ಜಿಲ್ಲೆಯಾದ್ಯಂತ ಸುಮಾರು ಐದು ಸಾವಿರ ಹಣ್ಣಿನ ಗಿಡಗಳನ್ನು ರೈತರಿಗೆ ವಿತರಿಸಿರುವುದಾಗಿ ಟ್ರೀಸ್ ಫಾರ್ ಫ್ರೀ ಸಂಸ್ಥೆಯ ಜಾನೆಟ್ ಯಜ್ಞೇಶ್ವರಮ್ ತಿಳಿಸಿದರು.
ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಕೋರಮಂಗಲದ ರೋಟರಿ ಸಂಸ್ಥೆ ಮತ್ತು ಆರ್ಚರ್ಡ್ ಸಂಸ್ಥೆಗಳ ನೆರವಿನಿಂದ 200 ಹಣ್ಣಿನ ಗಿಡಗಳನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು.
ಹಣ್ಣಿನ ಮರಗಳು ಬೆಳೆಯುವುದರಿಂದ ಮಾನವರಿಗಷ್ಟೇ ಅಲ್ಲದೆ ಪಶು ಪಕ್ಷಿ ಕೀಟಗಳಿಗೂ ಅನುಕೂಲ. ಒಂದೆಡೆ ಪರಿಸರ ಕಾಪಾಡುವತ್ತ ಇಡುವ ಹೆಜ್ಜೆ ಇದಾಗಿದ್ದು, ಮತ್ತೊಂದೆಡೆ ಜೀವಿಗಳಿಗೆ ಆಹಾರ ಒದಗಿಸುವ ಪ್ರಕ್ರಿಯೆಯೂ ಇದಾಗಿದೆ. ಇದುವರೆಗೂ ನಮ್ಮ ಸಂಸ್ಥೆಯಿಂದ 58 ಸಾವಿರ ಗಿಡಗಳನ್ನು ಈ ರೀತಿಯಾಗಿ ವಿತರಿಸಿದ್ದೇವೆ. ಕೋರಮಂಗಲದ ರೋಟರಿ ಸಂಸ್ಥೆ ಮತ್ತು ಆರ್ಚರ್ಡ್ ಸಂಸ್ಥೆಗಳು ತಲಾ 100 ಗಿಡಗಳನ್ನು ಪ್ರಾಯೋಜಿಸಿದ್ದಾರೆ. ಮುತ್ತೂರು ಗ್ರಾಮದಲ್ಲಿ ಮುಂದಿನ ವರ್ಷಗಳಲ್ಲಿ ಈ ಗಿಡಗಳು ಮರಗಳಾಗಿ ಹಸುರು ವಾತಾವರಣದೊಂದಿಗೆ ಹಕ್ಕಿ ಕೀಟಗಳ ವಾಸಸ್ಥಾನವೂ ಆಗಲಿ. ಲಿಚಿ, ನೆಲ್ಲಿಕಾಯಿ, ನೇರಳೆ ಹಣ್ಣು ಮೊದಲಾದ ಗಿಡಗಳನ್ನು ನೀಡಿದ್ದು, ಅದು ರೈತರಿಗೆ ಆದಯ ಮೂಲವೂ ಆಗಲೆಂಬುದು ನಮ್ಮ ಆಶಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುತ್ತೂರು ಗ್ರಾಮದಲ್ಲಿರುವ ಮಹಿಳಾ ಹೊಲಿಗೆ ಕೇಂದ್ರಕ್ಕೆ ಕೋರಮಂಗಲದ ರೋಟರಿ ಸಂಸ್ಥೆಯವರು ನೂತನ ಮಾದರಿಯ ಹೊಲಿಗೆ ಯಂತ್ರಗಳನ್ನು ನೀಡಿದರು.
‘ಮುತ್ತೂರು ಗ್ರಾಮದ ಮಹಿಳೆಯರು ತಯಾರಿಸುವ ಬ್ಯಾಗುಗಳಿಗೆ ಬೇಡಿಕೆಯಿದೆ. ಅವರು ಆರ್ಥಿಕವಾಗಿ ಇನ್ನಷ್ಟು ಸಬಲರಾಗಲೆಂಬ ಉದ್ದೇಶದಿಂದ ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದೇವೆ’ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಶಂಭು ಶರ್ಮ ತಿಳಿಸಿದರು.
ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ, ಗ್ರಾಮದ ಕೆಂಪೇಗೌಡ, ರೋಟರಿ ಸಂಸ್ಥೆಯ ಎನ್.ಡಿ.ಪ್ರಸಾದ್, ರಾಜಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -







