Sidlaghatta : ಕನ್ನಡ ಸಾಹಿತ್ಯ, ಸಮಾಜ ಸೇವೆ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಮಹಾನ್ ಚಿಂತಕರಾದ ದಿವಂಗತ ಡಿ.ವಿ. ಗುಂಡಪ್ಪ ಅವರ ಜನ್ಮದಿನಾಚರಣೆಯನ್ನು ಮಂಗಳವಾರ ಶಿಡ್ಲಘಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ, ಡಿ.ವಿ. ಗುಂಡಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಸೇವೆಗಳನ್ನು ಸ್ಮರಿಸಿ ಗೌರವಪೂರ್ವಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶಶಿಕುಮಾರ್ ಅವರು, ಡಿ.ವಿ. ಗುಂಡಪ್ಪ ಅವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾಗಿದ್ದು, ಸಮಾಜಮುಖಿ ಚಿಂತನೆಗಳ ಮೂಲಕ ಜನಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿತ್ವ ಎಂದು ಹೇಳಿದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿತನವನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯವೆಂಬ ಸಂದೇಶವನ್ನು ಡಿವಿಜಿ ತಮ್ಮ ಜೀವನಾಚರಣೆಯ ಮೂಲಕ ನೀಡಿದ್ದಾರೆ.
ಇಂದಿನ ಕಾಲಘಟ್ಟದಲ್ಲಿ ಪತ್ರಕರ್ತರು ಸಮಾಜದ ಕನ್ನಡಿ ಎಂಬ ಹೊಣೆಗಾರಿಕೆಯನ್ನು ಅರಿತು, ಸತ್ಯಾಸತ್ಯತೆಯನ್ನು ಕಾಪಾಡುವಲ್ಲಿ ಬದ್ಧರಾಗಿರಬೇಕು. ಡಿವಿಜಿ ಅವರ ಆದರ್ಶಗಳು ಮತ್ತು ಚಿಂತನೆಗಳು ಇಂದಿನ ಪೀಳಿಗೆಯ ಪತ್ರಕರ್ತರಿಗೆ ಮಾರ್ಗದರ್ಶಕವಾಗಿದ್ದು, ಅವುಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು ನಂತರ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜಗದೀಶ್ ಬಾಬು, ಕೆ.ವಿ. ಮುನೇಗೌಡ, ಡಿ.ಜಿ .ಮಲ್ಲಿಕಾರ್ಜುನ, ಛಾಯಾ ರಮೇಶ್, ಕರಗಪ್ಪ, ನಂದಿ ರಾಜೇಶ್, ಮಿಥುನ್, ಲೋಕೇಶ್, ನಾರಾಯಣಸ್ವಾಮಿ, ರಾಮ್ ದಾಸ್ ಹಾಗೂ ನಯನ್ ಮಹೇಶ್ ಹಾಜರಿದ್ದರು.








