ರೇಷ್ಮೆ ಮತ್ತು ಹೈನುಗಾರಿಕೆಯನ್ನು ನಂಬಿರುವ ತಾಲ್ಲೂಕಿನಲ್ಲಿ ರೈತರು ಸಂಪಾದಿಸುವಷ್ಟೇ ಹಣವನ್ನು ಅಧಿಕಾರಿ ವರ್ಗದವರು ಸಂಪಾದಿಸುತ್ತಾರೆ. ಆದರೆ ಅಧಿಕಾರಿಗಳಲ್ಲಿ ಬಹುತೇಕರು ಶಿಡ್ಲಘಟ್ಟದಲ್ಲಿ ವಾಸಿಸುವುದಿಲ್ಲ. ಇಲ್ಲಿ ದುಡಿದು ನೆರೆಯ ತಾಲ್ಲೂಕಿನಲ್ಲಿ ಖರ್ಚು ಮಾಡುತ್ತಾರೆ. ಅಧಿಕಾರಿಗಳು ನಮ್ಮೂರಲ್ಲಿಯೇ ವಾಸಿಸಿದರೆ ನಮ್ಮೂರು ಇನ್ನಷ್ಟು ಅಭಿವೃದ್ಧಿ ಆಗುತ್ತದೆ ಎಂದು ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಎ.ನಾಗರಾಜ್ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಶ್ರೀ ಮಲ್ಲೇ ಮಲ್ಲೇಶ್ವರ ಶಾಲಾ ವಾಹನ ಚಾಲಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ವಾಹನ ಚಾಲಕರ ಸಂಘದೊಳಕ್ಕೆ ಕ್ಲೀನರುಗಳನ್ನೂ ಸೇರಿಸಿಕೊಳ್ಳಿ. ಪ್ರತಿಯೊಬ್ಬರೂ ವಿಮೆಯನ್ನು ಮಾಡಿಸಿ. ಕೌಟುಂಬಿಕ ಭದ್ರತೆಗಾಗಿ ಸರ್ಕಾರದಿಂದ ಸಿಗುವ ಯೋಜನೆಗಳನ್ನು ಬಳಸಿಕೊಳ್ಳಿ. ಖಾಸಗಿ ಶಾಲೆಗಳ ಸಂಘವೂ ಸಹ ನಿಮ್ಮ ಬೆನ್ನೆಲುಬಾಗಿ ಸದಾ ಇರುತ್ತದೆ ಎಂಬುದನ್ನು ಮರೆಯದಿರಿ ಎಂದು ಹೇಳಿದರು.
ಖಾಸಗಿ ಶಾಲೆಗಳ ಸಂಘದ ಉಪಾಧ್ಯಕ್ಷ ಮಹಮದ್ ತಮೀಮ್ ಅನ್ಸಾರಿ ಮಾತನಾಡಿ, ಶಾಲಾ ವಾಹನ ಚಾಲಕರದ್ದು ಅತ್ಯಂತ ಜವಾಬ್ದಾರಿಯುತ ಸೇವಾ ಕಾರ್ಯವಾಗಿದೆ. ತಾಲ್ಲೂಕಿನಾದ್ಯಂತ 80 ಮಂದಿ ಶಾಲಾ ವಾಹನ ಚಾಲಕರಿದ್ದು, ಅವರಿಗೆ ಕನಿಷ್ಠ ವೇತನ ನಿಗದಿಪಡಿಸಲು ಖಾಸಗಿ ಶಾಲೆಗಳ ಸಂಘದಲ್ಲಿ ಚರ್ಚೆ ಮಾಡಿ ಸಹಾಯ ಮಾಡಲಾಗುವುದು. ಚಾಲಕರ ಕುಟುಂಬದ ಭದ್ರತೆಯೆಡೆಗೂ ಶಾಲೆಗಳ ಆಡಳಿತ ಮಂಡಳಿ ಬದ್ಧವಾಗಿದೆ ಎಂದರು.
ಕಾರ್ಮಿಕ ನಿರೀಕ್ಷಕ ಎಸ್.ವಿಶ್ವನಾಥ್ ಮಾತನಾಡಿ, ಅಸಂಘಟಿತ ವಲಯದ ಕಾರ್ಮಿಕರಾದ ಶಾಲಾ ವಾಹನ ಚಾಲಕರು ಮುಗ್ಧ ಶಾಲಾ ಮಕ್ಕಳ ಜವಾಬ್ದಾರಿಯನ್ನು ಹೊತ್ತಿದ್ದು, ತಮ್ಮ ಹಾಗೂ ತಮ್ಮ ಕುಟುಂಬದ ಕುರಿತಂತೆಯೂ ಚಿಂತಿಸಬೇಕು ಸರ್ಕಾರವು ಜಾರಿಗೆ ತಂದಿರುವ ಖಾಸಗಿ ವಾಣಿಜ್ಯ ವಾಹನ ಚಾಲಕರ ಉಚಿತ ವಿಮಾ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಸುಮಾರು 3,050 ಮಂದಿ ಖಾಸಗಿ ವಾಣಿಜ್ಯ ವಾಹನ ಚಾಲಕರು ನೋಂದಣಿ ಮಾಡಿಕೊಂಡಿದ್ದು, ತಾಲ್ಲೂಕಿನಲ್ಲಿ 450 ಮಂದಿ ಮಾತ್ರ ನೋಂದಣಿ ಮಾಡಿಸಿದ್ದಾರೆ. ಈ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿರುವವರಲ್ಲಿ ನಾಲ್ಕು ಮಂದಿ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದಾಗ ತಲಾ 2 ಲಕ್ಷ ರೂಗಳನ್ನು ಸರ್ಕಾರ ನೀಡಿದೆ. ಚಾಲಕರು ಒಂದು ಬಾರಿ ಮಾತ್ರ 25 ರೂ ನೋಂದಣಿ ಶುಲ್ಕವನ್ನು ಪಾವತಿಸಬೇಕು. ಸಂಪೂರ್ಣ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಈ ಬಗ್ಗೆ ಸಂಘವು ಸದಸ್ಯರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಬೃಂದಾ ಪಬ್ಲಿಕ್ ಶಾಲೆಯ ಅಧ್ಯಕ್ಷ ಬಿ.ಎನ್.ನಾಗರಾಜ್, ಖಾಸಗಿ ಶಾಲೆಗಳ ಸಂಘದ ಕಾರ್ಯದರ್ಶಿ ರಾಮಚಂದ್ರರೆಡ್ಡಿ, ಸಿಲ್ಕ್ಸಿಟಿ ದ್ವಿಚಕ್ರ ವಾಹನ ರಿಪೇರಿಗಾರರ ಸಂಘದ ಅಧ್ಯಕ್ಷ ಖಾದರ್ಪಾಷ, ಉಪಾಧ್ಯಕ್ಷ ಸಿಬತ್ಉಲ್ಲಬಾಬು, ತಾಲ್ಲೂಕು ಬಣ್ಣ ಪೇಂಟಿಂಗ್ ಕಾರ್ಮಿಕರ ಸಂಘದ ಅಧ್ಯಕ್ಷ ಸಲೀಂಪಾಷ, ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಶ್ರೀ ಮಲ್ಲೇ ಮಲ್ಲೇಶ್ವರ ಶಾಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಎಚ್.ಎನ್.ನಾಗರಾಜ, ಖಜಾಂಚಿ ಎಂ.ಮುನಿರಾಜು, ಸದಸ್ಯರಾದ ಎನ್.ಮಂಜುನಾಥ, ಎಂ.ದೇವರಾಜ್, ಕೃಷ್ಣಾರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -