ನಗರದ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಟೋ ಚಾಲಕರಿಗಾಗಿ ನಡೆಸಿದ ಸಭೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಧರ್ಮೇಗೌಡ ಅವರು ಮಾತನಾಡಿದರು.
ಆಟೋ ಚಾಲಕರು ಕಡ್ಡಾಯವಾಗಿ ವಾಹನಗಳ ದಾಖಲೆಗಳನ್ನು ಮತ್ತು ಲೈಸೆನ್ಸ್ ಅನ್ನು ಒಂದು ತಿಂಗಳ ಒಳಗೆ ಹೊಂದಿಸಿಕೊಳ್ಳಬೇಕು. ಮದ್ಯಪಾನ ಮಾಡಿ ಆಟೋ ಚಾಲಾಯಿಸುವುದು ಹಾಗೂ ಆಟೋ ಚಾಲನೆ ಮಾಡುವಾಗ ಮೊಬೈಲ್ ಬಳಿಕೆ ಮಾಡಿದರೆ, ಅಂಥವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ದಂಡ ವಿಧಿಸಲಾಗುವುದು. ಸಾರ್ವಜನಿಕರ ಜೀವಕ್ಕೆ ಹಾನಿಯಾಗುವಂತೆ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಾಹನಗಳಿಗೆ ವಿಮೆಯನ್ನು ಮಾಡಿಸಬೇಕು. ಅಪಘಾತವಾದರೆ ವಿಮೆ ಇಲ್ಲದಿದ್ದರೆ ಯಾರಿಗೂ ಪರಿಹಾರ ದೊರೆಯುವುದಿಲ್ಲ. ಮಾಲೀಕ ಹೊಣೆಯಾಗುತ್ತಾನೆ. ಅವನೇ ಪರಿಹಾರ ನೀಡಬೇಕಾಗುತ್ತದೆ. ಒಂದು ತಿಂಗಳಲ್ಲಿ ಚಾಲನಾ ಪರವಾನಗಿ ಮತ್ತು ವಿಮೆ ಇಲ್ಲದಿದ್ದರೆ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಚಾಲಕರ ಅನ್ನಕ್ಕೆ ಕಲ್ಲು ಹಾಕುವುದು ನಮ್ಮ ಉದ್ದೇಶವಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದರೆ ಮಾತ್ರ ಸಂಸಾರ ನಡೆಯುತ್ತದೆ. ಒಂದು ವಾಹನವನ್ನು ವಶಪಡಿಕೊಂಡರೆ ಸಂಸಾರ ಉಪವಾಸ ಆಚರಿಸಬೇಕಾಗುತ್ತದೆ. ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಚಾಲನೆಯಲ್ಲಿ ರೀತಿ ನೀತಿಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ನಗರಠಾಣೆಯ ಎಸ್ಐ ಸತೀಶ್ ಮಾತನಾಡಿ, ಅಗತ್ಯ ದಾಖಲೆಗಳನ್ನು ನೀಡಿದರೆ ಪೊಲೀಸ್ ಇಲಾಖೆಯಿಂದಲೇ ಚಾಲನಾ ಪರವಾನಗಿಯನ್ನು ಹಾಗೂ ಇತರೆ ದಾಖಲೆಯನ್ನು ಆರ್.ಟಿ.ಓ ಇಲಾಖೆಯಿಂದ ವಿತರಣೆ ಮಾಡಿಸಲಾಗುವುದು. ವಾಹನಗಳಲ್ಲಿ ಮನ ಬಂದಂತೆ ಕುರಿಗಳ ರೀತಿ ಜನರನ್ನು ತುಂಬಿಸಿಕೊಂಡು ಹೋಗುವುದರಿಂದಲೇ ಹೆಚ್ಚಿನ ಅಪಘಾತ ಮತ್ತು ಪ್ರಾಣ ಹಾನಿ ಆಗುತ್ತಿದೆ. ಅನುಮತಿ ಇರುವಷ್ಟು ಜನರನ್ನು ಮಾತ್ರ ಕರೆದೊಯ್ಯಬೇಕು. ಇಲ್ಲದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಚಾಲಕರು ಕಾನೂನುಗಳನ್ನು ಉಲ್ಲಂಘಿಸಿ ಎಲ್ಲೆಂದರಲ್ಲಿ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸುವುದು, ಸಂಚಾರಿ ನಿಯಮಗಳನ್ನು ಪಾಲಿಸದಿರುವುದು ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಮತ್ತಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ಚಾಲಕರು ಸುರಕ್ಷಿತವಾಗಿರಬೇಕು. ಸಾರ್ವಜನಿಕರ ಸುರಕ್ಷತೆಯ ಕಡೆಗೂ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ನಮ್ಮಲ್ಲಿ ಹೆಚ್ಚು ಗ್ಯಾಸ್ ಇರುವ ಆಟೋಗಳೆ ಇದ್ದು, ನಾವು ಚಿಕ್ಕಬಳ್ಳಾಪುರಕ್ಕೆ ಹೋಗಿ ಗ್ಯಾಸ್ ತುಂಬಿಸಬೇಕು. ತಮ್ಮ ತಾಲ್ಲೂಕಿನಲ್ಲಿ ಒಂದು ಗ್ಯಾಸ್ ಬಂಕ್ ಇದ್ದರೆ ನಮಗೆ ಉಪಯೋಗವಾಗುತ್ತದೆ ಎಂದು ಆಟೋ ಚಾಲಕರು ಈ ಸಂದರ್ಭದಲ್ಲಿ ತಿಳಿಸಿದರು.
ಸಭೆಯಲ್ಲಿ ಪೊಲೀಸ್ ಇಲಾಖೆಯ ಸಿಬಂದಿ ಹಾಗೂ ಆಟೋ ಚಾಲಕರು ಹಾಜರಿದ್ದರು.