ರಸ್ತೆಯನ್ನು ದುರಸ್ಥಿಗೊಳಿಸಿ ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ನಗರದ ಹೊರವಲಯದ ನೆಲ್ಲಿಮರದಹಳ್ಳಿ ಹಾಗೂ ಹನುಮಂತಪುರ ನಿವಾಸಿಗಳು ಶನಿವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶಿಲ್ದಾರ್ ಮತ್ತು ನಗರಸಭಾ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.
ನಗರದ ನೆಲ್ಲಿಮರದಹಳ್ಳಿ ಮಾರ್ಗವಾಗಿ ಹನುಮಂತಪುರ ಹಾಗೂ ವರದನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಯು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಚಾರಕ್ಕೆ ಅನುಪಯುಕ್ತವಾಗಿದ್ದು ಜನತೆಯ ಓಡಾಟಕ್ಕೆ ತೊಂದರೆಯಾಗಿದೆ. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ರಸ್ತೆಯು ಕೆಸರುಗದ್ದೆಯಾಗಿದೆ. ಈ ಪ್ರದೇಶವೆಲ್ಲಾ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಚರಂಡಿಗಳಿಲ್ಲದೆ, ಸುರಿದ ತ್ಯಾಜ್ಯವನ್ನು ತೆಗೆಯದೇ ಜನರು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ.
ಈ ಭಾಗದಲ್ಲಿ ಡಾಲ್ಫಿನ್ ಪಬ್ಲಿಕ್ ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಮಸೀದಿ, ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳಿವೆ. ಈ ರಸ್ತೆಯಲ್ಲಿ ನಡೆದಾಡುವುದೇ ಕಷ್ಟಕರವಾಗಿದೆ. ದ್ವಿಚಕ್ರ ವಾಹನಗಳು ಸಾಗುವುದು ಇನ್ನೂ ದುಸ್ಥರವಾಗಿದೆ.
ಈಗಾಗಲೇ ಹಲವಾರು ವಾಹನ ಸವಾರರು ಬಿದ್ದಿದ್ದಾರೆ, ಶಾಲಾ ಮಕ್ಕಳಂತೂ ತಮ್ಮ ಬಟ್ಟೆ ಕೈಕಾಲು, ಚಪ್ಪಲಿ ಶೂಗಳನ್ನು ಕೆಸರು ಮಾಡಿಕೊಂಡೇ ಮನೆಗೆ ಹೋಗಬೇಕಾಗಿದೆ. ಈ ಭಾಗದಲ್ಲಿನ ರೇಷ್ಮೆ ತಯಾರಿಕಾ ಘಟಕಗಳಿಗೆ ಅಗತ್ಯವಾದ ನೀರಿನ ಗಾಡಿಗಳು, ಸೌದೆ ಗಾಡಿಗಳು ಹೋಗಲಾರದಂತಾಗಿದೆ. ಮೆದುವಾದ ನೆಲದಲ್ಲಿ ವಾಹನಗಳ ಚಕ್ರಗಳು ಸಿಕ್ಕಿಹಾಕಿಕೊಳ್ಳುವುದರಿಂದ ಈ ಭಾಗಕ್ಕೆ ಆಟೋಗಳು ಸಹ ಹೋಗುತ್ತಿಲ್ಲ. ಅಧಿಕಾರಿಗಳಿಗೆ ಪ್ರತಿ ಮಳೆಗಾಲದಲ್ಲೂ ನಾವು ಮನವಿ ಸಲ್ಲಿಸುವುದು ತಪ್ಪುವುದಿಲ್ಲ. ಆದರೂ ಯಾರೊಬ್ಬರೂ ಕ್ರಮ ಕೈಗೊಳ್ಳದ ಕಾರಣ ಈ ಬಗ್ಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಇನ್ನಾದರೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ಚರಂಡಿ ಹಾಗೂ ರಸ್ತೆಯ ಡಾಂಬರೀಕರಣ ಕಾರ್ಯವನ್ನು ನಡೆಸಬೇಕೆಂದು ಒತ್ತಾಯಿಸಿದರು.
ನೆಲ್ಲಿಮರದಹಳ್ಳಿ ಹಾಗೂ ಹನುಮಂತಪುರ ನಿವಾಸಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶಿಲ್ದಾರ್ ಮತ್ತು ನಗರಸಭಾ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.
ನರಸಿಂಹಮೂರ್ತಿ, ರಾಜಣ್ಣ, ಡಿ.ಆರ್.ನರಸಿಂಹರಾಜು, ವಿ.ದೇವರಾಜ್, ಸುರೇಶ್, ಪ್ರಸಾದ್, ಮುನಿಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -