ಬುಧವಾರ ಸಂಜೆ ಬಿದ್ದ ಬಾರೀ ಬಿರುಗಾಳಿ ಸಹಿತ ಆಲಿಕಲ್ಲಿನ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಗಂಗನಹಳ್ಳಿ, ಮೇಲೂರು, ಮಳ್ಳೂರು, ಮುತ್ತೂರು ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ದ್ರಾಕ್ಷಿ, ಹಿಪ್ಪುನೇರಳೆ, ಬಾಳೇಗಿಡ ಸೇರಿದಂತೆ ತರಕಾರಿ ಬೆಳೆಗಳು ನಷ್ಟವಾಗಿವೆ.
ಅಕಾಲಿಕ ಮಳೆಯಿಂದ ನಷ್ಟಕ್ಕೀಡಾಗಿದ್ದ ಪ್ರದೇಶಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಮರೇಶ್, ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಸೇರಿದಂತೆ ರೇಷ್ಮೆ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರು ಮತ್ತು ಉಪವಿಭಾಗಾಧಿಕಾರಿಗಳು ಬೇಟಿ ನೀಡಿದಾಗ ರೈತರು ತಮಗಾದ ನಷ್ಟದ ಬಗ್ಗೆ ವಿವರಿಸಿದರು. ೧೪೦೦ ಅಡಿಗಳು ಕೊರೆಸಿದರೂ ಒಂದಿಂಚು ನೀರು ಬರುತ್ತಿಲ್ಲ, ಲಕ್ಷಾಂತರ ರೂಪಾಯಿಗಳು ಸಾಲಮಾಡಿಕೊಂಡಿದ್ದೇವೆ. ಕಳೆದ ವರ್ಷವೂ ಕೂಡಾ ಇದೇ ಸಮಯಕ್ಕೆ ಅಕಾಲಿಕ ಆಲಿಕಲ್ಲು ಮಳೆ ಬಿದ್ದು, ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿತ್ತು. ಲಕ್ಷಾಂತರ ರೂಪಾಯಿಗಳ ಪ್ರಮಾಣದಲ್ಲಿ ನಷ್ಟವುಂಟಾಗಿದ್ದು, ಕೂಡಲೇ ಸರ್ಕಾರ ನಮ್ಮ ಸಂಕಷ್ಟಗಳಿಗೆ ಸ್ಪಂದಿಸಬೇಕು. ಈ ಭಾಗದಲ್ಲಿ ಅಂತರ್ಜಲದ ಮಟ್ಟ ಹೆಚ್ಚಿಸಿ ನಮಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಪ್ರತಿದಿನ ಹೋರಾಟಗಳನ್ನು ಮಾಡುವುದರಲ್ಲೆ ಕಾಲಕಳೆಯುವಂತಾಗಿದೆ. ಇಂತಹ ಹೊಡೆತಗಳು ಬಿದ್ದಾಗಲು ಸರ್ಕಾರ ನಮ್ಮ ಕಡೆಗೆ ಗಮನಹರಿಸದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿಯಿಲ್ಲವೆಂದು ಅಪ್ಪೇಗೌಡನಹಳ್ಳಿಯ ರೈತ ಜನಾರ್ಧನರೆಡ್ಡಿ, ಶ್ರೀನಿವಾಸ್, ಶ್ರೀರಾಮ್, ಉಪವಿಭಾಗಾಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ರೈತರನ್ನು ಸಮಾಧಾನಪಡಿಸಿದ ಅಧಿಕಾರಿಗಳು, ನಿಮ್ಮ ಸಂಕಟ ನಮಗೂ ಅರ್ಥವಾಗುತ್ತದೆ, ನಾವು ರೈತರ ಮಕ್ಕಳು, ನಾವು ಅಧಿಕಾರಿಗಳೆನ್ನುವುದಕ್ಕಿಂತ ರೈತರಾಗಿ ನಾವು ದ್ರಾಕ್ಷಿ ಬೆಳೆಯುತ್ತಿದ್ದು, ನಮಗೂ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ಸಮಾಧಾನಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿ ಅಮರೇಶ್, ಈ ಭಾಗದಲ್ಲಿ ದ್ರಾಕ್ಷಿ, ಹಿಪ್ಪುನೇರಳೆ, ಬಾಳೇಗಿಡ, ತರಕಾರಿ ಬೆಳೆಗಳು, ಮಾವು, ಹೂವಿನ ಬೆಳೆಗಳು, ಸೇರಿದಂತೆ ಆಲಿಕಲ್ಲಿನ ಮಳೆಯಿಂದಾಗಿ ಸುಮಾರು ಶೇ. ೬೦ ರಷ್ಟು ಬೆಳೆಗಳು ನಷ್ಟವಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆಯ ಕೃಷಿ ವಿಸ್ತರಣಾಧಿಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬೆಳೆಗಳ ನಷ್ಟದ ಬಗ್ಗೆ ರೈತರಿಂದ ಮಾಹಿತಿಯನ್ನು ಪಡೆದುಕೊಂಡು ಎಷ್ಟರ ಪ್ರಮಾಣದಲ್ಲಿ ನಷ್ಟವುಂಟಾಗಿದೆ ಎಂಬುದರ ಬಗ್ಗೆ ಸಮಗ್ರವಾದ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟು ಸೂಕ್ತವಾದ ಪರಿಹಾರವನ್ನು ನೀಡುವಂತೆ ಬೇಡಿಕೆಯನ್ನು ಸಲ್ಲಿಸುತ್ತೇವೆ ಎಂದರು.
ನಂತರ ದ್ರಾಕ್ಷಿ ಬೆಳೆಗಳ ವೀಕ್ಷಣೆ ಮಾಡಿದ ಶಾಸಕ ಎಂ.ರಾಜಣ್ಣ ಮಾತನಾಡಿ, ಕಳೆದ ವರ್ಷದಂತೆ ಈ ಭಾಗದಲ್ಲಿ ಈ ವರ್ಷವೂ ಕೂಡಾ ಆಲಿಕಲ್ಲು ಮಳೆಯಿಂದಾಗಿ ರೈತರು ಬಹಳಷ್ಟು ಸಂಕಷ್ಟವನ್ನು ಅನುಭವಿಸುವಂತಾಗಿದೆ, ವಿಧಾನಸಭೆಯ ಅಧಿವೇಶನ ನಡೆಯುತ್ತಿರುವುದರಿಂದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಭಾಗದ ರೈತರುಗಳ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟು ಈ ಭಾಗದ ರೈತರುಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುಂವಂತೆ ಮನವಿ ಮಾಡುವುದಾಗಿ ಹೇಳಿದರು.
ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಮೇಲೂರು, ಗಂಗನಹಳ್ಳಿ, ಮುತ್ತೂರು, ಮಳ್ಳೂರು ಗ್ರಾಮಗಳಿಗೆ ಬೇಟಿ ನೀಡಿ ಅವರು ಬೆಳೆಗಳನ್ನು ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್, ರೇಷ್ಮೆ ಇಲಾಖೆ ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸುಭ್ರಮಣಿ, ಜಿ.ವಿ.ದೇವರಾಜು, ರೈತರಾದ ಸುರೇಂದ್ರಗೌಡ, ಬಚ್ಚೇಗೌಡ, ಮುನಿಶಾಮಿಗೌಡ, ಚಿಕ್ಕಮುನಿಯಪ್ಪ, ಪ್ರಭಾಕರ್, ಶ್ರೀನಿವಾಸಮೂರ್ತಿ, ತ್ಯಾಗರಾಜ್, ಶ್ರೀನಿವಾಸ್, ಪ್ರಭಾಕರ್ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -