“ದೇಶದ ರಕ್ಷಣೆಗೆ ಸೈನಿಕರು ಹಗಲಿರುಳು ಸೇವೆ ಸಲ್ಲಿಸಿದ ರೀತಿಯಲ್ಲಿ ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ಶ್ರಮಿಸುತ್ತಾರೆ” ಎಂದು ಎಲ್ಲರೂ ಮೆಚ್ಚುವ ಪೌರ ಕಾರ್ಮಿಕರ ದಿನಾಚರಣೆಯನ್ನು ಇಂದು ಎಲ್ಲೆಡೆ ಆಚರಿಸಲಾಗುತ್ತಿದೆ.
ಕಾರ್ಮಿಕರ ಅನೇಕ ವರ್ಷಗಳ ಹೋರಾಟದಿಂದ ರಾಜ್ಯ ಸರ್ಕಾರ ಪೌರ ಕಾರ್ಮಿಕರಿಗೆ ರಜೆ ಘೋಷಿಸಿ ಪೌರ ಕಾರ್ಮಿಕರ ದಿನಾಚರಣೆ ಆಚರಿಸುತ್ತಿದೆ. ಅವರ ಸಮಸ್ಯೆಗಳು, ಬೇಡಿಕೆಗಳು, ಕುಂದು ಕೊರತೆಗಳು, ಸುರಕ್ಷತೆ, ಆರೋಗ್ಯ, ಶಿಕ್ಷಣ, ಸೌಲಭ್ಯಗಳ ಕಡೆಗೆ ಸಿಂಹಾವಲೋಕನ ಮಾಡುವ ಅಗತ್ಯವನ್ನು ಈ ದಿನ ಸಾರಿದೆ.
ಪೌರ ಕಾರ್ಮಿಕರ ದಿನಾಚರಣೆ
ಶಿಡ್ಲಘಟ್ಟದ ನಗರಸಭೆ ಉದ್ಯಾನವನದಲ್ಲಿ ಇಂದು ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ, ಆರು ಮಂದಿ ಹಿರಿಯ ಪೌರ ಕಾರ್ಮಿಕರಿಗೆ ಸನ್ಮಾನ, ಪೌರ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು ಎಂದು ಪರಿಸರ ಎಂಜಿನಿಯರ್ ವೈಶಾಲಿ ಪ್ರಸಾದ್ ತಿಳಿಸಿದ್ದಾರೆ
“ಪೌರ ಕಾರ್ಮಿಕರಾದ ನಮ್ಮದು ಅತ್ಯಲ್ಪ ಬೇಡಿಕೆಗಳಷ್ಟೆ. ನೀಡಬೇಕಾದ ವೇತನ, ಭತ್ಯೆ, ಸ್ವಚ್ಚತಾ ಕಾರ್ಯಕ್ಕೆ ಅಗತ್ಯವಾದ ಸಲಕರಣೆ, ರಜೆ, ಆರೋಗ್ಯ ಸೌಲಭ್ಯ, ಕಾಯಂ ನೌಕರಿ, ಪ್ರತಿ ತಿಂಗಳ ವೇತನ ಬಿಡುಗಡೆ ಮುಂತಾದವುಗಳನ್ನು ಮಾತ್ರ ಕೇಳುತ್ತೇವೆ. ನಮ್ಮ ಸಂಕಷ್ಟ, ನಮ್ಮ ಮೇಲಾಗುತ್ತಿರುವ ದೌರ್ಜನ್ಯ, ವೇತನ ಜಮೆ ಆಗದಿರುವುದು, ಪೌರಕಾರ್ಮಿಕರ ಮೇಲಿನ ಒತ್ತಡ ಮತ್ತಿತರ ವಿಷಯಗಳ ಕುರಿತಾಗಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರೆ ಅಷ್ಟೇ ಸಾಕು” ಎನ್ನುತ್ತಾರೆ ಪೌರಕಾರ್ಮಿಕ ನಾರಾಯಣಸ್ವಾಮಿ.
ಶಿಡ್ಲಘಟ್ಟದ ಪೌರಕಾರ್ಮಿಕರ ವಿವರ
ಖಾಯಂ ಸಿಬ್ಬಂದಿ : 40
ಕ್ಷೇಮಾಭಿವೃದ್ಧಿ ನೌಕರರು : 10
ಕನಿಷ್ಠ ವೇತನದ ನೌಕರರು : 10
ಹೊರಗುತ್ತಿಗೆ ನೌಕರರು : 15
“ಕೋವಿಡ್ 19 ನಮ್ಮ ಶಿಡ್ಲಘಟ್ಟ ನಗರವನ್ನು ಪ್ರವೇಶಿಸದಂತೆ ತಡೆಯುವಲ್ಲಿ ನಮ್ಮ ಪೌರಕಾರ್ಮಿಕರ ಪಾತ್ರ ಮಹತ್ವದ್ದು. ಲಾಕ್ ಡೌನ್ ಸಡಿಲಿಕೆ ಆಗುವವರೆಗೂ ಅಂದರೆ ಜುಲೈ ತಿಂಗಳವರೆಗೂ ಶಿಡ್ಲಘಟ್ಟಕ್ಕೆ ಕೊರೊನಾ ಬರದಂತೆ ಶ್ರಮಿಸಿದ್ದಾರೆ. ಪೌರ ಕಾರ್ಮಿಕರ ಸುರಕ್ಷತೆಗೆ ಗಮ್ ಬೂಟ್, ಗ್ಲೌಸ್, ಮಾಸ್ಕ್, ಪಿಪಿ ಕಿಟ್, ಆರೋಗ್ಯ ಪರೀಕ್ಷೆ ಬಗ್ಗೆ ಆದ್ಯತೆ ನೀಡಿದ್ದೇವೆ. ಎಲ್ಲಾ ಪೌರ ಕಾರ್ಮಿಕರಿಗೂ ವಿಮೆ ಮಾಡಿಸಿದ್ದೇವೆ. ಖಾಯಂ ಸಿಬ್ಬಂದಿಗೆ 3,500 ರೂ ವಿಶೇಷ ಭತ್ಯೆ ನೀಡುತ್ತಿದ್ದೇವೆ” ಎನ್ನುತ್ತಾರೆ ಆರೋಗ್ಯ ನಿರೀಕ್ಷಕಿ ಶೋಭಾ.
ವೇತನಕ್ಕೆ ಆದ್ಯತೆ
“ಶಿಡ್ಲಘಟ್ಟ ನಗರಸಭೆ ಪೌರಾಯುಕ್ತನಾಗಿ ಎರಡು ತಿಂಗಳಾಯಿತು. ನಾನು ಬಂದಾಗ ಪೌರ ಕಾರ್ಮಿಕರಿಗೆ 18 ತಿಂಗಳ ವೇತನ ಬಾಕಿಯಿತ್ತು. ಅವರ ವೇತನಕ್ಕೆ ಮೊದಲ ಆದ್ಯತೆ ನೀಡಿ 15 ತಿಂಗಳ ವೇತನ, ಸುಮಾರು 81 ಲಕ್ಷ ರೂಗಳಷ್ಟು ನೀಡಿದ್ದೇವೆ. 15 ಮಂದಿ ಹೊರಗುತ್ತಿಗೆ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅನುಮೋದನೆ ಸಿಗಬೇಕಿದೆ. ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ಗೃಹಭಾಗ್ಯ ಯೋಜನೆಯಡಿ 20 ಮಂದಿಗೆ ಗೃಹ ನಿರ್ಮಾಣ ಮಾಡಿಸಿಕೊಡಲಾಗಿದೆ. ನಿವೇಶನರಹಿತರಿಗೆ ನಿವೇಶನ ನೀಡಲಾಗುವುದು”
– ಶ್ರೀನಿವಾಸ್, ಪೌರಾಯುಕ್ತ
ಜನರ ಮನೋಭಾವ ಬದಲಾಗಬೇಕು
“ನಾನೂ ಸೇರಿದಂತೆ ನಾಲ್ವರನ್ನು ಸರ್ಕಾರ ಎರಡು ವರ್ಷಗಳ ಹಿಂದೆ ಸಿಂಗಪೂರಿಗೆ ಕಳುಹಿಸಿಕೊಟ್ಟಿತ್ತು. ಅಲ್ಲಿನ ತ್ಯಾಜ್ಯದ ವರ್ಗೀಕರಣ, ನೀರಿನ ಸದ್ಭಳಕೆ, ಮರುಬಳಕೆ, ಶುದ್ಧೀಕರಣ ಮುಂತಾದವು ಆಧುನಿಕವಾಗಿವೆ. ಇಲ್ಲಿ ಅವೆಲ್ಲಾ ಅಳವಡಿಸುವುದು ಕಷ್ಟಸಾಧ್ಯ. ಮುಖ್ಯವಾಗಿ ಜನರ ಮನೋಭಾವ ಬದಲಾಗಬೇಕು. ಕಸವನ್ನು ಎಲ್ಲೆಂದರಲ್ಲಿ ಹಾಕಬಾರದು. ನಮ್ಮ ಊರನ್ನು ನಮ್ಮ ಮನೆಯ ರೀತಿ ಜನರು ಭಾವಿಸಿದರೆ ನಮ್ಮ ಕೆಲಸ ಸುಲಭವಾಗುತ್ತದೆ”
– ಯಲ್ಲಮ್ಮ, ಪೌರಕಾರ್ಮಿಕರು
– ಡಿ.ಜಿ.ಮಲ್ಲಿಕಾರ್ಜುನ