H Cross, Sidlaghatta : ವಿದ್ಯಾಜ್ಯೋತಿ ಪಬ್ಲಿಕ್ ಶಾಲೆಯಲ್ಲಿ ನೃತ್ಯ ಸ್ಫರ್ಧೆ ಅಂಕುರನ್ 2026ಮಕ್ಕಳು ವೈಜ್ಞಾನಿಕ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು. ಪ್ರತಿ ಆರಾಧನೆಯ ಹಿಂದೆಯೂ ಒಂದೊಂದು ವೈಜ್ಞಾನಿಕ ಸಂದೇಶವಿರುತ್ತದೆ. ಇದನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು ಎಂದು ಲೇಖಕಿ, ಪ್ರಗತಿಪರ ಚಿಂತಕಿ ಬಿ.ಟಿ. ಲಲಿತಾ ನಾಯಕ್ ತಿಳಿಸಿದರು.
ತಾಲ್ಲೂಕಿನ ಎಚ್. ಕ್ರಾಸ್ ಸಮೀಪದ ವಿದ್ಯಾಜ್ಯೋತಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ನೃತ್ಯ ಸ್ಫರ್ಧೆ ಅಂಕುರನ್ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗುತ್ತಿರುವುದು ಸಂತಸದ ವಿಷಯವಾಗಿದ್ದು ಗ್ರಾಮೀಣ ಭಾಗದ ಜನರು ಹೆಚ್ಚು ಸುಶಿಕ್ಷಿತರಾಗಲು ಸಾಧ್ಯವಾಗುತ್ತದೆ ಎಂದರು.
ಲೇಖಕ, ಶಿಕ್ಷಣ ತಜ್ಞ, ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್. ಶ್ರೀನಿವಾಸಮೂರ್ತಿ ಮಾತನಾಡಿ,
ವಿದ್ಯಾರ್ಥಿಗಳಾಗಿ ಶಾಲೆಗೆ ಬಂದವರನ್ನು, ಸಂಪನ್ಮೂಲ ವ್ಯಕ್ತಿಗಳನ್ನಾಗಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ವಿದ್ಯಾರ್ಥಿ ಎಷ್ಟೇ ಉನ್ನತ ಪದವಿ ಗಳಿಸಿದರೂ ಹೆತ್ತವರನ್ನು ದೂರವಾಗಿಸಿಕೊಳ್ಳದಂತಹ ಶಿಕ್ಷಣವನ್ನು ನೀಡಬೇಕು. ಮೌಲ್ಯಗಳಿಂದ ಕೂಡಿದ ಶಿಕ್ಷಣವೇ ನಿಜವಾದ ಶಿಕ್ಷಣ. ದೇವಾಲಯಗಳ ಮುಂದೆ ನಿಲ್ಲುವ ಸಾಲು ಗ್ರಂಥಾಲಯಗಳ ಮುಂದೆ ನಿಲ್ಲುವಂತಾಗಬೇಕು ಎಂಬ ಅಂಬೇಡ್ಕರ್ ರವರ ಮಾತಿನಂತೆ ಸಮಾಜ ತನ್ನ ಮನಸ್ಥಿತಿಯನ್ನು ಹೊಂದಬೇಕು ಎಂದರು.
ವಿದ್ಯಾಜ್ಯೋತಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಮಾತನಾಡಿ, ಮಕ್ಕಳು ಪಠ್ಯದಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಮಕ್ಕಳಲ್ಲಿನ ಕೌಶಲ್ಯಗಳನ್ನು ಹೊರ ತೆಗೆಯುವ ಕೆಲಸವನ್ನು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದರು.
ಇಂಟರ್ ಹೌಸ್ ಸ್ಪರ್ಧೆಗಳಲ್ಲಿ ಚಾಂಪಿಯನ್ ಆದ ಗರುಡ ತಂಡವನ್ನು ಟ್ರೋಫಿಯೊಂದಿಗೆ ಸನ್ಮಾನಿಸಲಾಯಿತು.
ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಮೂಲಕ ಅಭಿನಂದಿಸಲಾಯಿತು.
ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಉಷಾ, ಶಿಕ್ಷಕರು,, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.








