Sidlaghatta : ಶಿಡ್ಲಘಟ್ಟ : ನಗರದ ವಾಸವಿ ರಸ್ತೆ ಕಾಮಗಾರಿಗೆ ವಿಳಂಬವಾಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು ಸೇರಿದಂತೆ ಒಳಚರಂಡಿ ಹಾಗೂ ನೀರು ಪೂರೈಸುವ ಪೈಪ್ ಅಳವಡಿಕೆಯನ್ನು ಆದಷ್ಟು ತ್ವರಿತವಾಗಿ ಮಾಡಿ ಮುಗಿಸುವಂತೆ ಅಧಿಕಾರಿಗಳಿಗೆ ಶಾಸಕ ಬಿ.ಎನ್.ರವಿಕುಮಾರ್ ಸೂಚಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಶ್ರೀ ವಾಸವಿ ರಸ್ತೆ ಕಾಮಗಾರಿ ಸ್ಥಳಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಬೆಸ್ಕಾಂ ಇಲಾಖೆ, ಅಮೃತ್ 2 ಯೋಜನೆ, ನಗರಸಭೆ, ಸೇರಿದಂತೆ ಒಳಚರಂಡಿ ಕಾಮಗಾರಿ ಕೈಗೊಳ್ಳುವ ಎಲ್ಲಾ ಅಧಿಕಾರಿಗಳನ್ನೊಳಗೊಂಡ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಮೊದಲಿಗೆ ಬೆಸ್ಕಾಂ ಇಲಾಖೆಯಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಸೂಚಿಸಿದರು. ಆ ನಂತರ ಒಳಚರಂಡಿ ಕಾಮಗಾರಿ ಹಾಗು ಅಮೃತ್ 2 ಯೋಜನೆಯಡಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಮಾಡಲು ಸೂಚಿಸಿದರು. ಇವೆಲ್ಲವೂ ಸೇರಿದಂತೆ ರಸ್ತೆ ಕಾಮಗಾರಿ ಮುಂದಿನ ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದರು.
ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಮಳೆ ಹಾಗೂ ಚರಂಡಿ ನೀರು ರಸ್ತೆಯಲ್ಲಿ ನಿಲ್ಲದಂತೆ ಅಗತ್ಯ ಕ್ರಮವಹಿಸಬೇಕು ಹಾಗೂ ವಾರ್ಡಿನ ಜನತೆಗೆ ಎರಡು ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಹಿನ್ನೆಲೆ :
ಕಳೆದ 15 ದಿನಗಳ ಹಿಂದೆ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಮತ್ತು ದೇವಾಯಗಳು ಇರುವ ವಾಸವಿ ರಸ್ತೆಯ ದುರಸ್ತಿ ಮಾಡಲು ಇಡೀ ರಸ್ತೆಯನ್ನು ಅಗೆದು ಎರಡೂ ಕಡೆ ಇದ್ದ ಚರಂಡಿಗಳನ್ನು ಮುಚ್ಚಲಾಗಿತ್ತು., ರಸ್ತೆಯ ಎರಡೂ ಕಡೆ ಇದ್ದ ನೀರಿನ ಪೈಪ್ ಗಳು ಮತ್ತು ಒಳಚರಂಡಿಗೂ ಧಕ್ಕೆಯಾಗಿತ್ತು. ಈ ರಸ್ತೆಯ ನಿವಾಸಿಗರು ನಗರಸಭೆಯ ಅಧಿಕಾರಿಗಳಿಗೆ ಲಿಖಿತ ದೂರನ್ನು ನೀಡಿದರು ಸಹ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದ ಕಾರಣ, ವಾಸವಿ ರಸ್ತೆಯ ವರ್ತಕರು ಮತ್ತು ನಿವಾಸಿಗಳು ಮಂಗಳವಾರ ಶಾಸಕರ ನಿವಾಸಕ್ಕೆ ತೆರಳಿ 15 ದಿನಗಳಿಂದ ಕುಡಿಯುವ ನೀರೂ ಇಲ್ಲದೆ, ಓಡಾಡಲೂ ಆಗದ ಪರಿಸ್ಥಿತಿಯನ್ನು ವಿವರಿಸಿ ಮನವಿ ಸಲ್ಲಿಸಿದ್ದರು.
ಜಿಲ್ಲಾ ನಗರಾಭಿವೃದ್ದಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಮಾಧವಿ.ಕೆ. ನಗರಸಭೆ ಪೌರಾಯುಕ್ತೆ ಜಿ.ಅಮೃತ, ಬೆಸ್ಕಾಂ ಇಲಾಖೆಯ ಎಇಇ ಶಿವಶಂಕರ್, ಅಮೃತ್ 2 ಯೋಜನೆಯ ಸಹಾಯಕ ಎಂಜಿನಿಯರ್ ಸಭಾ ಅಂಜುಂ, ಪಿಎಂಸಿ ತಂಡದ ಉದಯ್, ಒಳಚರಂಡಿ ಕಾಮಗಾರಿ ಹಾಗೂ ರಸ್ತೆ ಕಾಮಗಾರಿ ಗುತ್ತಿಗೆದಾರರು, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಮಹೇಶ್ ಬಾಬು, ನಗರ್ತ ಮಂಡಳಿಯ ನಾಗರಾಜ್ ಬ್ರಾಹ್ಮಣ ಮಂಡಳಿಯ ಅಧ್ಯಕ್ಷ ಎ.ಎಸ್.ರವಿ, ವಾಸವಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರೂಪಸಿ ರಮೇಶ್, ಉಮೇಶ್, ರಘು, ತಾದೂರು ರಘು, ವಿಜಯಕುಮಾರ್, ರಾಜೇಶ್, ಮಹೇಶ್, ಲಕ್ಷ್ಮೀನಾರಾಯಣ ಬಾಬು ಹಾಜರಿದ್ದರು.








