ಗ್ರಾಮದಲ್ಲಿನ ಶಾಲೆಯು ದೇಗುಲದಂತೆ. ಈ ಶಾಲೆಯ ಆವರಣದಲ್ಲಿ ವಿದ್ಯಾದೇವತೆ ಗಣೇಶನ ದೇಗುಲ, ಮಕ್ಕಳ ಸೃಜನಶೀಲತೆಯನ್ನು ಪ್ರದರ್ಶಿಸಲು ವೇದಿಕೆ ಮತ್ತು ಶಾಲೆಯ ಪ್ರವೇಶದ್ವಾರದಲ್ಲಿ ಕಮಾನನ್ನು ನಿರ್ಮಿಸಿರುವುದು ಸಮಂಜಸವಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಹಾಗಣಪತಿ ಮೂರ್ತಿಯ ಪ್ರತಿಷ್ಠಾಪನೆಯ ಅಂಗವಾಗಿ ಶುಕ್ರವಾರ ನಡೆದ ಹೋಮ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆಯ ಅಭಿವೃದ್ಧಿಗೆ ಬೇಕಾದ ಹಲವಾರು ಸೌಲಭ್ಯಗಳನ್ನು ಶಿಕ್ಷಕರು ಹೊಂದಿಸಿಕೊಳ್ಳಲು ಶ್ರಮಿಸುತ್ತಿರುವುದು ಅಭಿನಂದನೀಯ. ಗ್ರಾಮ ಪಂಚಾಯ್ತಿಯಿಂದಲೂ ಸೂಕ್ತ ಸಹಕಾರ ಮತ್ತು ಸ್ಪಂದನೆ ಸಿಗುತ್ತಿದೆ. ಶಾಲೆಯನ್ನು ಗಟ್ಟಿಗೊಳಿಸುವ ಕೆಲಸ ಎಲ್ಲರಿಂದಲೂ ಆಗಬೇಕು. ಗಿಡಕ್ಕೆ ನೀರೆರೆದು ಪೋಷಿಸಿದಂತೆ ನಮ್ಮೂರಿನ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದು ಹೇಳಿದರು.
‘ಆಧುನಿಕ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿ ಬಾಯಿ ಕುಟೀರ’ ಎಂಬ ಹೆಸರಿನಲ್ಲಿನ ವೇದಿಕೆಯನ್ನು ಉದ್ಘಾಟಿಸಲಾಯಿತು. ಮಹಾಗಣಪತಿ ದೇವಾಲಯದ ಮುಂದೆ ವಿವಿಧ ಹೋಮಗಳನ್ನು ನಡೆಸಿ ಮಹಾಮಂಗಳಾರತಿ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಗ್ರಾಮ ಪಂಚಾಯ್ತಿ ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಉಮಾಚನ್ನೇಗೌಡ, ಸಂಪತ್ಕುಮಾರ್, ಪಿಡಿಒ ಅಂಜನ್ಕುಮಾರ್, ಶ್ರೀನಿವಾಸ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಎಸ್ಡಿಎಂಸಿ ಅಧ್ಯಕ್ಷೆ ಪುಷ್ಪಾ ರಾಮಚಂದ್ರ, ಸದಸ್ಯರಾದ ನೀಲಮ್ಮ, ಮಂಜುನಾಥ್, ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಎಸ್.ಚಾಂದ್ಪಾಷ, ಅಶೋಕ್, ಭಾರತಿ, ಎಂ.ಸೀನಪ್ಪ, ಸಿಬ್ಬಂದಿ ವೆಂಕಟಮ್ಮ, ಮುನಿರತ್ನಮ್ಮ, ಮಂಜುಳ, ಗ್ರಾಮದ ಚನ್ನೇಗೌಡ, ವೆಂಕಟನಾರಾಯಣಪ್ಪ, ವೀರಪ್ಪ, ವೆಂಕಟರಾಮಪ್ಪ, ಬೈರೇಗೌಡ ಹಾಜರಿದ್ದರು.
- Advertisement -
- Advertisement -
- Advertisement -
- Advertisement -