ಗೃಹರಕ್ಷಕ ದಳದ ಸೇವೆ ಅಮೂಲ್ಯವಾದ ಸೇವೆಯಾಗಿದೆ. ಪೊಲೀಸರಿಗೆ ಬೆನ್ನೆಲುಬಾಗಿ ಸೇವೆ ಸಲ್ಲಿಸುವಲ್ಲಿ ದಳ ಯಶಸ್ವಿಯಾಗಿದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಆರ್.ವೆಂಕಟೇಶ್ ತಿಳಿಸಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗೃಹರಕ್ಷಕ ದಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವರಕ್ಷಣೆ, ಆಸ್ತಿ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲಿಸಲು ಗೃಹರಕ್ಷಕದಳದ ಕೊಡುಗೆ ಮಹತ್ತರವಾದುದು. ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆಯ ನೆರಳಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದು, ಸಮಾಜ ಮತ್ತು ನಾಗರಿಕರ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.
ಕರ್ಣಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿ.ಆರ್.ಶಿವಕುಮಾರಗೌಡ ಮಾತನಾಡಿ, ಗೃಹರಕ್ಷಕ ದಳದಲ್ಲಿ ಸೇವೆ ನೀಡುತ್ತಿರುವ ಹೋಮ್ ಗಾರ್ಡ್ಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಮಂತ್ರಿಗಳೊಂದಿಗೆ ಮಾತನಾಡುವುದಾಗಿ ನುಡಿದರು.
ಗೃಹರಕ್ಷಕ ದಳ ಮಾಜಿ ಘಟಕಾಧಿಕಾರಿ ರೂಪಸಿ ರಮೇಶ್ ಮಾತನಾಡಿ, ಸರ್ಕಾರಿ ಅಧೀನದಲ್ಲಿರುವ ಸ್ವತಂತ್ರ, ಶಿಸ್ತುಬದ್ಧ ಸಮವಸ್ತ್ರಧಾರಿ ಸ್ವಯಂ ಸೇವಕರನ್ನೊಳಗೊಂಡ ಸ್ವಯಂ ಸೇವಾ ಸಂಸ್ಥೆಯೇ ಗೃಹರಕ್ಷಕದಳ. 1946ರಲ್ಲಿ ಬಾಂಬೆಯಲ್ಲಿ ಗೃಹ ರಕ್ಷಕದಳ ಅಸ್ತಿತ್ವಕ್ಕೆ ಬಂತು. ದೇಶದ ಆಂತರಿಕ ಭದ್ರತೆಯನ್ನು ಕಾಪಾಡಲು ಪೊಲೀಸ್ ವ್ಯವಸ್ಥೆಯೊಂದಿಗೆ ಕೈಜೋಡಿಸುವುದು, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗುವುದು, ಜಾತ್ರೆ, ಉತ್ಸವ, ರಾಷ್ಟ್ರೀಯ ಹಬ್ಬಗಳ ಆಚರಣೆ, ಮುಷ್ಕರ ಪ್ರತಿಭಟನೆ ಮುಂತಾದ ಸಂದರ್ಭದಲ್ಲಿ ಬಂದೋಬಸ್ತ್, ಚುನಾವಣೆ ಸಂದರ್ಭ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಪಡೆಯ ಜೊತೆಗೆ ಗೃಹ ರಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ಸ್ವಯಂ ಮನೋಭಾವವುಳ್ಳ ಯಾರೂ ಬೇಕಾದರೂ (20ರಿಂದ 50 ವರ್ಷದೊಳಗಿನವರು) ಗೃಹರಕ್ಷಕದಳಕ್ಕೆ ಸೇರಬಹುದು. ಕನಿಷ್ಠ ವಿದ್ಯಾರ್ಹತೆ ನಾಲ್ಕನೆ ತರಗತಿ ಓದಿರುವ( ಯಾವುದೇ ಭಾಷಾ ಮಾಧ್ಯಮದಲ್ಲಿ) ಅಭ್ಯರ್ಥಿಗಳು ಸರ್ಕಾರವೇ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಜಿಲ್ಲಾ ಕಚೇರಿಗಳಿಂದ ಪಡೆದು ವಯಸ್ಸಿನ ದಾಖಲೆ, ವಿದ್ಯಾರ್ಹತೆ, ವಾಸ ಸ್ಥಳಕ್ಕೆ ಸಂಬಂಧಿಸಿದ ದಾಖಲೆ ನಕಲು ಪತ್ರಿ ಲಗತ್ತಿಸಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವ್ಯಕ್ತಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದಲ್ಲಿ ಸೇವೆ ಸಲ್ಲಿಸಿರುವ ಹಿರಿಯರಾದ ನರಸಿಂಹಯ್ಯ, ರೂಪಸಿ ರಮೇಶ್ ಹಾಗೂ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಸ್.ಡಿ.ಅಶೋಕ್ ಬಾಬು, ಪ್ರಭಾರಿ ಘಟಕಾಧಿಕಾರಿ ವೆಂಕಟರಮಣ, ಚಂದ್ರು, ಆನೆಪ್ಪ, ವಿ.ವೆಂಕಟೇಶ್, ನಾಗೇಂಗ್ರ, ಗೀತಾ, ಮಹಬೂಬ್ ಪಾಷ ಹಾಜರಿದ್ದರು.
- Advertisement -
- Advertisement -
- Advertisement -