ಎಲ್ಲಾ ವರ್ಗಗಳ, ವಿವಿಧ ಜಾತಿ ಪಂಥಗಳ ವೈವಿಧ್ಯಮಯವಾದ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಇಷ್ಟಪಡುವ ದೇವರು ಗಣಪತಿ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯ ಆವರಣದಲ್ಲಿ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಗಣೇಶ ಮೂರ್ತಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ ಪ್ರೇಮಿಯಾದಂತಹ ಮಣ್ಣಿನ ಅದರಲ್ಲೂ ಪೇಯಿಂಟ್ ಬಳಸದ ಗಣೇಶನ ಮೂರ್ತಿಗಳೊಂದಿಗೆ ಒಂದೊಂದು ಗಿಡವನ್ನು ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 200 ಬೂತ್ ಗಳಿಗೂ ಒಂದೊಂದು ಗಣೇಶನ ಮೂರ್ತಿಯನ್ನು ಉಚಿತವಾಗಿ ನೀಡುತ್ತಾ ಪರಿಸರ ಕಾಪಾಡುವ ಸಂದೇಶವನ್ನು ನೀಡಲಾಗುತ್ತಿದೆ. ಎಲ್ಲರೂ ಒಗ್ಗೂಡಿ ಆಚರಿಸುವ ಗಣೇಶನ ಹಬ್ಬದ ಸಂದರ್ಭದಲ್ಲಿ ಎಲ್ಲರಲ್ಲೂ ಸನ್ನಡತೆ, ಸದ್ಭುದ್ದಿ, ದೇಶಪ್ರೇಮ, ಪರಿಸರ ಕಾಳಜಿ ಮೂಡಲಿ ಎಂದು ಹೇಳಿದರು.
ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಿ.ಆರ್.ಶಿವಕುಮಾರಗೌಡ ಮಾತನಾಡಿ, ಹಲವು ವರ್ಷಗಳಿಂದ ಉಚಿತವಾಗಿ ಗಣೇಶನ ಮೂರ್ತಿಗಳನ್ನು ನೀಡುತ್ತಾ ಬಂದಿದ್ದು, ಈ ಬಾರಿ ಪರಿಸರ ಕಾಳಜಿಯಿಂದ ಮಣ್ಣಿನ ಗಣೇಶ ಹಾಗೂ ಗಿಡವನ್ನು ಪ್ರತಿಯೊಂದು ಬೂತ್ ನ ಸದಸ್ಯರಿಗೂ ನೀಡಲಾಗುತ್ತಿದೆ. ಗಣೇಶನ ಹಬ್ಬವನ್ನು ಒಗ್ಗೂಡಿ ಆಚರಿಸಿ. ಗಿಡವನ್ನು ಬೆಳೆಸಿ, ಪರಿಸರವನ್ನು ಉಳಿಸಿ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಮುಖಂಡರಾದ ಸುರೇಶ್, ಶ್ರೀರಾಮರೆಡ್ಡಿ, ಸುರೇಂದ್ರಗೌಡ, ಸುಜಾತಮ್ಮ, ಹನುಮಂತಪ್ಪ, ಮುನಿರಾಜು ಕುಟ್ಟಿ, ಬೈರೇಗೌಡ, ದಾಮೋದರ್, ಮಂಜುಳಮ್ಮ, ರಾಜೇಂದ್ರ, ಶ್ರೀಧರ್, ಪ್ರಕಾಶ್ ಹಾಜರಿದ್ದರು.
ಸಣ್ಣತನ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಸಿದ್ಧರಾಮಯ್ಯ : ಸಿದ್ಧರಾಮಯ್ಯನವರ ಸರ್ಕಾರ ಆಡಳಿತಾತ್ಮಕವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಆರೋಪಿಸಿದರು.
ಪ್ರಾಮಾಣಿಕ ಐಎಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸದಂತೆ ಮೂಲೆ ಗುಂಪು ಮಾಡುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಐಎಎಸ್ ಅಧಿಕಾರಿಯ ಮೇಲೆ ಹಲ್ಲೆ ನಡೆದಿದೆ. ಇವರಿಗೆ ಪ್ರಾಮಾಣಿಕ ಅಧಿಕಾರಿಗಳು ಬೇಕಿಲ್ಲ. ಇವರ ತಾಳಕ್ಕೆ ತಕ್ಕಂತೆ ಕುಣಿಯುವವರು, ಭ್ರಷ್ಟ ಅಧಿಕಾರಿಗಳು ಸಾಕು. ಎಲ್ಲಾ ಕಚೇರಿಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಾ ಕೊನೆಗೆ ನಮ್ಮ ರಾಜ್ಯವನ್ನು ದೇಶದಲ್ಲೇ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿ ತಂದಿರಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕೆಂಬ ದುರುದ್ದೇಶದಿಂದ ಯಡಿಯೂರಪ್ಪನವರನ್ನು ಕಟ್ಟಿಹಾಕಲು ಸಣ್ಣತನದ, ದ್ವೇಷದ ರಾಜಕಾರಣವನ್ನು ಸಿದ್ಧರಾಮಯ್ಯ ಮಾಡುತ್ತಿದ್ದಾರೆ.
ಕಳೆದ ನಾಲ್ಕು ವರ್ಷ ಎರಡು ತಿಂಗಳಿನಲ್ಲಿ ರಾಜ್ಯದಲ್ಲಿ 6,521 ಕೊಲೆಗಳಾಗಿವೆ. ಇದು ರಾಜ್ಯ ಸರ್ಕಾರದ ಕಾನೂನು ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸಿದ್ಧರಾಮಯ್ಯನವರ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಅವರ ಪದವಿ ಶಾಶ್ವತವಲ್ಲ. ಮುಂದೊಂದು ದಿನ ಅವರೂ ಮಾಜಿಯಾಗುತ್ತಾರೆ. ಅವರ ತಪ್ಪುಗಳು ಅವರಿಗೆ ತಿರುಗುಬಾಣವಾಗಲಿದೆ ಎಂದು ಹೇಳಿದರು.
- Advertisement -
- Advertisement -
- Advertisement -