Sidlaghatta : ಸಮಾಜದಲ್ಲಿ ಅಪರಾಧಗಳು ನಡೆಯದಂತೆ ತಡೆಗಟ್ಟುವಲ್ಲಿ ಸಾರ್ವಜನಿಕರಾಧಿಯಾಗಿ ಎಲ್ಲರ ಪಾತ್ರವೂ ಮುಖ್ಯ, ವಿದ್ಯಾರ್ಥಿ ಹಾಗೂ ಯುವಜನರೂ ಸಹ ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಹೇಳಿದರು.
ನಗರದ ಶ್ರೀ ಶಾರದಾ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಅರಿವು ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾರೂ ಸಹ ಹುಟ್ಟುತ್ತಲೆ ಅಪರಾಧಿಗಳಾಗಿರೊಲ್ಲ. ಅವರು ಬೆಳೆಯುವ ಪರಿಸರ ಹಾಗೂ ಪರಿಸ್ಥಿತಿಗಳು ಅವರನ್ನು ಅಪರಾಧ ಲೋಕಕ್ಕೆ ಕರೆದೊಯ್ಯುತ್ತದೆ. ಹಾಗಾಗಿ ಮನೆ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಸಿಗಬೇಕು, ಆಗ ಅವರು ಹಾದಿ ತಪ್ಪುವುದಿಲ್ಲ ಎಂದರು.
ನಮ್ಮ ಕಣ್ಣೆದುರು ಅಕ್ಕ ಪಕ್ಕ ಅಪರಾಧ ತಪ್ಪು ನಡೆಯುತ್ತಿದ್ದಾಗ ನಮಗ್ಯಾಕೆ ಎಂಬ ಮನೋಭಾವ ಬಿಡಬೇಕು, ಅಪರಾಧವನ್ನು ಸಮಾಜಘಾತುಕ ಕೃತ್ಯವನ್ನು ತಪ್ಪಿಸುವ ಕೆಲಸಕ್ಕೆ ಮುಂದಾಗಬೇಕು ಹಾಗೆಯೆ ತಪ್ಪನ್ನು ಪ್ರಶ್ನಿಸುವ ಮನೋಭಾವ ಎಲ್ಲರಲ್ಲೂ ಮೊದಲಿಗೆ ಮೂಡಬೇಕೆಂದರು.
ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಿ ಉತ್ತಮ ಸಮಾಜವನ್ನು ನಿರ್ಮಿಸಲು ಪೊಲೀಸರೊಂದಿಗೆ ವಿದ್ಯಾರ್ಥಿಗಳು, ಯುವಜನರು ಹಾಗೂ ಎಲ್ಲ ವರ್ಗದ ಜನರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಶಿಡ್ಲಘಟ್ಟ ನಗರದ ಪ್ರಮುಖ ಬೀದಿಗಳಲ್ಲಿ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವ ಬಗ್ಗೆ ಬಿತ್ತಿಪತ್ರಗಳ ಫಲಕಗಳನ್ನು ಹಿಡಿದು ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿದರು.
ನಗರಠಾಣೆಯ ಎಸ್ಐ ವೇಣುಗೋಪಾಲ್, ಶಾರದಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸುಮನ್, ಪ್ರಾಂಶುಪಾಲ ಸಾಮ್ರಾಟ್ ಮೂರ್ತಿ, ತಾಲ್ಲೂಕು ಕಸಾಪ ಅಧ್ಯಕ್ಷ ಅನಂತಕೃಷ್ಣ ಹಾಜರಿದ್ದರು.