ತಮ್ಮ ಸ್ವಾರ್ಥ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸರ್ಕಾರಿ ನೌಕರರೊಬ್ಬರ ಮೇಲೆ ದಲಿತ ವಿರೋಧಿ ಎಂದು ಹಣೆಪಟ್ಟಿ ಕಟ್ಟಿ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸುತ್ತಿರುವ ದಸಂಸ ಪದಾಧಿಕಾರಿಗಳ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಹಳೇ ಗಂಜಿಗುಂಟೆ ಗ್ರಾಮದಲ್ಲಿ ಸುಮಾರು ೬೦ ಮನೆಗಳಿದ್ದು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲು ಗ್ರಾಮದ ಮೂವತ್ತು ಮನೆಗಳಲ್ಲಿ ಮನೆಗೆ ಮೂರು ನಾಲ್ಕು ಷೇರುಗಳನ್ನು ಮಾಡಿಸುವ ಮೂಲಕ ರಾಜಕೀಯ ಮಾಡಿದ್ದ ಕ್ರಮವನ್ನು ಗ್ರಾಮಸ್ಥರ ಪರವಾಗಿ ಪ್ರಶ್ನಿಸಿದ ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ವಿಜಯ್ರೆಡ್ಡಿ ರನ್ನು ವಿನಾಕಾರಣ ದಲಿತ ವಿರೋಧಿ ಎಂದು ಬಿಂಬಿಸುವದು ಸರಿಯಲ್ಲ.
ಇನ್ನು ತಾಲ್ಲೂಕಿನ ಕ್ಯಾಸಗೆರೆ ಗ್ರಾಮದಲ್ಲಿ ನಡೆದಿದ್ದ ಘರ್ಷಣೆಯಲ್ಲಿ ದಲಿತರ ಮೇಲೆ ಹಲ್ಲೆಯಾಗಿದ್ದರೂ ದಲಿತರ ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದ್ದ ದಸಂಸ ಮುಖಂಡರು ಇದೀಗ ಘರ್ಷಣೆಯೇ ಆಗಿರದ ವೇಮಗಲ್ ಗ್ರಾಮದ ಪ್ರಕರಣವನ್ನು ಅಟ್ರಾಸಿಟಿ ಕೇಸು ದಾಖಲಿಸುವಂತೆ ಒತ್ತಾಯಿಸಿ ದಾಖಲಿಸಿರುವ ಪ್ರಕರಣ ಸುಳ್ಳು ಎಂದು ಗೊತ್ತಾದ ಮೇಲೆ ಅಧಿಕಾರಿಗಳು ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿದ್ದಾರೆ. ಈ ಬಗ್ಗೆ ತಮಗೇನಾದರೂ ಆಕ್ಷೇಪಣೆಯಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಿ ಅದು ಬಿಟ್ಟು ಪ್ರಾಮಾಣಿಕ ಪೊಲೀಸ್ ಅಧಿಕಾರಯೊಬ್ಬರನ್ನು ವಿನಾಕಾರಣ ದಲಿತ ವಿರೋಧಿ ಎಂದು ಬಿಂಬಿಸಿ ತೊಂದರೆ ಕೊಡುವುದು ಸರಿಯಲ್ಲ ಎಂದರು.
ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಠಾಣೆಗೆ ಬಂದಾಗಿನಿಂದಲೂ ಜನತೆ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಒಂದು ವೇಳೆ ಶನಿವಾರ ದಸಂಸ ವತಿಯಿಂದ ಠಾಣೆಯ ಬಳಿ ಪ್ರತಿಭಟನೆ ನಡೆಸಿದರೆ ಪಿಎಸ್ಸೈ ಪರವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಾವು ಪ್ರತಿಭಟಿಸಬೇಕಾಗುತ್ತದೆ.
ಕೇವಲ ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಇಡೀ ಸಮುದಾಯದ ಹಾಗು ಸಂಘಟನೆಗಳನ್ನು ಬಳಸಿಕೊಳ್ಳುವುದನ್ನು ಕೆಲವರು ಬಿಡಬೇಕು. ಸಂಘಟನೆಗಳು ನಿಜವಾದ ಅರ್ಹ ದಲಿತನ ಏಳಿಗೆಗಾಗಿ ದುಡಿಯಲು ಮುಂದಾಗಬೇಕು ಎಂದರು.
ದಿಬ್ಬೂರಹಳ್ಳಿ ಚಿಕ್ಕನರಸಿಂಹಯ್ಯ, ಯಣ್ಣಂಗೂರು ಸುಬ್ರಮಣಿ, ಗೊರ್ಲಪ್ಪ, ಬೈರಸಂದ್ರ ದೇವರಾಜ್, ಮಲ್ಲಶೆಟ್ಟಿಹಳ್ಳಿ ನಾಗರಾಜ್, ಸೊಣ್ಣೇನಹಳ್ಳಿ ತಿರುಮಲೇಶ್ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







