ನಾಡಹಬ್ಬ ಕನ್ನಡರಾಜ್ಯೋತ್ಸವ ಆಚರಣೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರುಹಾಜರಾಗಿದ್ದರಿಂದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯನ್ನು ಕನ್ನಡ ಪರ ಸಂಘಟನೆಗಳು ಬಹಿಷ್ಕರಿಸಿದ ಘಟನೆ ನಡೆಯಿತು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಪೂರ್ವಭಾವಿ ಸಭೆಗೆ ೧೦ ಕ್ಕೂ ಹೆಚ್ಚು ಇಲಾಖೆಗಳು ಅಧಿಕಾರಿಗಳು ಹಾಜರಾಗಿರಲಿಲ್ಲ. ಇದರಿಂದ ಕೋಪಗೊಂಡ ಕನ್ನಡ ಸೇನೆಯ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಯಾವ ಅಧಿಕಾರಿಗಳಿಗೂ ನಾಡಹಬ್ಬಗಳ ಬಗ್ಗೆ ಕಾಳಜಿಯಿಲ್ಲ, ಒಂದು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ಹೋರಾಟಗಳನ್ನು ಮಾಡುತ್ತಿದ್ದರೆ, ಅದಕ್ಕೆ ವಿರುದ್ಧವಾಗಿ ಸರ್ಕಾರಿ ಅಧಿಕಾರಿಗಳ ವರ್ತನೆ ಇದೆ. ಇದು ಆತಂಕದ ವಿಚಾರವಾಗಿದ್ದು, ನಾವು ಸಭೆಯನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳಿಗೆ ದಿಕ್ಕಾರಗಳನ್ನು ಕೂಗಿ ಹೊರನಡೆದರು,
ಸಭೆಗೆ ಬರದೆ ಇರುವ ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ನೀಡಿ ಕಾರಣ ಕೇಳಲಾಗಿದೆ ಎಂದು ತಹಶೀಲ್ದಾರ್ ಉತ್ತರ ನೀಡಿದರೂ ಕೂಡಾ ಸಮಾಧಾನವಾಗದ ಸಂಘಟಕರು, ಕೇವಲ ನಾಮಕಾವಸ್ತೆಗೆ ನೊಟೀಸ್ಗಳನ್ನು ಜಾರಿ ಮಾಡುವುದರಿಂದ ಯಾವುದೇ ಬದಲಾವಣೆಗಳು ಆಗುವುದಿಲ್ಲವೆಂದು ಹೊರನಡೆದರು. ನಂತರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ ಅವರನ್ನು ಮನವೊಲಿಸಿ ಒಳಗೆ ಕರೆದುಕೊಂಡು ಬರುವಂತಹ ಪ್ರಯತ್ನ ಮಾಡಿದರಾದರೂ ಸಭೆಯನ್ನು ಅಕ್ಟೋಬರ್ ೨೬ ಕ್ಕೆ ಮುಂದೂಡಲಾಯಿತು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಶಿರಸ್ತೆದಾರ ನರೇಂದ್ರಬಾಬು, ಸಿ.ಡಿ.ಪಿ.ಓ.ಲಕ್ಷ್ಮೀದೇವಮ್ಮ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪುರುಷೋತ್ತಮ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -