Sidlaghatta : ಶಾಲಾ ಮಕ್ಕಳಿಗೆ ರೋಬೋಟಿಕ್ಸ್ ಕಲಿಕೆಯು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಆಸಕ್ತಿ ಮೂಡಿಸುತ್ತದೆ ಮತ್ತು ತರ್ಕಬದ್ಧ ಚಿಂತನೆಯನ್ನು ಬೆಳೆಸುತ್ತದೆ. ಇದು ತಮ್ಮ ಸೃಜನಶೀಲತೆಯನ್ನು ಮತ್ತು ಸಮಸ್ಯೆ ಪರಿಹಾರದ ಕೌಶಲ್ಯಗಳನ್ನು ಬಲಪಡಿಸುತ್ತದೆ ಎಂದು ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್ ತಿಳಿಸಿದರು.
ನಗರದ ಶಾರದಾ ವಿದ್ಯಾಸಂಸ್ಥೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ರೋಬೋಟಿಕ್ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೋಬೋಟಿಕ್ಸ್ ಅನ್ನು ಪ್ರಾಥಮಿಕ ತರಗತಿಯಿಂದ ಶಾರದಾ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಒಂದು ವಿಷಯವಾಗಿ ಕಲಿಸುತ್ತಿರುವುದು ಅನುಕರಣೀಯ. ನಗರದಲ್ಲಿನ ಶಿಕ್ಷಣದ ರೀತಿಯಲ್ಲಿ ಗ್ರಾಮಾಂತರ ಭಾಗದಲ್ಲಿಯೂ ತಾಂತ್ರಿಕ ಕೌಶಲ ವೃದ್ಧಿಸುವ ಶಿಕ್ಷಣದ ಮೂಲಕ ಮಕ್ಕಳಲ್ಲಿ ನಾವೀನ್ಯತೆಯನ್ನು ಬೆಳೆಸಲಾಗುತ್ತಿದೆ. ಇದು ಡಿಜಿಟಲ್ ಮಕ್ಕಳಲ್ಲಿ ಕೌಶಲ್ಯಗಳನ್ನು ಬಲಪಡಿಸಿ, ಅವರನ್ನು ಭವಿಷ್ಯದ ಉದ್ಯೋಗಗಳಿಗೆ ಸಜ್ಜುಗೊಳಿಸುತ್ತದೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ಪೂರಕವಾಗಿದೆ. ಈ ಮಕ್ಕಳು ಮುಂದೆ ದೇಶದ ಆಸ್ತಿಗಳಾಗುತ್ತಾರೆ ಎಂದು ಹೇಳಿದರು.
ಶಾರದಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಯುವಿಪೆಪ್ ಸಂಸ್ಥೆಯ ಮೂಲಕ ರೋಬೋಟಿಕ್ಸ್ ಕಲಿಸಲಾಗುತ್ತಿದೆ. ಕಲಿತಿರುವ ಜ್ಞಾನವನ್ನು ಮಕ್ಕಳು ಸುಮಾರು 35 ಕ್ಕೂ ಹೆಚ್ಚು ಮಾದರಿಗಳ ಮೂಲಕ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್.ಮುನಿರತ್ನಂ, ಎ.ಆರ್.ಎಂ ಪಿಯು ಕಾಲೇಜಿನ ಪ್ರಾಂಶುಪಾಲ ಮೂರ್ತಿ ಸಾಮ್ರಾಟ್, ಮುಖ್ಯಶಿಕ್ಷಕರಾದ ರಾಜೇಶ್, ಸಿದ್ಧರಾಜು ಹಾಜರಿದ್ದರು.








