S Devaganahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಸ್. ದೇವಗಾನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-26 ನೇ ಸಾಲಿಗೆ 5 ವರ್ಷಗಳ ಅವಧಿಗೆ ಕಾರ್ಯಕಾರಿ ಸಮಿತಿಗೆ 12 ಸದಸ್ಯರು ಇತ್ತೀಚೆಗೆ ಅವಿರೋಧವಾಗಿ ಆಯ್ಕೆ ಆಗಿದ್ದರು.
ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದು ಅಧ್ಯಕ್ಷರಾಗಿ ಸಾಮಾನ್ಯ ವರ್ಗದ ಡಿ. ಆರ್. ಶ್ರೀನಿವಾಸಮೂರ್ತಿ, ಉಪಾಧ್ಯಕ್ಷರಾಗಿ ಎಸ್. ಸಿ. ಮೀಸಲು ಸ್ಥಾನದ ಲಕ್ಷ್ಮೀನರಸಮ್ಮ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತರು ಆಗಿದ್ದು ಉಪಾಧ್ಯಕ್ಷ ಜೆ ಡಿ ಎಸ್ ಬೆಂಬಲಿತರು ಆಗಿದ್ದಾರೆ ಎಂದು ಸಂಘದ ಕಾರ್ಯ ನಿರ್ವಹಣಧಿಕಾರಿ ಡಿ. ಜಿ. ರಾಘವೇಂದ್ರ ರಾವ್ ತಿಳಿಸಿದರು.
Appegowdanahalli, Sidlaghatta : ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ. ತ್ಯಾಗರಾಜ್ ತಮ್ಮ ಹೊಲದಲ್ಲಿ ಕೆಂಪು, ನೀಲಿ, ನೇರಳೆ ಮತ್ತು ಕಪ್ಪು ಬಣ್ಣದ ಮೆಕ್ಕೆಜೋಳವನ್ನು ಯಶಸ್ವಿಯಾಗಿ ಬೆಳೆದು ಗಮನ ಸೆಳೆದಿದ್ದಾರೆ. ಸಾಮಾನ್ಯ ಹಳದಿ ಅಥವಾ ಬಿಳಿ ಜೋಳಕ್ಕೆ ಕೃತಕ ಬಣ್ಣ ಬಳಿದ ಪ್ರಭೇದಗಳಲ್ಲದೆ, ವಾಸ್ತವದಲ್ಲೇ ಬಣ್ಣಗಳ ವೈವಿಧ್ಯ ಹೊಂದಿರುವ ಈ ಜೋಳವನ್ನು ಮೆಕ್ಸಿಕೋ ಹಾಗೂ ಪೆರು ದೇಶಗಳಿಂದ ತಂದ ಬಿತ್ತನೆ ಬೀಜಗಳಿಂದ ಬೆಳೆಸಿದ್ದಾರೆ.
ಹತ್ತು ಗುಂಟೆ ಜಮೀನಿನಲ್ಲಿ ನಾಲ್ಕು ತಿಂಗಳ ಹಿಂದೆ ನಾಟಿ ಮಾಡಿದ ಈ ಜೋಳಕ್ಕೆ ಸಾವಯವ ಗೊಬ್ಬರವನ್ನು ಬಳಸಿ ಬೆಳೆಸಲಾಗಿದ್ದು, ಪ್ರತಿ ಗಿಡಕ್ಕೆ ಎರಡು-ಮೂರು ತೆನೆ ಬಿಡುವುದರಿಂದ ಉತ್ತಮ ಇಳುವರಿ ದೊರೆತಿದೆ. ಪ್ರಸ್ತುತ ಸುಮಾರು 150 ಕೆ.ಜಿ. ಕಾಳುಗಳನ್ನು ತ್ಯಾಗರಾಜ್ ಪಡೆದುಕೊಂಡಿದ್ದು, ಸುತ್ತಮುತ್ತಲಿನ ರೈತರು ಈ ವಿಶೇಷ ಬೆಳೆ ನೋಡಲು ಆಗಮಿಸುತ್ತಿದ್ದಾರೆ.
ಇತಿಹಾಸದಲ್ಲೇ 3000 ವರ್ಷಗಳ ಹಿಂದೆ ದಕ್ಷಿಣ ಅಮೆರಿಕದಲ್ಲಿ ಬೆಳೆದಿದ್ದ ಈ ಬಣ್ಣದ ಜೋಳಗಳು, ಅಲ್ಲಿ ಜನರ ಮುಖ್ಯ ಆಹಾರವಾಗಿದ್ದವು. ಮಿಜೋರಾಂ ರಾಜ್ಯದಲ್ಲಿಯೂ ಇಂದಿಗೂ ಈ ಜೋಳಗಳನ್ನು ‘ಮಿಮ್ ಬಾನ್’ ಎಂದು ಕರೆಯುತ್ತಾ ಆಹಾರವಾಗಿ ಬಳಸುತ್ತಾರೆ. ಸಿಹಿ ಮತ್ತು ಒಗರಿನ ರುಚಿಯುಳ್ಳ ಈ ಜೋಳದಲ್ಲಿ ಕಬ್ಬಿಣಾಂಶ, ವಿಟಮಿನ್ಗಳು ಹಾಗೂ ಆಂಥೋಸಯಾನಿನ್ಗಳಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ರಕ್ತಹೀನತೆ ನಿವಾರಣೆ, ಮಧುಮೇಹ ನಿಯಂತ್ರಣ, ಉರಿಯೂತ ಕಡಿಮೆಗೊಳಿಸುವುದರ ಜೊತೆಗೆ ನರಮಂಡಲ ಮತ್ತು ಕಣ್ಣಿನ ಆರೋಗ್ಯಕ್ಕೂ ಸಹಕಾರಿ ಎಂದು ತಿಳಿದುಬಂದಿದೆ.
ಪೆರು ದೇಶದಲ್ಲಿ ಈ ಬಣ್ಣದ ಜೋಳದಿಂದ ಚೀಚಾ ಮೊರಾಡ ಎಂಬ ಪಾನೀಯ ತಯಾರಿಸಲಾಗುತ್ತಿದ್ದು, ಜಾಗತಿಕವಾಗಿ “ಸೂಪರ್ ಫುಡ್” ಎಂದು ಪ್ರಸಿದ್ಧಿ ಪಡೆದಿದೆ. “ಈ ತಳಿಯನ್ನು ಅಭಿವೃದ್ಧಿ ಪಡಿಸಿ, ನಮ್ಮ ಭಾಗದ ರೈತರಿಗೆ ಪರಿಚಯಿಸುವುದು ನನ್ನ ಉದ್ದೇಶ. ಮಾರುಕಟ್ಟೆಯಲ್ಲಿ ಸಹ ಇವುಗಳಿಗೆ ಉತ್ತಮ ಬೇಡಿಕೆ ಇದೆ” ಎಂದು ರೈತ ತ್ಯಾಗರಾಜ್ ಅಭಿಪ್ರಾಯಪಟ್ಟರು.
Sidlaghatta : ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ 21.36 ಲಕ್ಷ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿ ತೋಕಲಘಟ್ಟ ಗ್ರಾಮದ ಅನಿಲ್ ಕುಮಾರ್ ಬಂಧಿತ ಆರೋಪಿ.
ತಾಲ್ಲೂಕಿನ ಜಂಗಮಕೋಟೆಯ ಗೋಪಾಲಕೃಷ್ಣ ಅವರಿಗೆ ಪರಿಚಯವಾಗಿದ್ದ ಅನಿಲ್ ಕುಮಾರ್, ತಾನು ಕೆಪಿಎಸ್ಸಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದೇನೆ, ನಿಮ್ಮ ಮಗನಿಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 21,36,000 ರೂ. ಪಡೆಯುತ್ತಿದ್ದ. ಆದರೆ, ವಾಗ್ದಾನ ಮಾಡಿದಂತೆ ನೌಕರಿ ಕೊಡಿಸದ ಕಾರಣ ಗೋಪಾಲಕೃಷ್ಣ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅನಿಲ್ ಕುಮಾರ್ನ್ನು ಹೊಸಕೋಟೆ ತಾಲ್ಲೂಕಿನ ಮಲ್ಲಿಮಾಕಲಹಳ್ಳಿ ಬಳಿ ಬಂಧಿಸಿ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ, ಪಡೆದ ಹಣವನ್ನು ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಿನಲ್ಲಿ ಕಳೆದುಕೊಂಡಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ.
ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾದ ಆರೋಪಿ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಎಸ್ಐ ಕೆ.ಸತೀಶ್ ಹಾಗೂ ಸಿಬ್ಬಂದಿ ಸಂದೀಪ್ ಕುಮಾರ್, ವೆಂಕಟೇಶ್ ಮತ್ತು ಮಂಜುನಾಥ್ ಅವರ ಕಾರ್ಯಕ್ಷಮತೆಯನ್ನು ಎಸ್ಪಿ ಕುಶಲ್ ಚೌಕ್ಸೆ ಪ್ರಶಂಸಿಸಿದ್ದಾರೆ.
Sidlaghatta : ಶಿಡ್ಲಘಟ್ಟ ನಗರದ ಅಂಚಿನಲ್ಲಿರುವ ಗೌಡನಕೆರೆಗೆ ಮಣ್ಣು, ಕಸ, ಕಟ್ಟಡ ತ್ಯಾಜ್ಯ ಸುರಿದು ಕೆರೆ ಮುಚ್ಚಲಾಗುತ್ತಿದೆ ಮತ್ತು ಮಾಲಿನ್ಯಗೊಳಿಸಲಾಗುತ್ತಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ತಹಶೀಲ್ದಾರ್ ಗಗನ ಸಿಂಧು ಹಾಗೂ ನಗರಸಭೆ ಪೌರಾಯುಕ್ತೆ ಜಿ.ಅಮೃತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರೋತ್ಥಾನ ಹಂತ–4ರಲ್ಲಿ ರಾಜಕಾಲುವೆ ಸ್ವಚ್ಛತಾ ಕಾರ್ಯದಲ್ಲಿ ತೆಗೆದ ಹೂಳು-ಮಣ್ಣನ್ನು ಕೆರೆಯ ಅಂಚಿನಲ್ಲಿ ಸುರಿಯುತ್ತಿರುವ ಕುರಿತು ವರದಿಯಾಗಿತ್ತು. ಜೊತೆಗೆ ರೈತ ಸಂಘದ ನಾಯಕರು ಕೂಡ ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರಿಂದ, ಅಧಿಕಾರಿಗಳು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗೂ ತಂಡದೊಂದಿಗೆ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಬೈರೇಗೌಡ ಅವರು ಕೆರೆಗೆ ಕಸ ಸುರಿಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈಗಾಗಲೇ ತುಂಬಿದ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಬೇಕೆಂದು ಒತ್ತಾಯಿಸಿದರು. ನಗರಸಭೆ ನಿರ್ಮಿಸುತ್ತಿರುವ ಟ್ರಂಚ್ ಕುರಿತು ಆತಂಕ ವ್ಯಕ್ತಪಡಿಸಿದ ರೈತ ಮುಖಂಡರು, ಇದರಿಂದ ಅಪಘಾತದ ಅಪಾಯ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು. ಅವರು ಸಿಸಿಟಿವಿ ಅಳವಡಿಕೆ, ಬೇಲಿ ನಿರ್ಮಾಣ ಮತ್ತು ಕಾನೂನು ಕ್ರಮದ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪೌರಾಯುಕ್ತೆ ಅಮೃತ ಅವರು ತಾತ್ಕಾಲಿಕವಾಗಿ ಟ್ರಂಚ್ ಮೂಲಕ ಟ್ರ್ಯಾಕ್ಟರ್ ಸಂಚಾರ ತಡೆಗಟ್ಟಲಾಗುತ್ತದೆ ಆದರೆ ಬೇಲಿ ನಿರ್ಮಾಣಕ್ಕೆ ಅಗತ್ಯ ಬಜೆಟ್ ಲಭ್ಯವಿಲ್ಲವೆಂದರು. ತಹಶೀಲ್ದಾರ್ ಗಗನ ಸಿಂಧು ಅವರು ಕಟ್ಟಡ ತ್ಯಾಜ್ಯ ಸುರಿಸಿದ ಟ್ರ್ಯಾಕ್ಟರ್ಗಳ ಸಂಖ್ಯೆಯನ್ನು ಸಂಗ್ರಹಿಸಿದ್ದು, ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಕೆರೆಗೆ ಕಸ ಸುರಿಯದಂತೆ ನಿಗಾವಹಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಥಳೀಯ ರೈತ ಮುಖಂಡರಾದ ಬಿ.ನಾರಾಯಣಸ್ವಾಮಿ, ವೇಣುಗೋಪಾಲ್, ತಾದೂರು ಮಂಜುನಾಥ್, ಹಯ್ಯಾತ್ ಖಾನ್ ಸೇರಿದಂತೆ ಹಲವು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Sidlaghatta : ಮಂಡ್ಯದ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಮತ್ತು ಎಂಜಲು ಉಗುಳಿದ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಚೆಲುವರಾಜ್ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಗಣೇಶ ಹಬ್ಬವು ಹಿಂದೂಗಳ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಹಬ್ಬವಾಗಿದ್ದು, ಸಾರ್ವಜನಿಕ ಉತ್ಸವದ ರೂಪವನ್ನು ಶ್ರೀ ಬಾಲಗಂಗಾಧರ ತಿಲಕ್ ನೀಡಿದ ಬಳಿಕ ಇದು ಜನಸಾಮಾನ್ಯರ ಏಕತೆಗಾಗಿ ಆಚರಿಸಲಾಗುತ್ತಿದೆ ಎಂದು ಅವರು ಸ್ಮರಿಸಿದರು. ಇಂತಹ ಹಬ್ಬಕ್ಕೆ ಅಡ್ಡಿಯಾಗುವ ಘಟನೆಗಳು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯದ ಪರವಾಗಿ ಅತಿಯಾದ ಓಲೈಕೆ ಮಾಡುತ್ತಿದೆ ಎಂಬ ಆರೋಪ ಹೊರಿಸಿದ ಅವರು, ಧರ್ಮಗಳ ನಡುವೆ ವೈಷಮ್ಯ ಉಂಟಾಗುವುದು ಅಭಿವೃದ್ದಿಗೆ ಮಾರಕ ಎಂದು ಎಚ್ಚರಿಸಿದರು. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ತಹಸೀಲ್ದಾರ್ ಗಗನ ಸಿಂಧೂ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಭಜರಂಗ ದಳ ಸಂಯೋಜಕ ವೆಂಕೋಬರಾವ್, ವಿಶ್ವ ಹಿಂದೂ ಪರಿಷತ್ ಸಹಕಾರ್ಯದರ್ಶಿ ನರೇಶ್ಯಾದವ್, ಡಿ.ಆರ್.ನಾರಾಯಣಸ್ವಾಮಿ, ಮಹೇಶ್, ರಮೇಶ್ ಹಾಗೂ ಜಯಂತಿಗ್ರಾಮ ನಾರಾಯಣಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.
Sidlaghatta : ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಪರಿಶ್ರಮದಿಂದಲೇ ಚಿಕ್ಕಬಳ್ಳಾಪುರ ಮತ್ತು ಕೋಲಾರ ನಡುವೆ ನ್ಯಾರೋ ಗೇಜ್ ರೈಲು ಮಾರ್ಗ ಆರಂಭವಾಯಿತು ಎಂದು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ರೂಪಸಿ ರಮೇಶ್ ನೆನಪಿಸಿಕೊಂಡರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ನಿಂದ ಆಯೋಜಿಸಲಾದ “ಕನ್ನಡ ನಡೆ ಶಾಲೆಗಳ ಕಡೆ” ಅಭಿಯಾನದಡಿ ನಡೆದ ವಿಶ್ವೇಶ್ವರಯ್ಯ ಜಯಂತಿ ಮತ್ತು ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವೇಶ್ವರಯ್ಯನವರ ಕೊಡುಗೆ ಇಡೀ ಜಗತ್ತಿಗೂ ಹರಡಿದೆಯಾದರೂ, ತಮ್ಮ ಹುಟ್ಟೂರಿನಲ್ಲಿ ನದಿ-ನಾಲೆಗಳಿಲ್ಲದ ಕಾರಣ ಅವರಿಗೆ ನೋವು ಉಂಟಾಗುತ್ತಿತ್ತು. ಕೊನೆಗೆ ಮೈಸೂರು ಮಹಾರಾಜರನ್ನು ಮನವೊಲಿಸಿ ತಮ್ಮ ಹುಟ್ಟೂರಿಗೆ ರೈಲು ಮಾರ್ಗವನ್ನು ತಂದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ. ನಾಗರಾಜ್ರಾವ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯ ಹಾದಿ, ಅದರ ಕೊಡುಗೆ ಮತ್ತು ಕನ್ನಡ ನಾಡು-ನುಡಿ-ನೆಲ-ಜಲ ರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳಿದರು. ಕನ್ನಡಿಗರು ಜಾತಿ, ಧರ್ಮ, ಪಕ್ಷ ಭೇದಗಳನ್ನು ಮೀರಿಸಿ ಕನ್ನಡಕ್ಕಾಗಿ ಒಗ್ಗೂಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕರಾದ ನಾಗರತ್ನಮ್ಮ, ಎಚ್. ತಾಜೂನ್, ಕೆ. ಬೃಂದ, ಎಂ. ವೆಂಕಟರೆಡ್ಡಿ, ಎಂ.ಕೆ. ಸಿದ್ದರಾಜು, ಬಿ. ಮುನಿರಾಜು, ಎಸ್.ವಿ. ಅಮರನಾಥ್, ಜಿ. ಲತಾ, ಎಂ. ಮುನಿಯಪ್ಪ ಮತ್ತು ವೆಂಕಟಲಕ್ಷ್ಮಮ್ಮ ಅವರಿಗೆ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಸಿ. ವೆಂಕಟಶಿವಾರೆಡ್ಡಿ, ಎನ್ಎಸ್ಎಸ್ ಅಧಿಕಾರಿ ಎಚ್.ಸಿ. ಮುನಿರಾಜು ಹಾಗೂ ಗಣ್ಯರು ಹಾಜರಿದ್ದರು.
Sidlaghatta : ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ SSLC, PUC ಯಲ್ಲಿ ಆಯಾ ಜಿಲ್ಲೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನಗದು ಹಣದೊಂದಿಗೆ ನಡೆಸಿಕೊಟ್ಟು ಪ್ರೋತ್ಸಾಹಿಸಲಾಗುತ್ತಿದೆ ಎಂದು ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ತಿಳಿಸಿದರು.
ತಾಲ್ಲೂಕಿನ ತಲಕಾಯಲಬೆಟ್ಟ ಬ್ರಾಹ್ಮಣ ಸಂಘಕ್ಕೆ 50 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ತಲಕಾಯಲಬೆಟ್ಟದ ಶ್ರೀಭೂನೀಳಾ ಸಮೇತ ಶ್ರೀವೆಂಕಟರಮಣಸ್ವಾಮಿ ದೇವಾಲಯ ಆವರಣದಲ್ಲಿ ಕೀರ್ತಿಶೇಷ ಪಲಿಚೇರ್ಲು ಪಿ.ಎಸ್.ಕೃಷ್ಣಮೂರ್ತಿರಾವ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕಾಗಿ 12 ಕೋಟಿ ರೂ ಅನುದಾನ ಇದೆ. ರಾಜ್ಯದ ಉದ್ದಗಲಕ್ಕೂ ಪ್ರತಿ ವರ್ಷ ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಸ್ವಯಂ ಉದ್ಯೋಗಕ್ಕಾಗಿ ಮಂಡಳಿಯಿಂದ 2 ಲಕ್ಷ ಸಾಲ ನೀಡಲಿದ್ದು ಶೇ 20ರಷ್ಟು ಅಂದರೆ 40 ಸಾವಿರ ರೂ ಸಬ್ಸಿಡಿ ನೀಡಲಾಗುವುದು. ಅಗತ್ಯ ಇರುವ ಎಲ್ಲರೂ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ದೀರ್ಘಾವಧಿ ಬಳಕೆಗಾಗಿ 100 ಕೋಟಿ ರೂಗಳ ಕಾರ್ಪಸ್ ನಿಧಿಯನ್ನು ಆರಂಭಿಸಲು ಚಿಂತನೆ ನಡೆದಿದೆ. ರಾಜ್ಯದಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಸಬಲರಾಗಿರುವ 10 ಸಾವಿರ ಮಂದಿಯನ್ನು ಗುರ್ತಿಸಿ ಅವರಿಂದ ತಲಾ 1 ಲಕ್ಷ ರೂ ನಿಧಿ ಸಂಗ್ರಹಿಸಲಾಗುವುದು. ಈಗಾಗಲೆ 60 ಮಂದಿಯಿಂದ 60 ಲಕ್ಷ ರೂ ನಿಧಿ ಸಂಗ್ರಹಿಸಿದ್ದು ನಿಧಿ ಸಂಗ್ರಹ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು.
ಪ್ರೇರಕ ಭಾಷಣಕಾರ, ಚಿಂತಕ ವೈ.ವಿ.ಗುಂಡೂರಾವ್ ಮಾತನಾಡಿ, ಬ್ರಾಹ್ಮಣತ್ವ ನಮ್ಮ ಮನೆಯಲ್ಲಿರಬೇಕು, ಮನೆಯ ಹೊಸಿಲಿನಿಂದ ಆಚೆ ಆಚರಣೆ ಸಲ್ಲದು ಎಂದರು.
ನಾವೆಲ್ಲರೂ ಹಿಂದೂಗಳು, ಬ್ರಾಹ್ಮಣ ಎಂದರೆ ಅದು ಒಂದು ಜಾತಿ ಧರ್ಮ ಅಲ್ಲ, ಜ್ಞಾನ ಇರುವ ಎಲ್ಲರೂ ಬ್ರಾಹ್ಮಣರೆ. ನಾವು ನಮ್ಮ ಧರ್ಮವನ್ನು ಉಳಿಸಿಕೊಂಡು ಎಲ್ಲರನ್ನೂ ಜತೆಗೂಡಿಸಿಕೊಂಡು ಸಮಾಜದಲ್ಲಿ ಸಾಗಬೇಕು, ಬ್ರಾಹ್ಮಣರು ಸಮಾಜದ ನಾಯಕತ್ವವನ್ನು ವಹಿಸಿಕೊಳ್ಳಬೇಕು. ನಾವು ಚೆನ್ನಾಗಿದ್ದು, ಇತರರ ಹಿತ ಬಯಸುವವನೆ ಬ್ರಾಹ್ಮಣ ಎಂದರು.
ವಂದೇ ಮಾತರಂ ಪಾಠಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ.ಜಿ.ಬಿ.ಹರೀಶ್ ಅವರು ಪ್ರೇರಣಾ ಭಾಷಣ ಮಾಡಿದರು. ನೀಹಾರಿಕಾ ಅವರ ಭರತನಾಟ್ಯ ಗಮನ ಸೆಳೆಯಿತು. ತಲಕಾಯಲಬೆಟ್ಟ ಬ್ರಾಹ್ಮಣ ಸಂಘದ ಅಧ್ಯಕ್ಷ ಶಂಕರ್ ದಂಪತಿ ಸೇರಿದಂತೆ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. ಮಹಿಳಾ ಸಂಘದಿಂದ ನಡೆದ ಕ್ರೀಡಾ ಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಲಕಾಯಲಬೆಟ್ಟ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಆರ್.ಶಂಕರ್ ಅಧ್ಯಕ್ಷತೆವಹಿಸಿದ್ದರು. ಮಾಜಿ ಸಚಿವ ವಿ.ಮುನಿಯಪ್ಪ, ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದ ಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಪುಟ್ಟು ಆಂಜಿನಪ್ಪ, ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಜಿಲ್ಲಾ ಪ್ರತಿನಿಧಿ ಪಲಿಚೇರ್ಲು ಪ್ರಕಾಶ್, ಶಂಕರ ಸೇವಾ ಸಮಿತಿ ಅಧ್ಯಕ್ಷ ಮೋಕ್ಷಗುಂಡಂ ಸೂರ್ಯಕುಮಾರ್, ಗಾಯಿತ್ರಿ ಮಹಿಳಾ ಮಂಡಳಿ ಆಧ್ಯಕ್ಷ ವಿಜಯಲಕ್ಷ್ಮಿ, ಡಾ.ಡಿ.ಟಿ.ಸತ್ಯನಾರಾಯಣರಾವ್, ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹಾಜರಿದ್ದರು.
Sidlaghatta : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬವನ್ನು ಸೆ.17ರಂದು ಆಚರಿಸಲಿದ್ದು ಹುಟ್ಟು ಹಬ್ಬದ ಅಂಗವಾಗಿ ವಿವಿಧ ಸೇವಾ ಕಾರ್ಯಗಳನ್ನು 15 ದಿನಗಳ ಕಾಲ ನಿರಂತರವಾಗಿ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸೆ.17ರಂದು ನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಆಚರಿಸಲಿದ್ದು ಅಂದು ರಕ್ತದಾನ ಶಿಬಿರ, ಸ್ವಚ್ಚತಾ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರವನ್ನು ಕೂಡ ಹಮ್ಮಿಕೊಂಡಿದ್ದೇವೆ. ಅಂದೇ ಪ್ರಧಾನಿ ಮೋದಿ ಅವರ ಜೀವನ ಆಧಾರಿತ ಕಿರು ಚಿತ್ರ ಪ್ರದರ್ಶನ ನಡೆಯಲಿದೆ ಎಂದರು.
ಸೆ.19ರಂದು ಪ್ರಬುದ್ಧರಿಂದ ವಿಚಾರ ಗೋಷ್ಠಿ, ಸಾಕ್ಷ್ಯ ಚಿತ್ರ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, 21ರಂದು ಮೋದಿ ವಿಕಾಸ್ ಮ್ಯಾರಾಥಾನ್ ನಡಿಗೆ ಜಾಥಾ, ಸಂಸದ್ ಖೇಲ್ ಕ್ರೀಡಾ ಸ್ಪರ್ಧೆ, 25ರಂದು ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಹಾಗೂ ವೋಕಲ್ ಫಾರ್ ಲೋಕಲ್ ಅಭಿಯಾನವೂ ನಡೆಯಲಿದೆ.
ಸೆ.27ರಂದು ದಿವ್ಯಾಂಗರು ಮತ್ತು ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ, ಅ.2ರಂದು ಮಹಾತ್ಮಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಹಾಗೂ ವಿಕಸಿತ ಭಾರತ ಕುರಿತು ಚಿತ್ರ ಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು, ದೇಶ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.