ಮದುವೆ ಸರಳವಾಗಿರಲಿ, ಬದುಕು ಆಡಂಭರವಾಗಲಿ. ಮದುವೆಯಲ್ಲಿ ಪ್ರೇಮ, ನಂಬಿಕೆ, ವಿಶ್ವಾಸ, ಹೊಂದಾಣಿಕೆ ಇರಲಿ. ಕಷ್ಟ ಸುಖಗಳಲ್ಲಿ ಸಮಪಾಲನ್ನು ದಂಪತಿಗಳು ಹೊಂದಬೇಕು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ಎಸ್.ಎನ್.ಕ್ರಿಯಾ ಟ್ರಸ್ಟ್ ಕಚೇರಿಯಲ್ಲಿ ಶನಿವಾರ ಟ್ರಸ್ಟ್ ವತಿಯಿಂದ ಮಾರ್ಚ್ 23 ರಂದು ಆಯೋಜಿಸಿರುವ ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡ ಜೋಡಿಗಳಿಗೆ ಮದುವೆಗಾಗಿ ವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ದುಂದು ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ ತಾಲ್ಲೂಕು ವ್ಯಾಪ್ತಿಯಲ್ಲಿನ ಅವಿವಾಹಿತರಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಮಾರ್ಚ್ ೨೩ ರಂದು ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ಆಯೋಜನೆ ಮಾಡಲಾಗಿದೆ. ಪರಿಶಿಷ್ಠ ಜಾತಿ ಮತ್ತು ಜನಾಂಗದವರು ಕಡ್ಡಾಯವಾಗಿ ತಹಶೀಲ್ದಾರರಿಂದ ಪಡೆದುಕೊಂಡಿರುವ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಇದರಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಅನುದಾನವನ್ನು ಅವರಿಗೆ ಸಿಗಲು ಅನುಕೂಲಕರ. ಟ್ರಸ್ಟ್ನಿಂದ ವಧು, ವರರಿಗೆ ಈ ದಿನ ಬಟ್ಟೆಗಳು ನೀಡುತ್ತಿದ್ದು, ಮದುವೆಯ ದಿನದಂದು ತಾಳಿ, ಮತ್ತು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಸಮಾರಂಭಕ್ಕೆ ಜಿಲ್ಲಾಧಿಕಾರಿಗಳು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿಯವರು, ತಹಶೀಲ್ದಾರರು, ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇನ್ನೂ ಮದುವೆಯಾಗಲಿಚ್ಛಿಸುವ ಜೋಡಿಗಳು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕೃಷಿಕ ಸಮಾಜದ ಆನೂರು ದೇವರಾಜ್, ಗೋವಿಂದಪ್ಪ, ಅಶ್ವತ್ಥರೆಡ್ಡಿ, ಆನೂರು ಶಿವಣ್ಣ, ಮಳಮಾಚನಹಳ್ಳಿ ಬೈರೇಗೌಡ, ಹಿತ್ತಲಹಳ್ಳಿ ಕೃಷ್ಣಪ್ಪ, ಬಾಬು, ಮುನಿರಾಜು, ಅಂಬರೀಷ್, ವೆಂಕಟೇಶ್ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -