಶೀಲ್ದಾರ್ ಗಗನಸಿಂಧು ಅವರು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು:
ಬ್ರಹ್ಮರಥೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಭಕ್ತರ ಸಾಗರವೇ ಹರಿದುಬಂದಿತ್ತು. ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದ ರಥವನ್ನು ಭಕ್ತರು ‘ಗೋವಿಂದಾ.. ಗೋವಿಂದಾ..’ ಎಂಬ ನಾಮಸ್ಮರಣೆಯೊಂದಿಗೆ ಎಳೆದರು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ರಥದ ಕಳಶಕ್ಕೆ ಬಾಳೆಹಣ್ಣು ಮತ್ತು ದವನವನ್ನು ಎಸೆದು ಭಕ್ತಿ ಸಮರ್ಪಿಸಿದರು.
ಜಾನುವಾರು ಜಾತ್ರೆ ಮತ್ತು ಅನ್ನದಾಸೋಹ:
ರಥೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಜಾನುವಾರು ಜಾತ್ರೆಯಲ್ಲಿ ನೆರೆ ರಾಜ್ಯಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ರಾಸುಗಳ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತು. ಪಂಚಾಯತಿ ವತಿಯಿಂದ ರಾಸುಗಳಿಗೆ ನೆರಳು, ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯ ಸಮಿತಿ ಹಾಗೂ ವಿವಿಧ ಗ್ರಾಮಗಳ ಭಕ್ತರು ಟ್ರ್ಯಾಕ್ಟರ್ಗಳಲ್ಲಿ ತಿಂಡಿ-ತಿನಿಸುಗಳನ್ನು ತಂದು ವಿತರಿಸುವ ಮೂಲಕ ಅನ್ನದಾಸೋಹ ಮೆರೆದರು.








