Sidlaghatta : ಶಿಡ್ಲಘಟ್ಟ ನಗರದ ಉಲ್ಲೂರು ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಅಕ್ಷರ ದಾಸೋಹದ ಬಿಸಿಯೂಟ ನೌಕರರು ಬಿಸಿಯೂಟ ತಯಾರಿಸುವಾಗಿನ ಕೆಲಸ ಮಾಡುವ ವಿಚಾರದಲ್ಲಿ ಪರಸ್ಪರ ನಿಂದಿಸಿಕೊಂಡು ಬಡಿದಾಡಿಕೊಂಡಿದ್ದಾರೆ.
ಮುಖ್ಯ ಅಡುಗೆಯಾಕೆ ಸುಶೀಲಮ್ಮ ಹಾಗೂ ಸಹಾಯಕಿ ಶಾಮಲಮ್ಮ ಇಬ್ಬರೂ ಸಹ ಗಾಯಗೊಂಡಿದ್ದಾರೆ. ಶಾಮಲಮ್ಮ ಅವರು ಸುಶೀಲಮ್ಮ ಅವರ ಕೈಯ್ಯನ್ನು ಕಚ್ಚಿ ಗಾಯಗೊಳಿಸಿದ್ದರೆ, ಸುಶೀಲಮ್ಮ ಅವರು ಶಾಮಲಮ್ಮಳನ್ನು ಹೊಡೆದಿದ್ದು ಮುಖದ ಮೇಲೆ ಗಾಯವಾಗಿದ್ದು ರಕ್ತಸ್ರಾವವಾಗಿದೆ.
ಶನಿವಾರವಾದ್ದರಿಂದ ಶಾಲೆಯು 11 ಗಂಟೆಗೆ ಮುಗಿದಿದೆ. ಮಕ್ಕಳಿಗೆ ಬಿಸಿಯೂಟ ಬಡಿಸಿದ್ದು ಮಕ್ಕಳು ಹಾಗೂ ಶಿಕ್ಷಕರು ಮನೆಗೆ ತೆರಳಿದ್ದಾರೆ.
ನಂತರ ಬಿಸಿಯೂಟ ತಯಾರಿಸಿದ ಅಡುಗೆ ಪಾತ್ರೆಯ ಸಾಮಾನುಗಳನ್ನು ಸ್ವಚ್ಚಗೊಳಿಸುವ ವಿಷಯದಲ್ಲಿ ಈ ಇಬ್ಬರ ನಡುವೆ ಮಾತಿನ ಚಕಮುಕಿ ನಡೆದಿದೆ. ಪರಸ್ಪರ ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳಿ ಪರಸ್ಪರ ಬಡಿದಾಡಿಕೊಂಡಿದ್ದು ರಕ್ತಸ್ರಾವವಾಗಿದೆ.
ಅಡುಗೆ ಸಹಾಯಕಿ ಶಾಮಲಮ್ಮ ಅವರು ವಯಸ್ಸಿನ ಕಾರಣ ನೀಡಿ ಇತ್ತೀಚೆಗೆ ಕೆಲಸ ಬಿಡುವುದಾಗಿ ಹೇಳಿ ಮುಖ್ಯ ಶಿಕ್ಷಕರಿಗೆ ಪತ್ರ ನೀಡಿ ಕೆಲಸಕ್ಕೆ ಗೈರಾಗಿದ್ದರು.
ಆದರೆ ಮತ್ತೆ ಕೆಲಸ ಮಾಡುವುದಾಗಿ ಹೇಳಿದ್ದರಿಂದ ಮುಖ್ಯ ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಸೇರಿ ಸಭೆ ನಡೆಸಿ ಶಾಮಲಮ್ಮ ಅವರು ಕೆಲಸದಲ್ಲಿ ಮುಂದುವರೆಯಲು ಒಪ್ಪಿ ಅನುಸರಿಸಿಕೊಂಡು ಹೋಗುವಂತೆ ಇಬ್ಬರೂ ಅಡುಗೆಯವರಿಗೆ ಸೂಚಿಸಿದ್ದಾರೆ.
ಆದರೆ, ಮುಖ್ಯ ಅಡುಗೆಯಾಕೆ ಸುಶೀಲಮ್ಮ ಮತ್ತು ಸಹಾಯಕಿ ಶಾಮಲಮ್ಮ ಅವರ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದೆ.