ಸ್ವಂತ ಖರ್ಚಿನಿಂದ ರಾಜಕಾಲುವೆ, ಶಾಶ್ವತ ಕಾಮಗಾರಿಗೆ ಸರ್ಕಾರದ ನೆರವು ಯಾಚನೆ

0
744

ಬೆಳ್ಳೂಟಿ ಗ್ರಾಮದ ಕೆರೆಗೆ ಸ್ವಂತ ಖರ್ಚಿನಿಂದ ರಾಜಕಾಲುವೆಯನ್ನು ತೆರವುಗೊಳಿಸಿದ ಗ್ರಾಮಸ್ಥರು, ಶಾಶ್ವತವಾದ ಕಲ್ಲುಕಟ್ಟಡದ ಕಾಮಗಾರಿಗಾಗಿ ಸರ್ಕಾರದ ನೆರವನ್ನು ಬಯಸುತ್ತಿರುವುದಾಗಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೆಳ್ಳೂಟಿ ಸಂತೋಷ್ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗ್ರಾಮ ಹಾಗೂ ಕೆರೆಯ ನಕ್ಷೆ.
ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗ್ರಾಮ ಹಾಗೂ ಕೆರೆಯ ನಕ್ಷೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಳ್ಳೂಟಿ ಕೆರೆಯು 360 ಎಕರೆಯಷ್ಟಿದ್ದು, ಕೆರೆ ತುಂಬಿದಲ್ಲಿ ಸುತ್ತಮುತ್ತಲಿನ 300 ಎಕರೆ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಸ್.ವೆಂಕಟೇಶ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಒಗ್ಗೂಡಿ ರಾಜಕಾಲುವೆಯಲ್ಲಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಿದೆವು. ನಂತರ ಬಿದ್ದ ಮಳೆಗೆ ಕಾಲುವೆ ತೆರವುಗೊಳಿಸಿದ ಕಾರಣ ನೀರು ಹರಿದು ಬಂದು ಶೇಕಡಾ 30 ರಷ್ಟು ಕೆರೆ ತುಂಬಿದೆ.
ಕಾಲುವೆಯ ನಿರ್ಮಾಣಕ್ಕೆ ಹಲವು ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿನ ಸ್ಥಳವನ್ನು ಸಹ ಕಾಲುವೆ ನಿರ್ಮಾಣಕ್ಕೆ ಬಿಟ್ಟುಕೊಟ್ಟರು. ಈಗಾಗಲೇ ಸುಮಾರು 250 ಮೀಟರಿನಷ್ಟು ಕಲ್ಲುಕಟ್ಟಡದ ರಾಜಕಾಲುವೆಯ ಕಾಮಗಾರಿಯನ್ನು ಸ್ವಂತ ಹಣ ಖರ್ಚು ಮಾಡಿ ಗ್ರಾಮಸ್ಥರು ಮಾಡಿದ್ದೇವೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಅನುದಾನದಿಂದ ಇನ್ನುಳಿದ ರಾಜಕಾಲುವೆಯ ನಿರ್ಮಾಣ ಮಾಡಿ ಕೆರೆಯನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿದರು.
ಸುಮಾರು 50 ವರ್ಷಗಳ ಮಳೆ ಪ್ರಮಾಣವನ್ನು ಅಧ್ಯಯನ ಮಾಡಿದ್ದೇವೆ. ಸಾಧಾರಣ ಏರುಪೇರಿನಿಂದ ಮಳೆಯಾಗುತ್ತಿದೆ. ಕೆರೆಗಳ ಒತ್ತುವರಿ ಹಾಗೂ ಜಲಮೂಲಗಳು ಮುಚ್ಚಿಹೋದ ಕಾರಣ ಕೆರೆಗಳಿಗೆ ನೀರು ಬಾರದೆ ಅಂತರ್ಜಲ ಕುಸಿದಿದೆ. ಬೆಳ್ಳೂಟಿ ಕೆರೆಗೆ ಸುಮಾರು ಒಂದೂವರೆ ಕಿ.ಮೀ ರಾಜಕಾಲುವೆಯ ಕಲ್ಲುಕಟ್ಟಡದ ಕಾಮಗಾರಿ ನಡೆಯಬೇಕಿದೆ. ಸರ್ಕಾರದ ಯಾವುದೇ ಅನುದಾನದಲ್ಲಿ ಶೀಘ್ರವಾಗಿ ನಡೆಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಈಗಾಗಲೇ ಮನವಿಯನ್ನು ಮಾಡಿದ್ದೇವೆ. ಅಕ್ಟೋಬರ್ 17 ರಂದು ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಪೋಡಿ ಅದಾಲತ್ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದಾರೆ. ಅಂದು ಖುದ್ದಾಗಿ ಪರಿಶೀಲಿಸಿ ಕೆರೆಯಲ್ಲಿ ನೀರು ತುಂಬಲು ಅನುಕೂಲಕರ ಶಾಶ್ವತ ಕೆಲಸಕ್ಕೆ ಮುಂದಾಗಬೇಕೆಂದು ಕೋರಿದರು.
ತಾಲ್ಲೂಕಿನಲ್ಲಿ ಕೆರೆಗಳು ಹಾರದಂತೆ ಸರಪಣಿಯಂತೆ ರೂಪಿಸಲಾಗಿದೆ. ಜಾತವಾರದ ಕೆರೆ ತುಂಬಿ, ಕೇಶವಾರದ ಕೆರೆಗೆ, ಕೇಶವಾರದ ಕೆರೆ ತುಂಬಿ ರಾಳ್ಳಕೆರೆಗೆ, ಅಲ್ಲಿಂದ ಬೆಳ್ಳೂಟಿ ಕೆರೆ ತುಂಬಿದ ನಂತರ ಭದ್ರನ ಕೆರೆಗೆ ನೀರು ಹರಿಯುತ್ತದೆ. ಭದ್ರನ ಕೆರೆ ತುಂಬಿ ಹೊಸಕೋಟೆ ಕೆರೆಗೆ ನೀರು ಹರಿಯುತ್ತದೆ. ಹಿಂದಿನವರ ಜಲಸಾಕ್ಷರತೆಯು ಈಗಿನವರ ನೆಲದಾಸೆಯಿಂದ ಮರೆಯಾಗಿ ನೀರು ಪಾತಾಳಕ್ಕೆ ಇಳಿದಿದೆ. ಮುಂದಿನ ವರ್ಷ ಗ್ರಾಮಸ್ಥರೆಲ್ಲಾ ತಮ್ಮ ಸ್ವಂತ ಹಣದಿಂದ ಕೆರೆಯಲ್ಲಿನ ಮುಳ್ಳುಗಿಡಗಳನ್ನು ತೆಗೆದು ಸ್ವಚ್ಛಗೊಳಿಸುತ್ತೇವೆ. ಕೆರೆಯ ಸುತ್ತ 20 ಅಡಿ ಟ್ರೆಂಚ್ ತೆಗೆದು ಕೆರೆಯ ಒತ್ತುವರಿ ತೆರವುಗೊಳಿಸುತ್ತೇವೆ. ಈ ಮಾದರಿಯಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಕೆರೆಗಳನ್ನು ಸುತ್ತಮುತ್ತಲಿನ ಗ್ರಾಮಸ್ಥರೇ ಕಾಳಜಿ ವಹಿಸಿ ಜಲಮೂಲಗಳನ್ನು ಸರಿಪಡಿಸಿಕೊಂಡಲ್ಲಿ ಅಂತರ್ಜಲ ಹೆಚ್ಚುತ್ತದೆ ಎಂದು ಹೇಳಿದರು.
ಆನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬೆಳ್ಳೂಟಿ ಎಸ್.ವೆಂಕಟೇಶ್, ರಮೇಶ್, ವಿಜಯ್ಕುಮಾರ್, ಬಿ.ಎನ್.ಸತೀಶ್ ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!