ಪುಣ್ಯಪುರುಷರು ನಮ್ಮ ನಾಡಿನಲ್ಲಿ ಜನಿಸಿ ನಮಗೆ ಜೀವನದರ್ಶನವನ್ನು ಕೊಟ್ಟು ಹೋಗಿದ್ದಾರೆ. ಬರೆದಂತೆ ಬದುಕಿದ ಅವರು ತಮ್ಮ ಆದರ್ಶ, ಸಾಹಿತ್ಯ, ಸನ್ಮಾರ್ಗ, ಮಾನವೀಯತೆಗಳಿಂದ ನಮಗೆ ದಾರಿದೀಪವಾಗಿದ್ದಾರೆ ಎಂದು ರಾಮಕೃಷ್ಣ ಮಠದ ಪೂರ್ಣಾನಂದ ಮಹಾಸ್ವಾಮಿಗಳು ತಿಳಿಸಿದರು.
ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ದಾಸಶ್ರೇಷ್ಠ ಪುರಂದರ ಪುಣ್ಯದಿನ, ವಿವೇಕಾನಂದರ ಹಾಗೂ ಕುವೆಂಪು ಅವರ ಜನ್ಮದಿನಾಚರಣೆ ಮತ್ತು ಸಂಕ್ರಾಂತಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕವಿಪುಂಗವರಿಗೆ, ಸಮಾಜಸುಧಾರಕರಿಗೆ, ಶಾಸ್ತ್ರಕೋವಿದರಿಗೆ ನೆಲೆ ಕೊಟ್ಟ ಪುಣ್ಯಭೂಮಿಯಲ್ಲಿ ನಾವು ಜನಿಸಿರುವುದು ನಮ್ಮೆಲ್ಲರ ಪೂರ್ವಜನ್ಮದ ಸುಕೃತ. ಅಂತಹ ನಾಡಿನ ಕೀರ್ತಿ ಬೆಳಗುವುದು ನಮ್ಮ ಕರ್ತವ್ಯ ಎಂದರು.
ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅಕ್ಷರದಾಸೋಹ ಸಹಾಯಕ ನಿರ್ದೇಶಕ ವೆಂಕಟೇಶ್ ಮಾತನಾಡಿದರು. ಪುರಂದರ ದಾಸರ ಬಗ್ಗೆ ಸಂಗೀತ ವಿದ್ವಾನ್ ಜಿ.ಎನ್.ಶಾಮಸುಂದರ್ ಮಾತನಾಡಿದರು.
ವಿವಿಧ ಪ್ರೌಢಶಾಲೆಗಳ ಮಕ್ಕಳು ಗೀತಗಾಯನವನ್ನು ನಡೆಸಿಕೊಟ್ಟರು. ವಿವಿಧ ಕವಿಗಳು ಕವನಗಳನ್ನು ವಾಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ವಸಾಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಯೋಗಾನಂದ, ಅಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್, ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಸತ್ಯನಾರಾಯಣಶೆಟ್ಟಿ, ಕೃಷಿಕ ಸಮಾಜದ ನಿರ್ದೇಶಕ ಎ.ಎಂ.ದೇವರಾಜ, ಮುಖ್ಯಶಿಕ್ಷಕ ಗೋಪಿನಾಥ, ಒಕ್ಕಲಿಗರ ಸಂಘದ ನಾರಾಯಣಸ್ವಾಮಿ ಹಾಜರಿದ್ದರು.