ಬಯಲುಸೀಮೆ ಜನರ ಜೀವನಾಡಿಯಾಗಿರುವ ರೇಷ್ಮೆ ಬೆಳೆಯನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಸಬೇಕಾದಂತಹ ಅನಿವಾರ್ಯತೆ ಇದೆ ಎಂದು ದಿ.ಡಾ.ಸಂಜಯ್ದಾಸ್ಗುಪ್ತಾ ಪೌಂಡೇಷನ್ ‘ನಮ್ಮ ಮುತ್ತೂರು’ ಸಂಸ್ಥೆಯ ಸಂಚಾಲಕಿ ಉಷಾಶೆಟ್ಟಿ ತಿಳಿಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆ, ರೇಷ್ಮೆ ಬಿಚ್ಚಾಣಿಕೆ ಕೇಂದ್ರಗಳು, ಟ್ವಿಸ್ಟಿಂಗ್ ಮತ್ತು ಮಗ್ಗಗಳ ಘಟಕಗಳಿಗೆ ಸೋಮವಾರ ಬೇಟಿ ನೀಡಿದ್ದ ಹ್ಯಾಮೋಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳ ತಂಡದ ಜೊತೆಯಲ್ಲಿ ಆಗಮಿಸಿದ್ದ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಬಹುತೇಕ ರೈತರು ಹೈನುಗಾರಿಕೆ ಮತ್ತು ರೇಷ್ಮೆ ಉದ್ಯಮವನ್ನೆ ನಂಬಿಕೊಂಡು ಜೀವನ ಮಾಡುತ್ತಿದ್ದು, ಈ ಉದ್ಯಮದ ಬಗ್ಗೆ ಯುವಜನತೆಗೆ ಸರಿಯಾದ ಮಾಹಿತಿಯಿಲ್ಲದ ಕಾರಣ, ಉದ್ಯಮವನ್ನು ಬಿಟ್ಟು ಮಹಾನಗರದ ಕಡೆಗೆ ಉದ್ಯೋಗಗಳನ್ನು ಅರಸಿಕೊಂಡು ಹೋಗುವಂತಹ ಪರಿಸ್ಥಿತಿ ಉಂಟಾಗುತ್ತಿದೆ. ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಹ್ಯಾಮೋಕ್ ಸಂಸ್ಥೆಯು ರಾಜ್ಯದ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಕರೆತಂದು ಹಿಪ್ಪುನೇರಳೆ ತೋಟಗಳ ಬೆಳವಣಿಗೆ, ರೇಷ್ಮೆ ಮೊಟ್ಡೆಯ ಉತ್ಪಾದನೆ, ಹುಳುಗಳ ಬೆಳವಣಿಗೆ, ಗೂಡು ಕಟ್ಟುವಿಕೆ, ಗೂಡಿನಿಂದ ನೂಲು ತೆಗೆಯುವುದು ಸೇರಿದಂತೆ ‘ಚಿಟ್ಟೆಯಿಂದ ಬಟ್ಟೆಯವರೆಗಿನ’ ವಿವಿಧ ಹಂತಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಸ್ಥಳೀಯ ವಿದ್ಯಾರ್ಥಿಗಳಿಗೂ ಕೂಡಾ ರೇಷ್ಮೆ ಉದ್ಯಮದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.
ತಾಲ್ಲೂಕಿನ ಮುತ್ತೂರಿನಲ್ಲಿ ಹಿಪ್ಪುನೇರಳೆ ತೋಟ, ಹುಳು ಸಾಕಾಣಿಕಾ ಕೇಂದ್ರ, ರೇಷ್ಮೆ ಬಿತ್ತನೆ ಕೋಠಿ, ರೇಷ್ಮೆ ಗೂಡಿನ ಮಾರುಕಟ್ಟೆ, ಸಿದ್ಧಾರ್ಥನಗರದ ನಾರಾಯಣಪ್ಪ ಅವರ ರೇಷ್ಮೆ ಬಿಚ್ಚಾಣಿಕಾ ಕೇಂದ್ರ, ಟ್ವಿಸ್ಟಿಂಗ್ ಘಟಕ, ಉಲ್ಲೂರುಪೇಟೆಯ ಅನಿಲ್ ಪದ್ಮಶಾಲಿ ಅವರ ರಾಮ್ ಸಿಲ್ಕ್ ಮಗ್ಗಗಳ ಘಟಕಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದರು.
ಹ್ಯಾಮೋಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಚಂದ್ರನ್, ಕಾರ್ಯದರ್ಶಿ ಶೀಬಾ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ರಾಮ್ಕುಮಾರ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -