21.1 C
Sidlaghatta
Saturday, July 27, 2024

ನಗರದಲ್ಲೂ ತಲೆಯೆತ್ತಲಿದೆ ಒಂದು ಅಠಾರಾ ಕಚೇರಿ

- Advertisement -
- Advertisement -

ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಕಬ್ಬನ್ಪಾರ್ಕಿನ ಅಂಚಿನಲ್ಲಿರುವ 1868 ರಲ್ಲಿ ನಿರ್ಮಾಣವಾದ ಉಚ್ಚ ನ್ಯಾಯಾಲಯದ ಕೆಂಪು ಕಟ್ಟಡ ಅಠಾರಾ ಕಚೇರಿಯ ಮಾದರಿಯಲ್ಲಿ ನಗರದಲ್ಲಿ ನ್ಯಾಯಾಲಯ ಸಮುಚ್ಚಯ ನಿರ್ಮಾಣವಾಗುತ್ತಿದೆ.
ನ್ಯಾಯಾಲಯ ಸಮುಚ್ಚಯ ಕಟ್ಟಡ ಕಾಮಗಾರಿ ಭರದಿಂದ ಸಾಗಿದ್ದು ಶೀಘ್ರದಲ್ಲೆ ಸಾರ್ವಜನಿಕರ ಬಳಕೆಗೆ ಸಮರ್ಪಣೆಯಾಗಲಿದೆ.
ನಗರದ ದಿಬ್ಬೂರಹಳ್ಳಿ ರಸ್ತೆಯ ಸಂತೋಷನಗರದ ಸಮೀಪ ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯ ಸಮುಚ್ಚಯದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಮುಕ್ತಾಯದ ಹಂತಕ್ಕೆ ತಲುಪಿದೆ.
ಮುಂದಿನ ಎರಡು ಮೂರು ತಿಂಗಳಲ್ಲಿ ಈ ಮೂರೂ ನ್ಯಾಯಾಲಯಗಳ ಎಲ್ಲ ಕಾರ್ಯ ಕಲಾಪಗಳು ಸಹ ನಿರ್ಮಾಣವಾಗುತ್ತಿರುವ ಈ ಭವ್ಯವಾದ ಬೃಹತ್ ನ್ಯಾಯಾಲಯದ ಸಮುಚ್ಚಯದಲ್ಲಿಯೆ ನಡೆಯಲಿವೆ. ಹಾಗಾಗಿ ಹತ್ತು ಹಲವು ವರ್ಷಗಳಿಂದಲೂ ಹೊಸ ನ್ಯಾಯಾಲಯದ ಕಟ್ಟಡದ ಕನಸು ಕಂಡಿದ್ದ ಕಕ್ಷಿದಾರರ, ನಾಗರೀಕರ, ನ್ಯಾಯವಾದಿಗಳ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿದೆ.
42 ಮೀಟರ್ ಅಗಲ 30 ಮೀಟರ್ ಉದ್ದವಿರುವ ಸುಮಾರು ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಬಹುತೇಕ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಉಚ್ಚ ನ್ಯಾಯಾಲಯಕ್ಕೆ ಬಳಿದ ಕಡು ಕೆಂಪು ಬಣ್ಣವನ್ನೆ ಇಲ್ಲಿನ ನ್ಯಾಯಾಲಯದ ಕಟ್ಟಡಕ್ಕೂ ಬಳಿಯುತ್ತಿದ್ದು ಕಣ್ಣಿಗೆ ಆಕರ್ಷಣೀಯವಾಗಿ ಕಾಣತೊಡಗಿದೆ.
ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯ ಸಭಾಂಗಣ(ಕೋರ್ಟ್ ಹಾಲ್). ಹೆಚ್ಚುವರಿಯಾಗಿ ಒಂದು ನ್ಯಾಯಾಲಯದ ಹಾಲ್ ಕೂಡ ಇರಲಿದೆ(ವಿಶೇಷ ಹಾಗೂ ತುರ್ತು ಸಂದರ್ಭಗಳಲ್ಲಿ ನ್ಯಾಯ ಕಲಾಪ ನಡೆಸಲು ಮೀಸಲು). ನ್ಯಾಯಾಧೀಶರಿಗೆ ಪ್ರತ್ಯೇಕ ಹಾಲ್, ಕೊಠಡಿಗಳನ್ನು ಹಾಲ್ಗೆ ಹೊಂದಿಕೊಂಡಂತೆಯೆ ನಿರ್ಮಿಸಲಾಗುತ್ತಿದೆ.
ವಕೀಲರ ಸಂಘಕ್ಕೆ(ಮಹಿಳಾ ವಕೀಲರಿಗೆ ಪ್ರತ್ಯೇಕ)ಸ್ಥಳಾವಕಾಶ ಇರಲಿದೆ. ವಕೀಲರ ಸಂಘದ ಅಧ್ಯಕ್ಷರಿಗೆ ಪ್ರತ್ಯೇಕ ಕೊಠಡಿಯನ್ನು ಮೀಸಲಿರಲಿದೆ. ನ್ಯಾಯಾಲಯಕ್ಕೆ ಹಾಜರಾಗುವ ಕಕ್ಷಿದಾರರು, ಸಾಕ್ಷಿಗಳು, ಪೊಲೀಸ್ ಸಿಬ್ಬಂದಿಗೂ ಕೂರಲು ಪ್ರತ್ಯೇಕ ಸ್ಥಳಾವಕಾಶದ ಜತೆಗೆ ಶೌಚಾಲಯದ ವ್ಯವಸ್ಥೆ ನೂತನ ನ್ಯಾಯಾಲಯದ ಕಟ್ಟಡದಲ್ಲಿ ಇರಲಿದೆ.
ಅಪರಾಧ ಪ್ರಕರಣಗಳಲ್ಲಿ ವಶಕ್ಕೆ ತೆಗೆದುಕೊಂಡ ವಸ್ತುಗಳ ಸಂಗ್ರಹಕ್ಕೆ ಕಟ್ಟಡ, ಉಪಹಾರ ಗೃಹ, ವಿಶ್ರಾಂತ ಗೃಹವನ್ನೂ ನಿರ್ಮಿಸಲಾಗುತ್ತಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಕಡತಗಳನ್ನು ಇರಿಸಲು ಪ್ರತ್ಯೇಕ ದಾಸ್ತಾನು ಕೊಠಡಿ(ಸ್ಟ್ರಾಂಗ್ ರೂಂ) ಇರಲಿದೆ. ಹಿರಿಯ ನಾಗರೀಕರು ಹಾಗೂ ಅಂಗವಿಕಲರು ಕಾರ್ಯಕಲಾಪಗಳಿಗೆ ಹಾಜರಾಗಲು ಅನುಕೂಲ ಆಗುವಂತೆ ಲಿಪ್ಟ್ ಅಳವಡಿಸುವ ಕೆಲಸವೂ ನಡೆದಿದೆ. ಮಳೆಕೊಯ್ಲು ಪದ್ಧತಿಯನ್ನು ಈ ಕಟ್ಟಡಕ್ಕೆ ಅಳವಡಿಸುತ್ತಿದ್ದು, ತಾಲೂಕಿನಲ್ಲಿ ಮಳೆಕೊಯ್ಲು ಅಳವಡಿಸಿರುವ ಸರ್ಕಾರಿ ಕಟ್ಟಡ ಸಧ್ಯಕ್ಕೆ ಇದೊಂದೆ ಆಗಿದೆ.
ಮಿನಿ ಉದ್ಯಾನವನವೂ ಇರಲಿದೆ. ಜತೆಗೆ ನ್ಯಾಯಾಲಯದ ಮುಂಭಾಗದಲ್ಲಿ ರಾಷ್ಟ್ರ ಧ್ವಜ ಆರೋಹಣ ಹಾಗೂ ಅವರೋಹಣೆಗೆ ಅನುಕೂಲ ಆಗುವಂತೆ ರಾಷ್ಟ್ರಧ್ವಜ ವೇದಿಕೆಯ ನಿರ್ಮಾಣ, ವಾಹನ ನಿಲ್ದಾಣಕ್ಕೂ ಪ್ರತ್ಯೇಕ ಸ್ಥಳಾವಕಾಶ ಮೀಸಲಿರಿಸಿ ಅಲ್ಲಿಯೂ ಮೂಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.
‘ಹಿಂದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ನ್ಯಾಯಾಲಯದ ಕಾರ್ಯಕಲಾಪಗಳು ಇದೀಗ ಪುರಾತನ ತಾಲ್ಲೂಕು ಕಚೇರಿಯ ಶಿಥಿಲಗೊಂಡ ಕಟ್ಟಡದಲ್ಲಿ ನಡೆಯುತ್ತಿದೆ. ಹಲವು ಅನಾನುಕೂಲಗಳ ನಡುವೆ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ನಡೆಸಲಾಗುತ್ತಿದೆ. ಕಕ್ಷಿದಾರರ, ಸಾಕ್ಷಿಗಳಿಗೂ ಕನಿಷ್ಠ ಮಟ್ಟದ ಸೌಕರ್ಯಗಳೂ ಅಲ್ಲಿಲ್ಲ. ಆದರೆ ಇದೀಗ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಎಲ್ಲ ರೀತಿಯ ಮೂಲ ಸೌಕರ್ಯಗಳೂ ಇರಲಿವೆ. ಕಕ್ಷಿದಾರರಿಗೂ, ಸಾಕ್ಷಿಗಳಿಗೂ ಅವರ ಹಕ್ಕುಗಳನ್ನು ರಕ್ಷಿಸಲು ಅಲ್ಲಿ ಸಾಧ್ಯವಾಗಲಿದೆ’ ಎಂದು ವಕೀಲರಾದ ವಿಶ್ವನಾಥ್ ಮತ್ತು ನಾಗರಾಜ್ ತಿಳಿಸಿದರು.
‘ನಗರದ ಹೊರಭಾಗದಲ್ಲಿ ಈ ರೀತಿಯ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವುದರಿಂದ ಹಲವಾರು ವ್ಯಾಪಾರಸ್ಥರಿಗೆ ಹೋಟೆಲು ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಹಿಂದುಳಿದ ಈ ಪ್ರದೇಶದ ಮೂಲಭೂತ ಸೌಕರ್ಯಗಳು ವೃದ್ಧಿಸಲಿವೆ. ನಗರದ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ’ ಎನ್ನುತ್ತಾರೆ ಮುಷಾಯಿದ್ ಪಾಷ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!