Sidlaghatta : ಶಿಡ್ಲಘಟ್ಟ ತಾಲೂಕಿನ ಯಣ್ಣಂಗೂರು ಗ್ರಾಮದ ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅಕ್ಷಯ, ರಾಜ್ಯ ಮಟ್ಟದ ‘ರಾಷ್ಟ್ರೀಯ ಆವಿಷ್ಕಾರ ಅಭಿಯಾನ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಅಕ್ಷಯ ಮೂಲತಃ ಉತ್ತರ ಪ್ರದೇಶದವಳು. ಆಕೆಯ ತಂದೆ ಅಮರನಾಥ್ ಮತ್ತು ತಾಯಿ ಪೂನಮ್ಮ 12 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಯಣ್ಣಂಗೂರಿಗೆ ಬಂದು ನೆಲೆಸಿದ್ದಾರೆ. ಅಚ್ಚರಿಯ ವಿಷಯವೆಂದರೆ, ಅಕ್ಷಯ ಮನೆಯಲ್ಲಿ ಹಿಂದಿ ಮಾತನಾಡಿದರೂ, ಶಾಲೆಯಲ್ಲಿ ಅದ್ಭುತವಾಗಿ ಕನ್ನಡ ಕಲಿತಿದ್ದಾಳೆ. ಈಗ ಅದೇ ಕನ್ನಡ ಭಾಷೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾಳೆ.
ಅಧಿಕಾರಿಗಳಿಂದ ಮೆಚ್ಚುಗೆ: ಅಕ್ಷಯಳ ಈ ಸಾಧನೆಯನ್ನು ಕೇಳಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ (DDPI) ವಿ. ರಮೇಶ್ ಅವರು ಸ್ವತಃ ಶಾಲೆಗೆ ಭೇಟಿ ನೀಡಿ ಸಿಹಿ ಹಂಚಿ ಅಭಿನಂದಿಸಿದರು. “ಸರ್ಕಾರಿ ಶಾಲೆಯ ಮಕ್ಕಳು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಅಕ್ಷಯ ಸಾಕ್ಷಿ” ಎಂದು ಅವರು ಶ್ಲಾಘಿಸಿದರು.
ಈ ಸಾಧನೆಯ ಹಿಂದೆ ಶಾಲೆಯ ಮುಖ್ಯ ಶಿಕ್ಷಕ ವಿ. ಶ್ರೀನಿವಾಸ್ ಮತ್ತು ಶಿಕ್ಷಕರಾದ ಕಿರಣ್ ಹಾಗೂ ಶ್ರೀಲಕ್ಷ್ಮಿ ಅವರ ಶ್ರಮವಿದೆ. ಅವರು ಅಕ್ಷಯಗೆ ವಿಶೇಷ ತರಬೇತಿ ನೀಡಿ ಈ ಮಟ್ಟಕ್ಕೆ ಬೆಳೆಸಿದ್ದಾರೆ.








