ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ತಾಲ್ಲೂಕಿನ ಜಂಗಮಕೋಟೆ ಉಪವಿಭಾಗದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಗುರುವಾರ ಮನವಿಯನ್ನು ಸಲ್ಲಿಸಿದರು.
ಜಿಲ್ಲೆಯು ಬರಪೀಡಿತವಾಗಿದ್ದು, ತಾಲ್ಲೂಕಿನ ಜಂಗಮಕೋಟೆಯಾದ್ಯಂತ ವಿದ್ಯುತ್ ಅಭಾವ ತೀವ್ರವಾಗಿದೆ. ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ತಲೆದೋರಿದೆ. ಲಕ್ಷಾಂತರ ರೂಗಳಷ್ಟು ಸಾಲ ಮಾಡಿ ಇಟ್ಟ ಬೆಳೆಗಳು ನೀರು ಹರಿಸದೆ ಒಣಗುತ್ತಿವೆ. ರೈತರು ನಗರ ಪ್ರದೇಶಕ್ಕೆ ಗುಳೆ ಹೋಗುವ ಪರಿಸ್ಥಿತಿ ಮೂಡಿದೆ. ವಿದ್ಯಾರ್ಥಿಗಳಿಗೆ ಸಹ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ರೈತರು ಅಕ್ರಮ ಸಕ್ರಮ ಯೋಜನೆಯಲ್ಲಿ 18 ಸಾವಿರ ರೂಗಳನ್ನು ಕಟ್ಟಿದ್ದರೂ ಇದುವರೆಗೂ ವಿದ್ಯುತ್ ಪರಿವರ್ತಕವನ್ನು ಅಳವಡಿಸಿಲ್ಲ. ತಕ್ಷಣವೇ ಅಳವಡಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ರಮೇಶ, ದೇವರಾಜ್, ವೆಂಕಟೇಶ್, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -