ಶಿಡ್ಲಘಟ್ಟದ ಜಂಗಮಕೋಟೆಯ 28 ವರ್ಷದ ಯುವಕ ಕೊರೊನ ಪಾಸಿಟಿವ್ ಎಂದು ಮಂಗಳವಾರ ವರದಿಯಾಗಿದೆ, ಇದರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 10 ಕ್ಕೆ ಏರಿಕೆ.
ಎಸ್ಸೆಸ್ಸೆಲ್ಸಿಯ ಕಳೆದ ಎರಡು ವಿಷಯಗಳ ಪರೀಕ್ಷೆಗಳಲ್ಲಿ ಶೇ 98 ರಷ್ಟು ಹಾಜರಾತಿ ಹೊಂದಿದ್ದಾರೆ. ನಾನು ಭೇಟಿ ಮಾಡಿದ ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಯ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲೂ ಕೂಡ ತೊಂದರೆ, ಅಡಚಣೆಯಿಲ್ಲದೆ, ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಡಾಲ್ಫಿನ್ ವಿದ್ಯಾಸಂಸ್ಥೆ, ಬಿ.ಜಿ.ಎಸ್.ವಿದ್ಯಾ ಸಂಸ್ಥೆ, ಸರ್ಕಾರಿ ಪ್ರೌಢಶಾಲೆ ಮತ್ತು ಜಂಗಮಕೋಟೆ ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಸೇರಿದಂತೆ ಒಟ್ಟು ನಾಲ್ಕು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.
ಲಾಕ್ ಡೌನ್ ಒಂದೇ ಕೊರೊನಾಗೆ ಉತ್ತರವಲ್ಲ. ಜನರು ಕೂಡ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವ ಮಹತ್ವವನ್ನು ಮನಗಾಣಬೇಕು. ನಾವೆಲ್ಲರೂ “ಕ್ವಿಟ್ ಕೊರೊನಾ” ಎನ್ನಬೇಕು. ಅದಕ್ಕಾಗಿ ಜನತೆ ಮನಸ್ಸುಮಾಡಬೇಕಾಗಿದೆ ಎಂದರು.
ಆನ್ ಲೈನ್ ಶಿಕ್ಷಣ
ನಾವೊಂದು ತಜ್ಞರ ಸಮಿತಿಯೊಂದನ್ನು ರಚಿಸಿದ್ದೇವೆ. ಅವರು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅಧ್ಯಯನ ಮಾಡಿ, ನಮ್ಮ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಶಿಫಾರಸ್ಸು ಮಾಡಲಿದ್ದಾರೆ. ಮುಖ್ಯವಾಗಿ ನಮ್ಮ ಸರ್ಕಾರಿ ಶಾಲಾ ಮಕ್ಕಳು ಅದರಲ್ಲೂ ಗ್ರಾಮಾಂತರ ಮಕ್ಕಳು ಯಾರೂ ಕೂಡ ತಂತ್ರಜ್ಞಾನದ ಬಳಕೆಯಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಬಹಳ ಬೇಗ ಅದಕ್ಕಾಗಿ ಒಂದು ವ್ಯವಸ್ಥೆ ರೂಪಿಸುತ್ತೇವೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಭವ
“ಹಿಂದಿನ ಪರೀಕ್ಷೆಗೂ ಈಗಿನ ಪರೀಕ್ಷೆಗೂ ಏನು ವ್ಯತ್ಯಾಸ, ಕಳೆದ ಎರಡು ದಿನಗಳ ಪರೀಕ್ಷೆ, ಅದರ ಹಿಂದಿನ ತಯಾರಿ. ಮಕ್ಕಳಿಗೆ ಫೋನ್ ಮಾಡಿಸಿದ್ದು, ಮಕ್ಕಳು ಪರೀಕ್ಷೆಗೆ ಹೇಗೆ ಬರುತ್ತಾರೆ, ವಾಹನ ಸೌಕರ್ಯ ಇತ್ಯಾದಿ… ನಿಮ್ಮ ಅನುಭವ ತಿಳಿಸಿ”, ಎಂದು ಸಚಿವರು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಅವರನ್ನು ಕೇಳಿದರು.
“ಮಕ್ಕಳೊಂದಿಗೆ ಈ ಬಾರಿಯ ಪರೀಕ್ಷೆ ನಮಗೂ ಒಂದು ಸಾವಾಲಾಗಿದೆ. ಆತ್ಮವಿಶ್ವಾಸ ಮತ್ತು ವಿಶ್ವಾಸ ತುಂಬುವಲ್ಲಿ ನಾವು ಕೈಗೊಂಡ ಕ್ರಮಗಳು ಫಲಪ್ರದವಾಗಿವೆ. ಮಕ್ಕಳು ಹಿಂದಿಗಿಂತ ಹೆಚ್ಚು ಶಿಸ್ತಾಗಿದ್ದಾರೆ. ಇದೊಂದು ನಮ್ಮೆಲ್ಲರ ಬದುಕಿನ ಬಹುದೊಡ್ಡ ಮೈಲಿಗಲ್ಲು” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಉತ್ತರಿಸಿದರು.
ಟ್ರೀಟೆಡ್ ವಾಟರ್
ಮಳೆ ಚೆನ್ನಾಗಿ ಆಗಿದೆಯಾ? ನೀರಿನ ಸಮಸ್ಯೆ ಇಲ್ಲವಾ? ಎಂದು ಸಚಿವರು ತಹಶೀಲ್ದಾರ್ ಕೆ.ಅರುಂಧತಿ ಅವರನ್ನು ವಿಚಾರಿಸಿದರು. ಒಳ್ಳೆ ಮಳೆ ಬಿದ್ದಿದೆ ಎಂದು ಅವರು ಉತ್ತರಿಸಿದರು. ಈ ಸಂದರ್ಭದಲ್ಲಿ ಡಾಲ್ಫಿನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಶೋಕ್, “ಎಚ್.ಎನ್.ವ್ಯಾಲಿ ನೀರು ನಮ್ಮ ಕೆರೆಗಳಿಗೆ ಬಂದರೆ ಎಷ್ಟೋ ಅನುಕೂಲವಾಗುತ್ತದೆ” ಅಂದರು.
ಸಚಿವರು ತಕ್ಷಣ, “ಅದು ಟ್ರೀಟೆಡ್ ವಾಟರ್. ಸಿಂಗಾಪುರದಲ್ಲಿ ವಿಶ್ವ ಜಲ ಸಭೆಯಲ್ಲಿ ಪಾಲ್ಗೊಂಡಿದ್ದೆ. ಅಲ್ಲಿನ ಪ್ರಧಾನಿ ಬಂದು ನಮ್ಮೊಳಗೊಬ್ಬರಂತೆ ಕುಳಿತರು. ಅಲ್ಲಿಟ್ಟಿದ್ದ ನೀರನ್ನು ಕುಡಿದರು. ಅದನ್ನು ಅವರು “ನ್ಯೂ ವಾಟರ್” ಎಂದು ಕರೆಯುತ್ತಾರೆ. ಅದೆಲ್ಲಾ ಟ್ರೀಟೆಡ್ ವಾಟರ್. ನಾವೆಲ್ಲರೂ ಅದನ್ನೇ ಕುಡಿದೆವು. ಗೊತ್ತೇ ಆಗದಷ್ಟು ಸ್ವಚ್ಛವಾಗಿತ್ತು” ಎಂದು ವಿವರಿಸಿದರು.
ಸ್ಕೌಟ್ ಮತ್ತು ಗೈಡ್ಸ್
ಸ್ಕೌಟ್ ಮತ್ತು ಗೈಡ್ಸ್ ಉತ್ತಮ ಸೇವೆ ಸಲ್ಲಿಸುತ್ತಿದ್ದೀರಿ. ನಿಮಗೆಲ್ಲಾ ಧನ್ಯವಾದಗಳು. ಒಂದೊಂದು ಕೇಂದ್ರದಲ್ಲಿ ಎಷ್ಟು ಮಕ್ಕಳನ್ನು ನಿಯೋಜಿಸಲಾಗಿದೆ ಎಂದು ಸ್ಕೌಟ್ ಮತ್ತು ಗೈಡ್ಸ್ ತಾಲ್ಲೂಕು ಕಾರ್ಯದರ್ಶಿ ಸಿ.ಬಿ.ಪ್ರಕಾಶ್ ಅವರಲ್ಲಿ ವಿಚಾರಿಸಿಕೊಂಡರು.
ನ್ಯಾಯಾಲಯ ಸಮುಚ್ಛಯ
ನಾನು ಕಾನೂನು ಸಚಿವನಾಗಿದ್ದಾಗ ಶಿಡ್ಲಘಟ್ಟದಲ್ಲಿ ನ್ಯಾಯಾಲಯ ಕಟ್ಟಡಕ್ಕಾಗಿ ಹಿರಿಯ ವಕೀಲರೊಬ್ಬರು ಬಹಳ ಪ್ರಯತ್ನಿಸಿದ್ದರು. ಅವರ ಒತ್ತಾಯವನ್ನು ಕಂಡು ಇವರಿಗೆ ಒಪ್ಪಿಗೆ ಕೊಡಲೇಬೇಕು ಅನ್ನಿಸಿತ್ತು. ಹೇಗಿದೆ ಕಟ್ಟಡ ಎಂದು ಪ್ರಶ್ನಿಸಿದರು. ಡಾಲ್ಫಿನ್ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಉತ್ತರಿಸಿ, “ನ್ಯಾಯಾಲಯ ಕಟ್ಟಡ ಸುಂದರವಾಗಿದೆ. ನೀವು ಭೇಟಿ ಕೊಡುವ ಶಾಲೆಯ ಮಾರ್ಗದಲ್ಲಿಯೇ ಇದೆ. ಆ ಹಿರಿಯ ವಕೀಲರು ಎಂ.ಪಾಪಿರೆಡ್ಡಿ” ಎಂದು ಹೇಳಿದರು.
ಆಶಾ ಜ್ಯೋತಿಗಳು
ಆಶಾ ಕಾರ್ಯಕರ್ತೆಯರಿಲ್ಲದಿದ್ದರೆ ನಮ್ಮ ಸಮಾಜ ನಿರಾಶೆಯಲ್ಲಿರುತ್ತಿತ್ತು. ನೀವೇ ನಮ್ಮ ಆಶಾ ಜ್ಯೋತಿಗಳು ಎಂದು ಥರ್ಮಲ್ ಚೆಕ್ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಧನ್ಯವಾದ ತಿಳಿಸಿದರು.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ, ಎಸ್.ಜಿ.ನಾಗೇಶ್, ಶಿಕ್ಷಣಾಧಿಕಾರಿಗಳಾದ ಶಿವಲಿಂಗಯ್ಯ, ಜಯರಾಮರೆಡ್ಡಿ, ವಿಷಯ ಪರಿವೀಕ್ಷಕರು ಕೃಷ್ಣಕುಮಾರಿ, ಇಸಿಒ ಭಾಸ್ಕರಗೌಡ, ತಹಶಿಲ್ದಾರ್ ಕೆ.ಅರುಂಧತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಹಾಜರಿದ್ದರು.
ಶಿಡ್ಲಘಟ್ಟದ ಗ್ರಾಮಾಂತರ ಪ್ರದೇಶಗಳಲ್ಲಿ ಇತ್ತೀಚಿಗೆ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಮವಾರ ಮತ್ತೊಂದು ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ, ಇದರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 9 ಕ್ಕೆ ಏರಿಕೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಶನಿವಾರ ಒಕ್ಕಲಿಗರ ಯುವ ಸೇನೆ ಸಂಘದ ವತಿಯಿಂದ ಸಂಘದ ಸ್ವಂತ ನಿವೇಶನದಲ್ಲಿ ನಾಮ ಫಲಕ ಅಳವಡಿಸಿ, ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಸರಳವಾಗಿ ಆಚರಿಸಿದ ಸಂದರ್ಭದಲ್ಲಿ ಹಂಡಿಗನಾಳ ಒಕ್ಕಲಿಗರ ಯುವಸೇನೆ ಸಂಘದ ಗೌರವಾಧ್ಯಕ್ಷ ಗೋವಿಂದರಾಜು ಮಾತನಾಡಿದರು. ನಿವೇಶನ ಚಿಕ್ಕದಾದರೂ ಚೊಕ್ಕವಾದ ಜನೋಪಯೋಗಿಯಾದ ಕೆಂಪೇಗೌಡ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದರು. ಕೆಂಪೇಗೌಡರು ಜಾತ್ಯಾತೀತ ಮನೋಭಾವದಿಂದ ದೂರದೃಷ್ಟಿಯಿಂದ ನಾಡನ್ನು ಕಟ್ಟುವಲ್ಲಿ ಶ್ರಮಿಸಿದವರು. ಅವರ ಆದರ್ಶದಂತೆ ನಾವುಗಳು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸೋಣ ಎಂದರು. ಈ ಸಂದರ್ಭದಲ್ಲಿ ಹಂಡಿಗನಾಳ ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ವೆಂಕಟಪ್ಪ, ಆರ್.ಚಂದ್ರು, ನಾರಾಯಣಸ್ವಾಮಿ, ಬಿ.ಎಂ.ಜಯರಾಮ್, ಅರುಣ್ ಕುಮಾರ್, ಅನಿಲ್, ಸತೀಶ್, ವಿ.ಚನ್ನಕೃಷ್ಣಪ್ಪ, ಶ್ರೀನಿವಾಸಪ್ಪ ಹಾಜರಿದ್ದರು.
ಶಿಡ್ಲಘಟ್ಟದ ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅವರಿಗೆ ಕೋವಿಡ್ ಸೋಂಕು ಇರುವುದು ಶುಕ್ರವಾರ ರಾತ್ರಿ ದೃಢಪಟ್ಟಿದೆ. ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವುದು ತಿಳಿದುಬಂದಿದೆ.
ಶನಿವಾರ ಬೆಳಿಗ್ಗೆ ಗ್ರಾಮಾಂತರ ಠಾಣೆ ಮತ್ತು ಕನಕನಗರದಲ್ಲಿರುವ ಎಸ್ಐ ಮನೆಯನ್ನು ವೈರಸ್ ನಾಶಕ ದ್ರಾವಣ ಸಿಂಪಡಿಸಿ ಶುಚಿಗೊಳಿಸಲಾಗಿದೆ. ಪ್ರಸ್ತುತ ಎಸ್ಐ ಮನೆ ಪ್ರದೇಶದಲ್ಲಿ ಸೀಲ್ಡೌನ್ ಮಾಡಲಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈವರೆಗೆ 8 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.
ಶುಕ್ರವಾರ ನಗರದ ಹೊರವಲಯದ ಹನುಮಂತಪುರದ ಬಳಿಯಿರುವ ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಘಟಕ (ಎಂ.ಎಸ್.ಪಿ.ಟಿ.ಸಿ) ಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿದ್ದರು. ಜೊತೆಗೆ ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಬಳಿಯ ಸರ್ವೇ ನಂ 10 ರಲ್ಲಿ ಪೊಲೀಸ್ ಇಲಾಖೆಗೆ ಮಂಜೂರಾಗಿರುವ 4 ಎಕರೆ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ಕುಮಾರ್ ಶುಕ್ರವಾರ ಚಾಲನೆ ನೀಡಿದ್ದರು. ಈ ಎರಡೂ ಕಾರ್ಯಕ್ರಮಗಳಲ್ಲಿ ತಹಶೀಲ್ದಾರ್ ಕೆ.ಅರುಂದತಿ, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಅವರೊಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಎಸ್.ಐ ಕೂಡ ಭಾಗವಹಿಸಿದ್ದರು.
ಪ್ರಾಥಮಿಕ ಸಂಪರ್ಕಿತರು 29 ಮಂದಿ ಮತ್ತು ದ್ವಿತೀಯ ಸಂಪರ್ಕಿತರು 87 ಮಂದಿಯ ಸ್ವಾಬ್ ಪರೀಕ್ಷೆ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ.
ಶಿಡ್ಲಘಟ್ಟ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯ ಪರೀಕ್ಷಾ ವರದಿ ಕೊರೊನ ಪಾಸಿಟಿವ್ ಬಂದಿದ್ದು, ಈ ಪ್ರಕರಣದೊಂದಿಗೆ ಇತ್ತೀಚಿಗೆ ಕೊರೊನ ನೆಗೆಟಿವ್ ಆದ ಇಬ್ಬರು ಗರ್ಭಿಣಿಯರ ಪ್ರಕರಣಗಳು ಸೇರಿದಂತೆ ತಾಲ್ಲೂಕಿನ ಒಟ್ಟು ಕೊರೊನಾ ಸಕ್ರಿಯ ಪೀಡಿತರ ಸಂಖ್ಯೆ 8 ಕ್ಕೇರಿದೆ.
ತಾಲ್ಲೂಕಿನ ಹೊರವಲಯದ ಹನುಮಂತಪುರದ ಬಳಿಯಿರುವ ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಘಟಕ (ಎಂ.ಎಸ್.ಪಿ.ಟಿ.ಸಿ) ಕ್ಕೆ ಶುಕ್ರವಾರ ದಿಡೀರ್ ಭೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು.
0-6 ವರ್ಷದ ಮಕ್ಕಳು ಸೇರಿದಂತೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡುವಲ್ಲಿ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಅಂಗನವಾಡಿ ಮಕ್ಕಳು ಹಾಗೂ ಮಹಿಳೆಯರಿಗಾಗಿ ಆಹಾರ ಪದಾರ್ಥ ತಯಾರಿಸುವ ಘಟಕಗಳಲ್ಲಿ ವ್ಯವಸ್ಥಿತವಾದ ವಾತಾವರಣ ಮತ್ತು ಸ್ವಚ್ಚತೆಯಿರುವುದಿಲ್ಲ ಎಂಬ ಸಾರ್ವಜನಿಕರ ತಕರಾರಿದೆ. ಹಾಗಾಗಿ ಇಂದು ತಾಲ್ಲೂಕಿನ ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಘಟಕಕ್ಕೆ ದಿಡೀರ್ ಭೇಟಿ ನೀಡಿದ್ದೇನೆ. ಇಲ್ಲಿನ ಘಟಕದಲ್ಲಿ ಯಾವುದೇ ಸಮಸ್ಯೆಯಿಲ್ಲ, ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ. ಘಟಕದಲ್ಲಿ ಸ್ವಚ್ಚತೆಯಿದೆ ಮತ್ತು ಇಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ತುಂಬಾ ಶಿಸ್ತಿನಿಂದ ಆಹಾರ ಪದಾರ್ಥ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ರಾಜ್ಯಾದ್ಯಂತ ಇರುವ ಎಲ್ಲಾ ಎಂಎಸ್ಪಿಟಿಸಿ ಘಟಕಗಳಿಗೂ ಭೇಟಿ ನೀಡುತ್ತಿದ್ದು ಸ್ವಚ್ಚತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳಲು ಸೂಚನೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸುರೇಖಾ, ಉಪನಿರ್ದೇಶಕ ನಾರಾಯಣಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ಕುಮಾರ್, ತಹಶೀಲ್ದಾರ್ ಕೆ.ಅರುಂದತಿ, ಸಿಡಿಪಿಓ ನಾಗವೇಣಿ ಹಾಜರಿದ್ದರು.
ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ದೂರದ ಮಾರುಕಟ್ಟೆಗೆ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ರೈತರು ಗ್ರಾಮದಲ್ಲಿ ಒಟ್ಟಾಗಿ ಗುಂಪನ್ನು ರಚಿಸಿಕೊಂಡು ಗುಂಪಿನಲ್ಲಿ ಒಬ್ಬರನ್ನು ಆಯ್ಕೆಯನ್ನು ಮಾಡಿಕೊಂಡು ದೂರದ ಚೆನ್ನೈ ಅಥವಾ ಹೈದರಾಬಾದ್ ಮಾರುಕಟ್ಟೆಯನ್ನು ಭೇಟಿ ಮಾಡಿ ಮಾರುಕಟ್ಟೆ ಮಾಡಿದರೆ ಉತ್ತಮ ಬೆಲೆ ಪಡೆಯಬಹುದೆಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಕೀರ್ತಿ ತಿಳಿಸಿದರು.
ಬಶೆಟ್ಟಹಳ್ಳಿ ಹೋಬಳಿಯ ರಾಯಪ್ಪನಹಳ್ಳಿಯ ಪ್ರಗತಿಪರ ಕೃಷಿಕ ಸತೀಶ್ ನಾರಾಯಣರೆಡ್ಡಿ ಅವರ ತೋಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಮಗ್ರ ತೋಟಗಾರಿಕಾ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಉತ್ತಮ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಮಾರುಕಟ್ಟೆಯನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಮಾಡುವುದಿಲ್ಲ. ಆದ್ದರಿಂದ ಬರುವ ಲಾಭ ಎಲ್ಲವೂ ದಲ್ಲಾಳಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ಸೂಕ್ತ ದಾಸ್ತಾನು ವ್ಯವಸ್ಥೆಯನ್ನು ಮಾಡಿಕೊಂಡು, ಬೆಳೆಗಳನ್ನು ಉತ್ತಮ ಬೆಲೆ ಬರುವ ತನಕ ದಾಸ್ತಾನು ಮಾಡಿದರೆ ಹೆಚ್ಚು ಆದಾಯವನ್ನು ಗಳಿಸಬಹುದು ಎಂದರು.
ತೋಟಗಾರಿಕಾ ಬೆಳಗಳಲ್ಲಿ ಅಲ್ಪಾವಧಿ ಬೆಳೆ ಹಾಗೂ ದೀರ್ಘಾವಧಿ ಬೆಳೆಗಳಿದ್ದು ಯಾವುದೇ ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣು ಪರೀಕ್ಷೆ ಮಾಡುವುದು ಬಹುಮುಖ್ಯ ಎಂದು ಸಲಹೆ ನೀಡಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ದೊರಕುವ ಸಹಾಯಧನಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಚೌಡರೆಡ್ಡಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯವರು ದೇವಸ್ಥಾನ ಜೀರ್ಣೋದ್ದಾರ ಕಾರ್ಯಕ್ರಮ, ಕೆರೆಯನ್ನು ಹೂಳೆತ್ತುವ ಕಾರ್ಯಕ್ರಮ, ಹಾಲಿನ ಡೈರಿಗಳಿಗೆ ಸಹಾಯಧನ ವಿತರಿಸುವುದು ಹಾಗೂ ಇನ್ನಿತರ ಹಲವಾರು ಕಾರ್ಯಕ್ರಮವನ್ನು ಮಾಡುವ ಮೂಲಕ ಗ್ರಾಮೋದ್ಧಾರದ ಕಾರ್ಯ ನಡೆಸಿದೆ ಎಂದರು.
ಒಕ್ಕೂಟದ ಅಧ್ಯಕ್ಷ ಮಂಜುನಾಥ್, ಸೇವಾಪ್ರತಿನಿಧಿ ಶಫೀವುಲ್ಲಾ, ಕೃಷಿ ಮೇಲ್ವಚಾರಕ ಹರೀಶ್ಕುಮಾರ್, ಸೇವಾಪ್ರತಿನಿಧಿ ನಾರಾಯಣಸ್ವಾಮಿ ಹಾಜರಿದ್ದರು.
ಶಿಡ್ಲಘಟ್ಟದ ಇಲಾಹಿನಗರ ಮತ್ತು ಎರಡನೇ ಟಿ.ಎಂ.ಸಿ ಲೇಔಟ್ ನಿಂದ ಈ ಮೊದಲು ದಾಖಲಾಗಿದ್ದ ಗರ್ಭಿಣಿಯರ ಪ್ರಕರಣಗಳು ಕೊರೊನಾ ನೆಗೆಟಿವ್ ಎಂದು ತಿಳಿದುಬಂದಿದ್ದು, ಚಿಕ್ಕಬಳ್ಳಾಪುರದ ಕೋವಿಡ್ ವಾರ್ಡಿನಿಂದ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ ಪ್ರಾರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನದ ಆಂಗ್ಲ ಭಾಷೆಯ ಪರೀಕ್ಷೆಯನ್ನು 2,398 ವಿದ್ಯಾರ್ಥಿಗಳು ಬರೆದರು. ಅವರಲ್ಲಿ 1,182 ಹೆಣ್ಣುಮಕ್ಕಳು ಮತ್ತು 1,216 ಗಂಡುಮಕ್ಕಳಿದ್ದರು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು 2,479 ವಿದ್ಯಾರ್ಥಿಗಳಲ್ಲಿ 81 ಜನ ಗೈರಾಗಿದ್ದರು. ತಾಲ್ಲೂಕಿನ ಜಂಗಮಕೋಟೆಯ ಕಂಟೈನ್ ಮೆಂಟ್ ಪ್ರದೇಶದಿಂದ ಆರು ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಅವರಿಗೆ ಪರೀಕ್ಷೆಯನ್ನು ಬರೆಯಲು ಬೇರೆಡೆ ಸ್ಥಳಾವಕಾಶ ಮಾಡಿಕೊಡಲಾಗಿತ್ತು. 50 ಮಂದಿ ವಲಸೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು. ಕೆ.ಪಿ.ಎಸ್.ಬಶೆಟ್ಟಹಳ್ಳಿ, 11 ನೇ ಮೈಲಿಯ ಮೊರಾರ್ಜಿ ದೇಸಾಯಿ ಪ್ರೌಢಶಾಲೆ, ಮೇಲೂರು ಸರ್ಕಾರಿ ಪ್ರೌಢಶಾಲೆ, ಎಚ್.ಕ್ರಾಸ್. ಸುಮುಖ ಪ್ರೌಢಶಾಲೆ, ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆ, ಶಿಡ್ಲಘಟ್ಟ ಸರ್ಕಾರಿ ಪ್ರೌಢಶಾಲೆ, ಡಾಲ್ಫಿನ್ ಪ್ರೌಢಶಾಲೆ, ಕದಿರಿನಾಯಕನಹಳ್ಳಿ ಎಸ್.ಆರ್.ಇ.ಟಿ ಪ್ರೌಢಶಾಲೆ, ಬಿ.ಜಿ.ಎಸ್. ಪ್ರೌಢಶಾಲೆ ಮತ್ತು ವಾಸವಿ ಪ್ರೌಢಶಾಲೆ ಸೇರಿದಂತೆ ಒಟ್ಟು ಹತ್ತು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಫೌಜಿಯಾ ತರನ್ನುಮ್ ಅವರು ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಪರೀಕ್ಷಾ ಸೌಕರ್ಯಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಿದರು. ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚು ಗಮನ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಇಓ ನಿರ್ಲಕ್ಷ್ಯವಹಿಸುವ ಜೊತೆಗೆ ಕ್ಷೇತ್ರದಾದ್ಯಂತ ವಿವಿಧ ಕಾಮಗಾರಿಗಳ ಪರಿಶೀಲನೆಗೆ ಹೋದಾಗ ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತರದೇ ಅವಮಾನ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಇಒ ಶಿವಕುಮಾರ್ ಅವರ ವಿರುದ್ಧ ಹರಿಹಾಯ್ದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.
ಕಳೆದ ಕೆಲ ವರ್ಷಗಳಿಂದ ತಾಲ್ಲೂಕು ಪಂಚಾಯಿತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರ ಸಂಬಳದಲ್ಲಿ ಪಿ.ಎಫ್ ಗಾಗಿ ಹಣ ಕಡಿತಗೊಳಿಸುತ್ತಿದ್ದು, ಸಂಬಂದಪಟ್ಟ ಏಜೆನ್ಸಿಯವರು ಫಿಎಫ್ ಪಾವತಿಸಿಲ್ಲ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಇಓ ಏನು ಕ್ರಮ ಕೈಗೊಂಡಿದ್ದೀರಿ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಲಕ್ಷ್ಮಿನಾರಾಯಣ ಪ್ರಶ್ನಿಸಿದರು.
ಇದಕ್ಕೆ ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್ ಉತ್ತರಿಸಿ, ತಾಲ್ಲೂಕು ಪಂಚಾಯಿತಿ ಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ನೌಕರರಿಗೆ ಸಂಬಳವನ್ನು ಏಜೆನ್ಸಿ ಮೂಲಕ ನೀಡುವುದರಿಂದ ಸಂಬಂಧಿಸಿದ ನೌಕರರು ಏಜೆನ್ಸಿ ವಿರುದ್ಧ ಪ್ರಕರಣ ದಾಖಲಿಸಬೇಕೆ ಹೊರತು ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.
ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಸಂಬಂಧಪಟ್ಟ ನೌಕರರು ಲಿಖಿತವಾಗಿ ತಾಲ್ಲೂಕು ಪಂಚಾಯಿತಿಗೆ ಮನವಿಯೊಂದನ್ನು ನೀಡಿ. ಅದರಂತೆ ಸಂಬಂದಪಟ್ಟ ಏಜೆನ್ಸಿಯವರನ್ನು ಕರೆಸಿ ಮಾತನಾಡಿ ಸರಿಪಡಿಸಲಾಗುವುದು. ಒಂದು ವೇಳೆ ಮಾತುಕತೆಯಲ್ಲಿ ಬಗೆಹರಿಯದಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಮುಂದಾಗುವ ಬಗ್ಗೆ ಯೋಚಿಸೋಣ ಎಂದರು.
ಇನ್ನು ಕಳೆದ ಜೂನ್ 5 ರಂದು ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಕಡೆಗಣಿಸಿದ್ದರ ಬಗ್ಗೆ ಬಹುತೇಕ ಸದಸ್ಯರು ಇಓ ವಿರುದ್ಧ ಹರಿಹಾಯ್ದರು. ತಾಲ್ಲೂಕು ಪಂಚಾಯಿತಿಗೆ ಸೇರಿದ ಸ್ಥಳದಲ್ಲಿ ಮಾಡುವ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಸದಸ್ಯರನ್ನೇ ಕಡೆಗಣಿಸಿದ್ದರ ಹಿಂದೆ ಇಓ ಕೈವಾಡವಿದೆ. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೇ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸುವುದಾದರೆ ಜನಪ್ರತಿನಿಧಿಗಳ ಅಗತ್ಯ ಇಲ್ಲವೇ.
ಇಒ ಅವರ ವರ್ತನೆ ನೋಡಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಓಗಳು ಸಹ ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ಯಾವುದೇ ಕಾಮಗಾರಿಯ ಮಾಹಿತಿ ನೀಡುತ್ತಿಲ್ಲ. ಕೆಲ ಪಿಡಿಓ ಗಳು ಇದೇ ತಾಲ್ಲೂಕಿನಲ್ಲಿ ಸುಮಾರು ಏಳೆಂಟು ವರ್ಷಗಳಿಂದ ಸೇವೆ ಮಾಡುತ್ತಿರುವ ಪಿಡಿಓಗಳು ತಾವು ಮಾಡುವ ಕೆಲಸವನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರಿ ನೌಕರರೆಲ್ಲಾ ರಾಜಕೀಯ ಮಾಡುವುದಾದರೆ ಜನರಿಂದ ಆಯ್ಕೆ ಯಾಗಿ ಬಂದ ನಾವುಗಳು ಜನಕ್ಕೆ ಏನು ಉತ್ತರ ನೀಡಬೇಕು. ಕಳೆದ ಸುಮಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿರುವ ಪಿಡಿಓಗಳನ್ನು ಕೂಡಲೇ ಇಲ್ಲಿಂದ ಬೇರೆಡೆಗೆ ವರ್ಗಾವಣೆ ಮಾಡಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಎಂದು ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮುನಿನರಸಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಶಶಿಕುಮಾರ್, ಇಓ ಬಿ.ಶಿವಕುಮಾರ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.
ಶಿಡ್ಲಘಟ್ಟ ನಗರದ ಮಯೂರ ವೃತ್ತದ ಬಳಿಯ ನಿವಾಸಿ ಯುವಕ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಈ ಪ್ರಕರಣದೊಂದಿಗೆ ಬೆಂಗಳೂರಿನಲ್ಲಿ ದಾಖಲೆಯಾದ ಮೊದಲನೆಯ ತಾಲ್ಲೂಕಿನ ಕೊರೊನ ಪಾಸಿಟಿವ್ ಪ್ರಕರಣ ಹೊರತುಪಡಿಸಿ ತಾಲ್ಲೂಕಿನ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 9 ಕ್ಕೇರಿದೆ.
ಶಿಡ್ಲಘಟ್ಟ ತಾಲ್ಲೂಕಿನ ಕದಿರಿನಾಯಕನಹಳ್ಳಿಯ 30 ವರ್ಷದ ಯುವಕ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಈ ಪ್ರಕರಣದೊಂದಿಗೆ ತಾಲ್ಲೂಕಿನ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 9 ಕ್ಕೇರಿದೆ. ಬಟ್ಟೆ ಖರೀದಿಗಾಗಿ ಈತ ಬೆಂಗಳೂರಿಗೆ ಪ್ರಯಾಣ ಮಾಡಿದ್ದನೆಂದು ತಿಳಿದು ಬಂದಿದೆ.
ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ 0-6 ವರ್ಷದ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ತಾಲ್ಲೂಕಿನಾದ್ಯಂತ ಒಂದು ವಾರದ ಕಾಲ ಮಕ್ಕಳ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು ಶನಿವಾರ ನಗರದ ಆರು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.
ಮಕ್ಕಳ ತೂಕ ಹಾಗೂ ಎತ್ತರ ಪರೀಕ್ಷೆ ನಡೆಸಿದ ವೈದ್ಯರು ಮಕ್ಕಳಿಗೆ ಸಕಾಲದಲ್ಲಿ ಲಸಿಕೆ ಹಾಕಿಸುವುದು ಸೇರಿದಂತೆ ಸೂಕ್ತ ಪ್ರಮಾಣದ ಪೌಷ್ಠಿಕ ಆಹಾರ ಸೇರಿದಂತೆ ಉತ್ತಮ ಪರಿಸರದಲ್ಲಿ ಬೆಳೆಸುವಂತೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಆರ್ಬಿಎಸ್ಕೆ ವೈದ್ಯಾಧಿಕಾರಿಗಳಾದ ಡಾ.ವೈಶಾಲಿ, ರಾಘವೇಂದ್ರಶರ್ಮ, ಭರತ್ ಅಭಿಲಾಶ್, ಗುರು ಆರೋಗ್ಯ ಇಲಾಖೆಯ ಕಿರಿಯ ಶುಶ್ರೂಷಕಿ ವಿಜಯ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.