ಕಾಳಿಕಾಂಭ ಕಮ್ಮಠೇಶ್ವರ ದೇವಾಲಯದಲ್ಲಿ ಆಷಾಡ ಮಾಸದ ವಿಶೇಷ ಲಕ್ಷ್ಮೀ ಸಹಸ್ರನಾಮ ಪೂಜೆಯನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ನಗರದ ನಗರ್ತಪೇಟೆಯ ಕಾಳಿಕಾಂಭ ಕಮ್ಮಠೇಶ್ವರ ದೇವಾಲಯದಲ್ಲಿ ಲಕ್ಷ್ಮೀ ಹಾಗೂ ವಿಘ್ನನಿವಾರಕ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ತುಳಸಿಯ ದಳಗಳನ್ನು ಎಣಿಸುತ್ತಾ ಸಹಸ್ರ ಅರ್ಚನೆಯನ್ನು ನೆರವೇರಿಸಿ ಜೀವನದಲ್ಲಿ ಎದುರಾಗುವ ಎಲ್ಲ ವಿಘ್ನಗಳನ್ನು ನಿವಾರಿಸುವ ಜತೆಗೆ ಎಲ್ಲ ಸಂಪತ್ತನ್ನು ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪೂಜಿಸಿ ಪ್ರಾರ್ಥಿಸಿದರು.
ಆಷಾಡ ಮಾಸದಲ್ಲಿ ಅಷ್ಟಲಕ್ಷ್ಮಿಯರನ್ನು ಪೂಜಿಸಿದರೆ ಎಲ್ಲ ಸುಖ ಸಂಪತ್ತು ಐಶ್ವರ್ಯಗಳು ಪ್ರಾಪ್ತವಾಗುತ್ತವೆ ಎಂಬ ನಂಬಿಕೆಯಿಂದ ದೇವಾಲಯದ ಸುತ್ತ ಮುತ್ತಲ ನೂರಾರು ಮುತ್ತೈದೆಯರು ಸೇರಿ ಲಕ್ಷ್ಮೀಪೂಜೆಯನ್ನು ನೆರವೇರಿಸಿ ತಂಬಿಟ್ಟು ದೀಪಗಳನ್ನು ಬೆಳಗಿ ಹೆಸರು ಬೇಳೆ ಬೆಲ್ಲದ ಪಾನಕವನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಕಾಳಿಕಾಂಭ ಕಮ್ಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಮಾಚಾರ್ ಮಾತನಾಡಿ, ಎಲ್ಲರೂ ಒಂದಲ್ಲ ಒಂದು ಕೆಲಸ ಮಾಡಿಕೊಂಡಿದ್ದು ಬಿಡುವಿಲ್ಲದ ಕೆಲಸ ಕಾರ್ಯಗಳ ಒತ್ತಡದ ನಡುವೆ ಧಾರ್ಮಿಕ ಚಟುವಟಿಕೆಗಳು ಸೇರಿ ಮಾನಸಿಕ ಹಾಗೂ ದೈಹಿಕ ಕಸರತ್ತಿಗೆ ಅವಕಾಶವೇ ಇಲ್ಲದಾಗಿದೆ. ಹಾಗಾಗಿ ಈ ಜೀವನ ಶೈಲಿಯು ದೈಹಿಕ ಹಾಗೂ ಮಾನಸಿಕ ರೋಗಗಳಿಗೆ ಕಾರಣವಾಗುತ್ತಿದೆ. ಸುಖ ಶಾಂತಿ ನೆಮ್ಮದಿಯ ಆರೋಗ್ಯ ಜೀವನಕ್ಕಾಗಿ ಧಾರ್ಮಿಕ ಚಟುವಟಿಕೆಗಳಲ್ಲಷ್ಟೆ ಅಲ್ಲ ಇತರೆ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಇದರಿಂದ ನಾವು ಮಾತ್ರವಲ್ಲ ನಮ್ಮ ಸುತ್ತ ಮುತ್ತಲ ಎಲ್ಲರೂ ಸುಖ, ಶಾಂತಿ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ಜೀವನ ಶೈಲಿ, ಆಲೋಚನಾ ಲಹರಿಯನ್ನು ಬದಲಿಸಬೇಕೆಂದು ಕೋರಿದರು.
ದೇವಾಲಯದ ಸಮಿತಿ ಮುಖಂಡರಾದ ಸಂಗೀತ ವಿದೂಷಿ ಜಗದೀಶ್, ಮಹಿಳಾ ಮಂಡಳಿಯ ಅಧ್ಯಕ್ಷೆ ಮಂಜುಳಾಜಗದೀಶ್, ಲಕ್ಷ್ಮೀನಾರಾಯಣಮ್ಮ, ನಿವೃತ್ತಿ ಬೆಸ್ಕಾಂ ಅಧಿಕಾರಿ ಸುಂದರಾಚಾರಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -