20.4 C
Sidlaghatta
Wednesday, July 16, 2025

ಕೃಷಿ ಇಲಾಖೆಯಿಂದ ವಿತರಿಸಿದ ಕಳಪೆ ರಾಗಿ ಬಿತ್ತನೆ ಬೀಜದಿಂದ ಅಪಾರ ನಷ್ಟ

- Advertisement -
- Advertisement -

ಕೃಷಿ ಇಲಾಖೆಯಿಂದ ವಿತರಿಸಲಾಗಿರುವ ರಾಗಿ ಬಿತ್ತನೆ ಬೀಜ ಅತ್ಯಂತ ಕಳಪೆಯಾಗಿದ್ದು, ತಾಲ್ಲೂಕಿನಾದ್ಯಂತ 100 ಹೆಕ್ಟೇರ್ ಗೂ ಹೆಚ್ಚು ರಾಗಿ ಬೆಳೆ ನಷ್ಟವಾಗುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಬೂದಾಳ ರಾಮಾಂಜಿ ಆರೋಪಿಸಿದ್ದಾರೆ.
ಬೀಜ ನಿಗಮದಿಂದ ಪಡೆದಿರುವ ರಾಗಿ ಬಿತ್ತನೆ ಬೀಜ ‘ಜಿಪಿ 28’ ವನ್ನು ಕೃಷಿ ಇಲಾಖೆಯು ರೈತರಿಗೆ ಒಂದು ಕೆಜಿಗೆ 35 ರೂಗಳಂತೆ ವಿತರಿಸಿತ್ತು. ಆದರೆ ಹೊಲದಲ್ಲಿ ತೆನೆ ಹಂತಕ್ಕೆ ಬಂದಿದ್ದು, ಶೇ.40 ರಷ್ಟು ಕಳಪೆ ಹಾಗೂ ಮಿಶ್ರ ತೆನೆ ಕಂಡು ಬಂದಿದೆ. ಇಳುವರಿ ಕಡಿಮೆಯಾಗಿ ರೈತರಿಗೆ ಅಪಾರ ನಷ್ಟವನ್ನು ತಂದಿದೆ. ಕೆಲವು ಕಾಳು ಕಟ್ಟಿದ್ದರೆ, ಕೆಲವು ತೆನೆ ಬಂದಿವೆ, ಇನ್ನು ಕೆಲವು ಹಣ್ಣಾಗಿವೆ, ಕೆಲವಂತೂ ಬೂದಿ ಬಣ್ಣ ಪಡೆದಿವೆ. ಇದರಿಂದಾಗಿ ಕಟಾವಿಗೆ ತೊಂದರೆಯಾಗಿದೆ. ಒಂದೇ ಬಾರಿಗೆ ಬೆಳೆ ಬರದಿರುವುದರಿಂದ ಕಟಾವು ತಡ ಮಾಡಿರುವುದರಿಂದ ಇಲಿಗಳ ಕಾಟ ಪ್ರಾರಂಭವಾಗಿದ್ದು, ನಷ್ಟ ಆಗುತ್ತಿದೆ.
ಗುಣಮಟ್ಟ ಇಲ್ಲದಿರುವುದು, ಇಳುವರಿಯ ಕುಂಠಿತ, ಕಟಾವಿಗೆ ತೊಂದರೆ, ರೋಗ ಹೆಚ್ಚಾಗಿರುವುದು ಎಲ್ಲವೂ ಸೇರಿಕೊಂಡು ರೈತರಿಗೆ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ.
ಕಳೆದ ವರ್ಷ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಆದರೆ ಈ ಬಾರಿ ಮಳೆ ಉತ್ತಮವಾಗಿದ್ದರೂ ಕಳಪೆ ಬಿತ್ತನೆ ಬೀಜದಿಂದ ಬೆಳೆ ನಷ್ಟವನ್ನು ಹೊಂದುವಂತಾಗಿದೆ. ತಾಲ್ಲೂಕಿನಲ್ಲಿ ಈ ನಷ್ಟದ ಪ್ರಮಾಣ ಸುಮಾರು 100 ಹೆಕ್ಟೇರ್ ಎಂದು ಅಂದಾಜಿಸಿದ್ದು, ಜಿಲ್ಲೆಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ರೈತರು ನಷ್ಟ ಹೊಂದಿದ್ದಾರೆ.
ಕೃಷಿ ಇಲಾಖೆಯಿಂದ ಪಡೆದಿರುವ ರಸೀದಿ, ರಾಗಿ ಬ್ಯಾಗ್ ಮೇಲಿರುವ ತಂಡದ ಸಂಖ್ಯೆ ಹಾಗೂ ದಿನಾಂಕದ ಪ್ರತಿಯನ್ನು ವಿವಿಧ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರು ಮತ್ತು ಉಪ ಕೃಷಿ ನಿರ್ದೇಶಕರಿಗೆ ನೀಡಿದ್ದೇವೆ. ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ.
ಬೀಜ ನಿಗಮದಿಂದ ಬಂದ ಬಿತ್ತನೆ ರಾಗಿಯ ಮೂಲದ ಬಗ್ಗೆ ತನಿಖೆಯಾಗಬೇಕು. ರೈತರಿಗೆ ನಷ್ಟ ಪರಿಹಾರವನ್ನು ಕೊಡಬೇಕು. ಈ ರೀತಿ ಮುಂದೆಂದೂ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!