ಕುಟುಂಬ ರಾಜಕಾರಣವಿಲ್ಲದೆ ಸಾಮಾನ್ಯ ವ್ಯಕ್ತಿಕೂಡ ಈ ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿ ಆಗಲು ಸಾಧ್ಯ ಆಗುವುದಾದರೆ ಅದು ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳಿಧರರಾವ್ ತಿಳಿಸಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ಅಂಗವಾಗಿ ಬಿಜೆಪಿಯಿಂದ ನಡೆಯುತ್ತಿರುವ ವಿಸ್ತಾರಕ್ ಕಾರ್ಯಕ್ರಮದಡಿ ತಾಲ್ಲೂಕಿನ ಗಂಜಿಗುಂಟೆಯಲ್ಲಿ ಭಾನುವಾರ ಮನೆ ಮನೆಗೂ ಭೇಟಿ ನೀಡಿದ ನಂತರ ಭೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಾಮಾನ್ಯ ವ್ಯಕ್ತಿಯಾಗಿದ್ದ ಮೋದಿ ಪ್ರಧಾನಿ ಆಗಿ ಭ್ರಷ್ಟಾಚಾರ ರಹಿತ, ಯಾವುದೆ ರೀತಿಯ ಕಳಂಕ ಇಲ್ಲದೆ ನಾಲ್ಕು ವರ್ಷಗಳ ಅಧಿಕಾರವನ್ನು ಪೂರೈಸಿದ್ದಾರೆ. ಒಂದೆ ಒಂದು ಆರೋಪ, ಕಪ್ಪು ಚುಕ್ಕೆ ಇಲ್ಲದೆ ನಾಲ್ಕು ವರ್ಷ ಅಧಿಕಾರ ಪೂರೈಸಿದ ಕೀರ್ತಿ ಮೋದಿ ಹಾಗೂ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಕಾಮನ್ವೆಲ್ತ್ ಕ್ರೀಡಾಕೂಟ, ಸ್ಟೀಲ್ ಬ್ರಿಡ್ಜ್ ಮುಂತಾದ ಹತ್ತಾರು ಯೋಜನೆಗಳಲ್ಲಿ ಕೋಟಿ ಕೋಟಿ ಲೆಕ್ಕದಲ್ಲಿ ಭ್ರಷ್ಟಾಚಾರವನ್ನು ಕಾಂಗ್ರೆಸ್ ಸರ್ಕಾರ ನಡೆಸಿದೆ. ಜನ ಸಾಮಾನ್ಯರು ಬಯಸಿದ್ದ ಭ್ರಷ್ಟಾಚಾರ, ಕಳಂಕರಹಿತ ಆಡಳಿತವನ್ನು ನೀಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ಕೂಡ ವಿಫಲವಾಗಿದೆ ಎಂದು ದೂರಿದರು.
೧೨೫ ಕೋಟಿ ಜನ ಸಂಖ್ಯೆ ಇರುವ ದೇಶವನ್ನು ಇಡೀ ಜಗತ್ತೆ ನಮ್ಮತ್ತ ನೋಡುವಂತೆ ಆಡಳಿತ ನಡೆಸುವುದೆಂದರೆ ಸಾಮಾನ್ಯ ಮಾತಲ್ಲ. ಅದಕ್ಕೆ ಗಟ್ಟಿತನದ ನಾಯಕತ್ವ, ದೂರದೃಷ್ಟಿತನ ಎಲ್ಲವೂ ಬೇಕು. ಗ್ರಾಮ ಮಟ್ಟದಿಂದ ಸಂಸತ್ವರೆಗೂ ಬೆಂಬಲವೂ ಬೇಕು.
ಆ ನಿಟ್ಟಿನಲ್ಲಿ ಯಶಸ್ವಿಯಾಗಿರುವ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು, ಜನಪರ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಅದಕ್ಕಾಗಿಯೆ ಇಡೀ ದೇಶಾದ್ಯಂತ ವಿಸ್ತಾರಕ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ೧೫ ದಿನಗಳ ಈ ಅವಧಿಯಲ್ಲಿ ಪಕ್ಷದ ಎಲ್ಲ ಪದಾಧಿಕಾರಿಗಳು ತಮ್ಮ ಕ್ಷೇತ್ರದಲ್ಲಿ ಇಲ್ಲವೇ ಇನ್ನಾವುದೆ ಕ್ಷೇತ್ರದಲ್ಲಿ ಬೀಡು ಬಿಟ್ಟು ಕೇಂದ್ರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಆಗುತ್ತಿದೆ.
ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಕರ್ನಾಟಕ ಸೇರಿದಂತೆ ಇಡೀ ದೇಶಾದ್ಯಂತ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುವಂತೆ ಮಾಡುವುದೆ ನಮ್ಮ ಉದ್ದೇಶ ಆಗಿದೆ. ಅದರಲ್ಲಿ ಯಶಸ್ವಿಯೂ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಸ್ಥಳೀಯ ಮುಖಂಡರೊಂದಿಗೆ ಗಂಜಿಗುಂಟೆಯ ಹಲವು ಮನೆ ಮನೆಗಳಿಗೂ ಭೇಟಿ ನೀಡಿ ಕರ ಪತ್ರಗಳನ್ನು ಹಂಚಿ ಕೇಂದ್ರದಲ್ಲಿನ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ವಿಸ್ತಾರಕ್ ಯೋಜನೆಯ ಉಸ್ತುವಾರಿ ಮಧುಶ್ರೀ, ಮಾಜಿ ಶಾಸಕಿ ಜ್ಯೋತಿರೆಡ್ಡಿ, ಜಿಲ್ಲಾಧ್ಯಕ್ಷ ಡಾ.ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಕಂಬದಹಳ್ಳಿ ಸುರೇಂದ್ರಗೌಡ, ಶ್ರೀರಾಮರೆಡ್ಡಿ, ಡಿ.ಆರ್.ಶಿವಕುಮಾರ್ಗೌಡ, ಸುರೇಶ್, ಶ್ರೀಧರ್, ಕೆಂಪರೆಡ್ಡಿ, ದಾಮೋದರ್, ಬಾಸ್ಕರ್ ರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







