ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ರಚನಾತ್ಮಕವಾದ ಸಂಘಟಿತ ಚಟುವಟಿಕೆಗಳನ್ನು ರೂಪಿಸಿ ಅನುಷ್ಟಾನಗೊಳಿಸುವಲ್ಲಿ ಪ್ರತಿಯೊಬ್ಬ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ನಿವೃತ್ತ ದೈಹಿಕಶಿಕ್ಷಣ ಶಿಕ್ಷಕ ಎಂ.ಎನ್.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬಲ್ಲ ಮಾನವಸಂಪನ್ಮೂಲವನ್ನು ಸೃಜಿಸಿ ಉತ್ತಮ ಸಮಾಜನಿರ್ಮಾಣಕಾರ್ಯದಲ್ಲಿ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರಾಮಾಣಿಕತೆ, ನಿಷ್ಪೃಹತೆ, ನಿರಹಂಕಾರದಂತಹ ಗುಣಗಳೇ ಶಿಕ್ಷಕನ ಮೌಲ್ಯಗಳು ಎಂದರು.
ನಿವೃತ್ತ ಮುಖ್ಯಶಿಕ್ಷಕ ಜಿ.ಎಂ.ಪರಮನಟ್ಟಿ ಮಾತನಾಡಿ, ಉತ್ತಮ ಬದುಕಿನ ಮೌಲ್ಯಗಳು ಅಡಗಿರುವುದನ್ನು ಎಲ್ಲರೂ ಅರಿತು ಸಾರ್ಥಕಜೀವನ ನಡೆಸುವ ಸೂತ್ರಗಳನ್ನು ಅರಿತುಕೊಳ್ಳಬೇಕು. ವೃತ್ತಿಸೇವೆಯಲ್ಲಿ ಪ್ರೀತಿ, ಸದ್ಗುಣಗಳಂತಹ ಸಕಾರಾತ್ಮಭಾವನೆಗಳನ್ನು ತುಂಬಬಲ್ಲ ಚೈತನ್ಯವಿರಬೇಕು ಎಂದರು.
ಪ್ರಬಾರಿಮುಖ್ಯಶಿಕ್ಷಕ ಬೈರಾರೆಡ್ಡಿ ಮಾತನಾಡಿ, ದೇಶದ ಇತಿಹಾಸ, ಅಧ್ಯಾತ್ಮಿಕ, ಧಾರ್ಮಿಕ, ಪೌರಾಣಿಕ ಮತ್ತು ನೈತಿಕ ಪರಂಪರೆಯನ್ನು, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುವ ಕಾರ್ಯವು ಶಿಕ್ಷಕರಿಂದಾಗಬೇಕಿದೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಬದುಕಿನ ಜಂಜಾಟದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಎಲ್ಲರೂ ತಮ್ಮತಮ್ಮ ಕಾರ್ಯಗಳಲ್ಲಿಯೇ ತಲ್ಲೀನರಾಗುವ ಜೊತೆಗೆ ನಮ್ಮಲ್ಲಿ ಅಡಗಿರುವ ಅಂಧಕಾರವನ್ನು ಹೋಗಲಾಡಿಸಿಕೊಂಡು ಉತ್ತಮ ಬದುಕಿನ ಮಾರ್ಗಗಳನ್ನು ಅರಿಯಬೇಕು ಎಂದರು.
ವಯೋನಿವೃತ್ತಿ ಹೊಂದಿದ ದೈಹಿಕಶಿಕ್ಷಣ ಶಿಕ್ಷಕ ಎಂ.ಎನ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಎಂ.ಎನ್.ನಾರಾಯಣಸ್ವಾಮಿ, ಶಿಕ್ಷಕಿ ಜಿ.ಎನ್.ಲತಾ, ನಾಗರತ್ನ ದುರಗಣ್ಣನವರ್, ಕುಮಾರಿ, ತಾಲೂಕು ಸರ್ಕಾರಿ ನೌಕರರ ಸಂಗದ ಗೌರವಾಧ್ಯಕ್ಷ ಟಿ.ವಿಜಯಕುಮಾರ್, ನಿವೃತ್ತ ಬ್ಯಾಂಕ್ಮ್ಯಾನೇಜರ್ ಟಿ.ಮಂಜುನಾಥ್, ನಿವೃತ್ತ ಅಂಚೆನೌಕರ ರಾಮಾಂಜಿನಯ್ಯ, ನಿವೃತ್ತ ತೋಟಗಾರಿಕಾ ಇಲಾಖಾಧಿಕಾರಿ ರಂಗಯ್ಯ, ಮಂಗಳಾ, ಸಿಂಧೂ, ಶಿಕ್ಷಕ ಮಂಜುನಾಥ್ ಹಾಜರಿದ್ದರು.
- Advertisement -
- Advertisement -
- Advertisement -