ಬಾಣಂತಿಯಲ್ಲಿ ಉಪಯೋಗವಾಗುವ ಕೆಲವು ಔಷಧಿಗಳು
ದಶಮೂಲ ಕಷಾಯ
ದಶಮೂಲಾರಿಷ್ಠ
ಜೀರಕಾದ್ಯರಿಷ್ಠ
ಸಹಚರಾದಿ ಕಷಾಯ
ಸೌಭಾಗ್ಯ ಶುಂಠಿ ಅವಲೇಹ್ಯ
ವೈದ್ಯರ ಸಲಹೆಯ ಮೇರೆಗೆ ಇವುಗಳನ್ನು ಉಪಯೋಗಿಸಬೇಕು.
ಬಾಣಂತಿಯರಿಗೆ ಕಿವಿ ಮಾತು
1. ಅತಿಯಾಗಿ ಭಾರವನ್ನು ಎತ್ತುವುದು, ತುಂಬಾ ಹೊತ್ತು ಕುಳಿತ ಭಂಗಿಯಲ್ಲಿಯೇ ಇರುವುದು, ತುಂಬಾ ಹೊತ್ತು ನಿಂತಿರುವುದು ಸಲ್ಲದು.
2. ಅತಿಯಾತಿ ಗಟ್ಟಿ ಧ್ವನಿಯಲ್ಲಿ ಮಾತನಾಡುವುದು, ಓದುವುದು, ದೂರದರ್ಶನ, ಕಂಪ್ಯೂಟರ್ ವೀಕ್ಷಣೆ, ಮೊಬೈಲ್ ಬಳಕೆ ಕೂಡ ನಿಷಿದ್ಧ.
3. ಸಿಟ್ಟು, ದು:ಖ, ಬೇಸರ ಕೂಡ ಈ ಸಮಯದಲ್ಲಿ ಸೂಕ್ತವಲ್ಲ. ಇದು ಎದೆ ಹಾಲನ್ನು ಕ್ಷೀಣಗೊಳಿಸುವುದಲ್ಲದೆ ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹದಗೆಡಿಸುವುದು.
4. ಮುಗಿವಿನೆಡೆಗೆ ಪ್ರೀತಿ, ಕಾಳಜಿಯನ್ನು ಬಳಸಿಕೊಳ್ಳಬೇಕು. ಇದೂ ಕೂಡ ಸ್ತನ್ಯ ವರ್ಧನೆಗೆ ಸಹಾಯಕ.
5. ಮಗುವಿಗೆ ಸ್ತನ್ಯಪಾನ ಮಾಡಿಸುವಾಗ ತಾಯಂದಿರು ಋಣಾತ್ಮಕ ವಿಚಾರಗಳನ್ನು ಮಾಡದೆ, ಒಳ್ಳೆಯ ವಿಚಾರಗಳನ್ನು ಮಾಡಬೇಕು. ದೇವರ ಸ್ಮರಣೆ, ಸ್ತೋತ್ರಗಳ ಪಠಣ ಕೂಡ ಈ ಸಮಯದಲ್ಲಿ ಒಳ್ಳೆಯದು. ಋಣಾತ್ಮಕ ವಿಚಾರಗಳು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
6. ಬಾಣಂತಿಯರು ಸ್ನಾನ, ಶೌಚ ಹಾಗೂ ಇನ್ನಿತರೇ ಕಾರ್ಯಗಳಿಗೆ ಬಿಸಿ ನೀರಿನ ಬಳಕೆ ಮಾಡುವುದು ಅಗತ್ಯ.
7. ದೇಹ ಶಿಥಿಲಗೊಂಡಿರುವುದರಿಂದ ಬಾಣಂತಿಯರಿಗೆ ನಿದ್ದೆ ಅತೀ ಅವಶ್ಯಕ. ಮಗು ಮಲಗಿರುವ ಸಮಯದಲ್ಲಿಯೇ ತಾಯಂದಿರೂ ನಿದ್ರಿಸುವುದು ಉತ್ತಮ.
ಹಿರಿಯರಿಗೆ ಕಿವಿ ಮಾತು
1. ಬಾಣಂತನದ ಅವಧಿಯಲ್ಲಿ ಹೆಣ್ಣಿನ ದೇಹ ಹಾಗೂ ಮನಸ್ಸುಗಳು ಅತೀ ಸೂಕ್ಷ್ಮವಾಗಿರುತ್ತವೆ. ಈ ಸಮಯದಲ್ಲಿ ಅವರನ್ನು ಪ್ರೀತಿ, ವಿಶ್ವಾಸ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು.
2. ಒಳ್ಳೆಯ ವಿಚಾರಗಳನ್ನು ಅವರ ಮನಸ್ಸಿನಲ್ಲಿ ತುಂಬಬೇಕು ಧೈರ್ಯ ಹೇಳುವುದು ಒಳ್ಳೆಯದು.
3. ಏಕಾಂಗಿತನವನ್ನು ಹೋಗಲಾಡಿಸುವುದಲ್ಲದೆ, ಎಲ್ಲರೂ ಜೊತೆಗಿರುವ ಭಾವವನ್ನು ಅವರಲ್ಲಿ ತುಂಬಬೇಕು.
4. ಮಗುವಿನ ಜವಾಬ್ದಾರಿಯನ್ನು ವಹಿಸಿಕೊಂಡು ತಾಯಂದಿರಿಗೆ ನಿದ್ರಿಸಲು ಅವಕಾಶ ಮಾಡಿಕೊಡಬೇಕು.
ಬಾಣಂತಿಯರಲ್ಲಿ ಕಂಡು ಬರುವ ಸಾಮಾನ್ಯ ರೋಗಗಳು
1. ಜ್ವರ: ಅಮೃತ ಬಳ್ಳಿಯ ಚೂರ್ಣ, ಕಾಂಡ ಅಥವಾ ರಸವನ್ನು ಕಷಾಯ ಮಾಡಿ ಸೇವಿಸುವುದರಿಂದ ಜ್ವರವು ಕಡಿಮೆಯಾಗುವುದು. ಕಷಾಯ ಮಾಡುವಾಗ ಅರ್ಧ ಚಮಚ ಚೂರ್ಣ ಅಥವಾ ಒಂದು ಚಮಚ ರಸವನ್ನು ಎರಡು ಲೋಟ ನೀರಿನೊಂದಿಗೆ ತೆಗೆದುಕೊಂಡು ಚೆನ್ನಾಗಿ ಕುದಿಸಿ, ಅರ್ಧದಷ್ಟು ನೀರು ಉಳಿಯುವವರೆಗೆ ಕುದಿಸಿ, ಅನಂತರ ಶೋಧಿಸಿ ಕುಡಿಯಲು ಕೊಡಬೇಕು.
2. ಕೆಮ್ಮು: ಕೆಮ್ಮಿನಲ್ಲಿ ಎರಡು ವಿಧ. ಅ. ಒಣ ಕೆಮ್ಮು ಹಾಗೂ ಆ. ಕಫಯುಕ್ತ ಕೆಮ್ಮು.
ಅ. ಒಣ ಕೆಮ್ಮು: 1. ದ್ರಾಕ್ಷಿ ಹಾಗೂ ಕೆಂಪು ಕಲ್ಲು ಸಕ್ಕರೆಯನ್ನು ಬಾಯಿಯಲ್ಲಿ ಜಗಿಯುವುದರಿಂದ ಒಣ ಕೆಮ್ಮು ಕಡಿಮೆಯಾಗುವುದು.
2. ಜೇಷ್ಠಮಧುವಿನ ಕ್ಷೀರಪಾಕವನ್ನು ಕುಡಿಯುವುದರಿಂದಲೂ ಒಣ ಕೆಮ್ಮು ಕಡಿಮೆಯಾಗುವುದು.
ಮಾಡುಮ ವಿಧಾನ: 1/2 ಚಮಚ ಜೇಷ್ಠಮಧುವಿನ ಪುಡಿ, ಒಂದು ಲೋಟ ಹಾಲು, ಒಂದು ಲೋಟ ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ ಒಂದು ಲೋಟ ಹಾಲಿನ ಪ್ರಮಾಣಕ್ಕೆ ಇಳಿಸಿ ಶೋಧಿಸಿ ಸೇವಿಸಬೇಕು.
ಆ. ಕಫಯುಕ್ತ ಕೆಮ್ಮು: 1. ಬಿಸಿ ಹಾಲಿಗೆ ಚಿಟಿಕೆಯಷ್ಟು ಮೆಣಸಿನ ಕಾಳಿನ ಪುಡಿ, ಅರಿಶಿಣ ಹಾಗೂ ಅರ್ಧ ಚಮಚ ತುಪ್ಪ ಹಾಕಿ ಸೇವಿಸುವುದು ಅಥವಾ ತುಳಸಿಯ ರಸಕ್ಕೆ ಜೇನನ್ನು ಸೇರಿಸಿ ಚಮಚದಷ್ಟು ಸೇವಿಸುವುದು.
2. ದೊಡ್ಡ ಪತ್ರೆಯನ್ನು ಸ್ವಲ್ಪ ಬಿಸಿ ಮಾಡಿ ರಸವನ್ನು ತೆಗೆದು 2 ಚಮಚ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಉತ್ತಮ.
3. ಮಲಬದ್ಧತೆ
1. ಒಣ ದ್ರಾಕ್ಷಿ, ಸೊಪ್ಪು, ತರಕಾರಿಗಳ ಸೇವನೆ ಅಗತ್ಯ.
2. ಒಣ ಶುಂಠಿಯ ಪುಡಿಯನ್ನು ಬೆಲ್ಲದೊಂದಿಗೆ ಸೇರಿಸಿ ಊಟಕ್ಕೆ ಮುಂಚೆ ಅರ್ಧ ಚಮಚದಷ್ಟು ಸೇವಿಸಬೇಕು.
3. ಬಿಸಿ ಹಾಲಿಗೆ ಮೆಣಸಿನಕಾಳಿನ ಪುಡಿ, ಅರ್ಧ ಚಮಚದಷ್ಟು ತುಪ್ಪ ಸೇರಿಸಿ ಸೇವಿಸುವುದು.
4. ಭೇದಿ
1. ಬಾಣಂತಿಯಲ್ಲಿ ಕಂಡು ಬರುವ ಭೇದಿಯ ನಿವಾರಣೆಯಲ್ಲಿ ಕೊನ್ನಾರಿಗಡ್ಡೆ, ಜೀರಿಗೆ ಹಾಗೂ ಕೊತ್ತಂಬರಿ ಬೀಜದಿಂದ ಮಾಡಿದ ಕಷಾಯವನ್ನು ಸೇವಿಸಬೇಕು.
5. ಮೈ ಕೈ ನೋವು
1. ನಿರ್ಗುಂಡಿ ಸೊಪ್ಪಿನಿಂದ ಮಾಡಿದ ಕಷಾಯವನ್ನು ಸೇವಿಸುವುದರಿಂದ ಮೈ, ಕೈ ನೋವು ಕಡಿಮೆಯಾಗುವುದು. ಹಾಗೆಯೇ ನೋವಿರುವ ಜಾಗಕ್ಕೆ ಲಕ್ಕಿ ಗಿಡದ ಸೊಪ್ಪನ್ನು ಜೇನಿನೊಂದಿಗೆ ಹಚ್ಚುವುದರಿಂದ ನೋವು ಶಮನವಾಗುವುದು.
2. ಬಾಣಂತಿಯರನ್ನು ಕಾಡುವ ಸೊಂಟ ನೋವಿಗೆ, ಎರಡು ಎಸಳು ಬೆಳ್ಳುಳ್ಳಿಯನನ್ನು ತುಪ್ಪದಲ್ಲಿ ಹುರಿದು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸೊಂಟ ಹಾಗೂ ಮೈಕೈ ನೋವುಗಳು ನಿವಾರಣೆಯಾಗುತ್ತವೆ.
ಹೆಣ್ಣಿನ ಜೀವನದಲ್ಲಿ ತಾಯ್ತನ ಎನ್ನುವುದು ಒಂದು ಹಂತ. ಈ ಹಂತದಲ್ಲಿ ಆರೈಕೆ, ಪೋಷಣೆಯ ಜೊತೆಗೆ ಜಾಗರೂಕತೆಯೂ ಅವಶ್ಯಕ. ಈ ಹಂತದಲ್ಲಿ ಸ್ವಲ್ಪ ಅಜಾಗರೂಕತೆಯೂ ಕೂಡ ಜೀವನ ಪರ್ಯಂತ ಅನುಭವಿಸುವ ರೋಗಗಳನ್ನುಂಟು ಮಾಡಬಹುದು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಾಣಂತಿಯ ಆರೈಕೆ ಮಾಡುವುದು ಅಗತ್ಯ.
ಡಿ.ವಿ.ಜಿ.ಯವರು ತಮ್ಮ “ಮಂಕು ತಿಮ್ಮನ ಕಗ್ಗ” ದಲ್ಲಿ ಈ ರೀತಿ ಹೇಳಿದ್ದಾರೆ.
“ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ
ಅನುವಪ್ಪುದೊಂದೊಂದು ರೋಗಕೊಂದೊಂದು
ನಿನಗಮಾತೆಯೆ ನೂರು ನೀತಿ ಸೂತ್ರಗಳಿರಲು
ಅನುವನರಿವುದೆ ಜಾಣು ಮಂಕುತಿಮ್ಮ”
ಮೆಣಸು, ಹಿಪ್ಪಲಿ, ಶುಂಠಿ, ಜೀರಿಗೆ ಹೀಗೆ ಹಲವಾರು ರೀತಿಯ ಆಹಾರ ದ್ರವ್ಯಗಳು ಹಾಗೂ ಔಷಧ ದ್ರವ್ಯಗಳು ನಮ್ಮಲ್ಲಿವೆ. ದೇಶ, ಕಾಲ, ಪ್ರಕೃತಿ, ರೋಗಗಳಿಗನುಗುಣವಾಗಿ ಅವುಗಳ ಬಳಕೆಯನ್ನು ಮಾಡಿ ಜಾಣರಾಗೋಣ ಎನ್ನುವುದು ಇದರ ತಾತ್ಪರ್ಯ.
ಆಯುರ್ವೇದವು ಬಾಣಂತಿಯ ಆರೈಕೆಯಲ್ಲಿ ನಂಬಿಕೆ ಇಟ್ಟಿರುವ ದೇಶ, ಹಾಗೂ ಕಾಲಕ್ಕೂ ಮಹತ್ವ ನೀಡುತ್ತದೆ. ಶೀತಲ ಪ್ರದೇಶದಲ್ಲಿ ವಾಸಿಸುತ್ತಿರುವ ಬಾಣಂತಿಯರಿಗೆ ಎಣ್ಣೆ, ತುಪ್ಪ ಇತ್ಯಾದಿಗಳನ್ನು ಜೀರ್ಣ ಶಕ್ತಿ ಸರಿಯಾದ ಮೇಲೆ ಕೊಡಬೇಕು. ಒಣ ಪ್ರದೇಶದಲ್ಲಿ ವಾಸಿಸುವ ಬಾಣಂತಿಯರಿಗೆ ಜೀರ್ಣ ಶಕ್ತಿ ಇದ್ದಲ್ಲಿ ಎಣ್ಣೆ, ತುಪ್ಪ ಇತ್ಯಾದಿಗಳನ್ನು ಶುಂಠಿ, ಹಿಪ್ಪಲಿ ಇತ್ಯಾದಿಗಳ ಜೊತೆ ಕೊಡುವುದು ಹಿತಕರ.
ಮುಗಿಯಿತು.
ಡಾ. ನಾಗಶ್ರೀ. ಕೆ.ಎಸ್.
- Advertisement -
- Advertisement -
- Advertisement -
- Advertisement -