Sidlaghatta : ಕನ್ನಡಪರ ಮತ್ತು ರೈತ ಪರ ಹೋರಾಟಗಾರರ ವಿರುದ್ದ ರಾಜ್ಯದ ವಿವಿಧ ಕಡೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪೂಲಕುಂಟಹಳ್ಳಿ ರಘುನಾಥರೆಡ್ಡಿ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರಕಾರವು ಕೇವಲ ಅಲ್ಪ ಸಂಖ್ಯಾತರಿಗೆ ಸಂಬಂಧಪಟ್ಟ ಗಲಭೆಗಳ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಮೂಲಕ ಅಲ್ಪ ಸಂಖ್ಯಾತರ ಓಲೈಕೆಗೆ ಮುಂದಾಗಿರುವುದು ಸರಿಯಲ್ಲ. ಬದಲಿಗೆ ಕನ್ನಡಪರ, ರೈತ ಪರ ಹೋರಾಟಗಳ ಪ್ರಕರಣಗಳನ್ನು ಕೂಡ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕನ್ನಡ ಭಾಷೆ, ಸಾಹಿತ್ಯ, ನೆಲ, ಜಲ ಹಾಗೂ ಕನ್ನಡಿಗನ ಅಸ್ಥತ್ವಕ್ಕೆ ದಕ್ಕೆ ಬಂದಾಗ ನಡೆದ ಹೋರಾಟಗಳಲ್ಲಿ ಹೋರಾಟಗಾರರ ಮೇಲೆ ಅನೇಕ ಪ್ರಕರಣಗಳು ದಾಖಲಾಗಿದ್ದು ಅವುಗಳನ್ನು ವಾಪಸ್ ಪಡೆಯಲಿ ಎಂದು ಒತ್ತಾಯಿಸಿದರು.
ಅನೇಕ ಮಂದಿ ಕನ್ನಡಪರ ಹೋರಾಟಗಾರರು ಕನ್ನಡದ ವಿಷಯವಾಗಿ ಬೀದಿಗೆ ಇಳಿದು ತಮ್ಮ ಮೇಲೆ ಒಂದಲ್ಲ ಎರಡಲ್ಲ ಹತ್ತಾರು ಕೇಸುಗಳನ್ನು ಹಾಕಿಸಿಕೊಂಡು ಜೀವನ ಪೂರ್ತಿ ಪೊಲೀಸ್ ಸ್ಟೇಷನ್, ಕೋರ್ಟು ಅಂತ ಓಡಾಡಿ ವಯುಕ್ತಿಕ ಬದುಕನ್ನು ಸರ್ವನಾಶ ಮಾಡಿಕೊಂಡಿದ್ದಾರೆ.
ಅವರು ಹೋರಾಡಿದ್ದು ನಮ್ಮೆಲ್ಲರ ಪರ, ಕನ್ನಡಪರವಾಗಿದ್ದು ಅಂತಹವರ ವಿರುದ್ದ ದಾಖಲಾದ ಎಲ್ಲ ಪ್ರಕರಣಗಳನ್ನು ರಾಜ್ಯ ಸರಕಾರ ಕೈ ಬಿಡಬೇಕೆಂದು ಆಗ್ರಹಿಸಿದರು.
ಹಾಗೂ ರೈತ ಸಂಘದ ಮುಖಂಡರು ಬೀದಿಗೆ ಇಳಿದಿದ್ದಾರೆ. ಅವರ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು ಅವೆಲ್ಲವನ್ನೂ ರೈತರ ಹಿತದೃಷ್ಟಿಯಿಂದ ಕೈ ಬಿಡಬೇಕು, ಆ ಮೂಲಕ ರಾಜ್ಯ ಸರಕಾರವು ರೈತರು, ಕನ್ನಡಪರ ಇದೆ ಎಂಬುದನ್ನು ಸಾಬೀತು ಮಾಡಬೇಕೆಂದು ಮನವಿ ಮಾಡಿದರು.








