Sidlaghatta : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಸಂವಿಧಾನಬದ್ಧ ಹಕ್ಕುಗಳು ಹಾಗೂ ಮೀಸಲಾತಿ ಸೌಲಲ್ಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಶಿಡ್ಲಘಟ್ಟ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಆರೋಪಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಧರಣಿಯ ನೇತ್ರೃತ್ವ ವಹಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಶೇ 36ರಷ್ಟು ಎಸ್.ಸಿ, ಎಸ್.ಟಿ ಜನಸಂಖ್ಯೆ ಇದ್ದರೂ ರಾಜಕೀಯ ಪಕ್ಷಗಳು ಅವರನ್ನು ಮತ ಬ್ಯಾಂಕ್ ನಂತೇ ಬಳಸಿಕೊಳ್ಳುತ್ತಿವೆ. ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಗಳ ಅನುದಾನವನ್ನು ಮೂಲ ಉದ್ದೇಶಗಳಿಗೆ ಬಳಸದೆ ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡುತ್ತಿರುವುದರಿಂದ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ಆಗುತ್ತಿದೆಯಾದರೂ ನಿವೇಶನ, ಮನೆ, ಕೃಷಿ ಭೂಮಿ ಮತ್ತು ಸ್ಮಶಾನದಂತಹ ಮೂಲಭೂತ ಸೌಲಲ್ಲಭ್ಯಗಳಿಗಾಗಿ ದಲಿತರು ಇನ್ನೂ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಫಾರಂ ಸಂಖ್ಯೆ 50, 53 ಹಾಗೂ 57ರಡಿ ಸಲ್ಲಿಕೆಯಾಗಿರುವ ಸಾವಿರಾರು ಬಗರ್ ಹುಕುಂ ಅರ್ಜಿಗಳು ಸಾಕಷ್ಟು ವರ್ಷಗಳಿಂದ ಬಾಕಿ ಉಳಿದಿದ್ದು, ದರಖಾಸ್ತು ಸಮಿತಿ ರಚನೆಯಾಗದ ಕಾರಣ ಭೂ ಮಂಜೂರಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ದೋರೆಯುತ್ತಿಲ್ಲ ಎಂದು ಟೀಕಿಸಿದರು.
ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಸಾರ್ವಜನಿಕರು ಸಣ್ಣ ಕೆಲಸಗಳಿಗೂ ಅಲೇದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾಸಗೀಕರಣ ನೀತಿಯಿಂದ ವಿದ್ಯಾವಂತ ದಲಿತ ಯುವಕರು ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ದಲಿತ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.
ತೋಕಲಹಳ್ಳಿ ಗ್ರಾಮದ ಸರ್ವೇ ನಂ.1ರಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸುವುದು, ಬಾಕಿ ಇರುವ ಬಗರ್ ಹುಕುಂ ಅರ್ಜಿಗಳನ್ನು ಇತ್ಯರ್ಥಪಡಿಸುವುದು, ತಾಲ್ಲೂಕು ದರಖಾಸ್ತು ಸಮಿತಿ ರಚಿಸುವುದು, ದಲಿತರಿಗೆ ನಿವೇಶನ, ಮನೆ ಹಾಗೂ ಸ್ಮಶಾನ ಭೂಮಿ ಒದಗಿಸುವುದು, ಗ್ರಾಮ ಪಂಚಾಯಿತಿಗಳಲ್ಲಿ ಶೇ 22.5 ಮೀಸಲಾತಿ ಅನುದಾನದ ದುರುಪಯೋಗ ಕುರಿತು ತನಿಖೆ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಗಗನಸಿಂಧೂ.ಎನ್ ರವರ ಮೂಲಕ ಅಪರ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಧಡಂಘಟ್ಟ ತಿರುಮಲೇಶ್, ತಾಲ್ಲೂಕು ಸಂಚಾಲಕ ಎ.ಎಲ್. ನಾರಾಯಣಸ್ವಾಮಿ, ತಾಲ್ಲೂಕು ಸಂಘಟನಾ ಸಂಚಾಲಕ ಯಣ್ಣಂಗೂರು ಸುಬ್ರಮಣಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದರು. ಈ ಸಂಬಂಧ ಜುಲೈ 4ರಂದೇ ಧರಣಿಯ ಪ್ರಕಟಣೆ ಹೋರಡಿಸಲಾಗಿತ್ತು.
In English: Karnataka Dalit Sangharsha Samiti held a protest in front of the Sidlaghatta taluk office demanding faster resolution of long-pending SC/ST welfare issues — land grants, Bagar Hukum applications, and misuse of SCP/TSP funds. A memorandum was submitted to the Additional Deputy Commissioner through the Tahsildar.
FAQ
ಕದಸಂಸ ಪ್ರಮುಖ ಬೇಡಿಕೆಗಳೇನು?
ಸಾಗುವಳಿ ಚೀಟಿ ವಿತರಣೆ, ಬಾಕಿ ಬಗರ್ ಹುಕುಂ ಅರ್ಜಿ ಇತ್ಯರ್ಥ, ದಲಿತರಿಗೆ ನಿವೇಶನ-ಮನೆ-ಸ್ಮಶಾನ ಭೂಮಿ ಒದಗಿಸುವಿಕೆ ಹಾಗೂ ಮೀಸಲಾತಿ ಅನುದಾನ ದುರುಪಯೋಗ ತನಿಖೆ.
ಮನವಿ ಪತ್ರ ಯಾರಿಗೆ ಸಲ್ಲಿಸಲಾಗಿದೆ?
ತಹಶೀಲ್ದಾರ್ ಮೂಲಕ ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.








