ನಗರದ ವಿಜಯನಗರ ಹೆಬ್ಬಾಗಿಲಿನಿಂದ ಕದಿರಿಪಾಳ್ಯ ಹಾಗೂ ಇತರೆ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾರ್ಯ ಅಧಿಕಾರಿಗಳ ಹಾಗೂ ಪೊಲೀಸರ ಸಮ್ಮುಖದಲ್ಲಿ ಬುಧವಾರ ನಡೆಯಿತು.
ನಗರದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲ ಬಳಿ ನಿರ್ಮಿಸಿರುವ ರೈಲ್ವೆ ಅಂಡರ್ಪಾಸ್ ಸಮೀಪ ರೈಲ್ವೆ ಇಲಾಖೆಯು ೩ ಗುಂಟೆ ಜಮೀನನ್ನು ಸ್ವಾನ ಪಡಿಸಿಕೊಂಡಿತ್ತಾದರೂ ಅದರ ಮಾಲೀಕರು ಪರಿಹಾರ ಮೊತ್ತ ಸಾಲದು ಎಂಬ ಕಾರಣಕ್ಕೆ ಜಮೀನನ್ನು ಬಿಟ್ಟುಕೊಡಲು ನಿರಾಕರಿಸಿದ್ದರು.
ಇದರಿಂದ ವಿಜಯನಗರ ಹೆಬ್ಬಾಗಿಲ ಮೂಲಕ ಕದಿರಿಪಾಳ್ಯ, ಪಂಪ್ಹೌಸ್ ಏರಿಯಾ, ಚಿಂತಾಮಣಿ ಬೈಪಾಸ್ ಮಾರ್ಗಕ್ಕೆ ಹೋಗಲು ಅಧಿಕೃತ ದಾರಿಯೆ ಇಲ್ಲದೆ ಈ ಪ್ರದೇಶದ ವಾಸಿಗಳು ಸುತ್ತು ಬಳಸಿ ಸಂಚರಿಸುವಂತಾಗಿತ್ತು.
ಈ ಹಿನ್ನಲೆಯಲ್ಲಿ ಉಪ ವಿಭಾಗಾಧಿಕಾರಿಗಳ ಸೂಚನೆಯಂತೆ ತಹಸೀಲ್ದಾರ್ ಎಸ್.ಅಜಿತ್ಕುಮಾರ್ ರೈ ನೇತೃತ್ವದಲ್ಲಿ ನಗರಸಭೆ, ಕಂದಾಯ, ಭೂಮಾಪನ ಇಲಾಖೆ ಅಧಿಕಾರಿಗಳು ಬಿಗಿ ಪೊಲಿಸ್ ಬಂದೋಬಸ್ತ್ನೊಂದಿಗೆ ಸ್ಥಳವನ್ನು ವಶಕ್ಕೆ ಪಡೆದುಕೊಂಡರು.
ವಿಜಯನಗರ ಹೆಬ್ಬಾಗಿಲು ಬಳಿ ಇದ್ಲೂಡು ಗ್ರಾಮಕ್ಕೆ ಅಂಡರ್ಪಾಸ್ ನಿರ್ಮಿಸಿದಾಗ ಅಲ್ಲಿ ಕದಿರಿಪಾಳ್ಯ ಹಾಗೂ ಇತರೆ ಪ್ರದೇಶಗಳಿಗೆ ಸಂಚರಿಸಲು ರಸ್ತೆ ಇಲ್ಲದಾಗಿತ್ತು. ಹಾಗಾಗಿ ರೈಲ್ವೆ ಇಲಾಖೆಯು ಅಂಡರ್ಪಾಸ್ ಬಳಿ ೩ ಗುಂಟೆ ಜಮೀನನ್ನು ವಶಕ್ಕೆ ಪಡೆದಿತ್ತು.
ವಶಪಡಿಸಿಕೊಂಡ ಜಮೀನಿಗೆ ೩ ಲಕ್ಷ ರೂಪರಿಹಾರವನ್ನು ಸಹ ಘೋಷಿಸಲಾಗಿತ್ತು. ಆದರೆ ಈ ಜಾಗದ ಮಾಲೀಕರು ಪರಿಹಾರದ ಮೊತ್ತ ಸಾಲದು ಇನ್ನೂ ಹೆಚ್ಚು ಬೇಕು ಎಂಬ ಕಾರಣಕ್ಕೆ ಅವರು ಜಮೀನನ್ನು ಬಿಟ್ಟುಕೊಡದೆ ವಶದಲ್ಲೆ ಇಟ್ಟುಕೊಂಡಿದ್ದರು.
ಆದರೆ ಉಪ ವಿಭಾಗಾಕಾರಿಗಳ ಸೂಚನೆ ಮೇರೆಗೆ ಬುಧವಾರ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜಮೀನನ್ನು ಅಳತೆ ಮಾಡಿ ವಶಕ್ಕೆ ತೆಗೆದುಕೊಂಡು ಅದರ ದಾಖಲೆಗಳನ್ನು ನಗರಸಭೆಗೆ ಹಸ್ತಾಂತರಿಸಿದರು.
ಜೆಸಿಬಿ ಮೂಲಕ ಕಚ್ಚಾ ರಸ್ತೆಯನ್ನು ನಿರ್ಮಿಸಿ ಅಧಿಕೃತ ರಸ್ತೆಗೆ ಅನುಕೂಲ ಮಾಡಿಕೊಡಲಾಯಿತು. ಜಮೀನಿನ ಮಾಲೀಕರಿಗೆ ಹೆಚ್ಚಿನ ಪರಿಹಾರ ಬೇಕಿದ್ದರೆ ಹಿರಿಯ ಅಧಿಕಾರಿಗಳಿಗೆ ಇದನ್ನು ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿ ಜಮೀನಿನ ಮಾಲೀಕರ ಮನವೊಲಿಸಿದರು.
ಸರ್ಕಲ್ ಇನ್ಸ್ಪೆಕ್ಟರ್ ಟಿ.ಸಿ.ವೆಂಕಟೇಶ್, ನಗರಠಾಣೆ ಎಸ್ಐ ನವೀನ್, ಎಸ್ಎಫ್ಸಿಎಸ್ ಬ್ಯಾಂಕ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ರೈತ ಮುಖಂಡರಾದ ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ವೇಣು, ಶಿವಮೂರ್ತಿ, ಶ್ರೀನಿವಾಸ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -