ಕೆರೆ ಒತ್ತುವರಿದಾರರನ್ನು ತೆರವುಗೊಳಿಸಬೇಕಾದ ಸಣ್ಣ ನೀರಾವರಿ ಇಲಾಖೆಯವರು ತಾಲ್ಲೂಕಿನ ಸಾದಲಿ ಗ್ರಾಮದ ಎರಡು ಕೆರೆಗಳಲ್ಲಿ ಎಕರೆಗಟ್ಟಲೆ ಕೆರೆಯ ಜಾಗವನ್ನು ಬಿಟ್ಟು ಟ್ರಂಚ್ ಹಾಕುತ್ತಿದ್ದಾರೆ ಎಂದು ಸಾದಲಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಸಾದಲಿ ಗ್ರಾಮದ ಸಾದಲಮ್ಮನ ಕೆರೆ ಮತ್ತು ಸಾದಲಿ ಹೊಸಕೆರೆಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕಾಮಗಾರಿಗಳಿಗೆ ಹಣ ಮಂಜೂರಾಗಿದೆ. ಟೆಂಡರ್ ಪಡೆದ ಗುತ್ತಿಗೆದಾರರು ಅವೈಜ್ಞಾನಿಕವಾಗಿ ಮತ್ತು ಕಾನೂನು ಬಾಹಿರವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಒತ್ತುವರಿ ಮಾಡಿರುವ ಜಮೀನುಗಳನ್ನು ಬಿಟ್ಟು ಟ್ರಂಚ್ ಹಾಕಿದ್ದಾರೆ. ಸಾದಲಿ ಹೊಸಕೆರೆ ನಿರ್ಮಾಣವಾದಾಗ ಜಮೀನು ಕಳೆದುಕೊಂಡ ನಾಲ್ವರು ರೈತರಿಗೆ ಸರ್ಕಾರ ಪರಿಹಾರವಾಗಿ ಹಣವನ್ನು ನೀಡಿತ್ತು. ಈಗ ಕೆರೆಯ ಅಂಗಳವಾಗಿದ್ದ ಆ ಜಮೀನುಗಳನ್ನು ಹೊರತುಪಡಿಸಿ ಟ್ರಂಚ್ ಹಾಕಿದ್ದಾರೆ.
ಕಾನೂನು ಬಾಹಿರವಾಗಿ ಗುತ್ತಿಗೆದಾರರಿಂದ ಕೆಲಸ ನಡೆಯುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆಯವರ ಗಮನಕ್ಕೆ ತಂದಿದ್ದರೂ ಅವರು ಕ್ರಮ ಕೈಗೊಳ್ಳದೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸರ್ಕಾರಿ ಸ್ವತ್ತಾದ ಕೆರೆಯನ್ನು ರಕ್ಷಿಸಬೇಕು ಎಂದು ನ್ಯಾಯಾಲಯದ ಆದೇಶವಿದ್ದರೂ, ಇಲ್ಲಿ ಅಕ್ರಮಗಳು ನಡೆಯುತ್ತಿವೆ. ಈ ಬಗ್ಗೆ ಗ್ರಾಮಸ್ಥರು ಸಹಿ ಮಾಡಿರುವ ಮನವಿಪತ್ರವನ್ನು ಜಿಲ್ಲಾಧಿಕಾರಿಗಳಿಗೂ ತಲುಪಿಸಿದ್ದೇವೆ ಎಂದು ಗ್ರಾಮದ ವೆಂಕಟಾಚಲಪತಿ ತಿಳಿಸಿದರು.
- Advertisement -
- Advertisement -
- Advertisement -







