ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಸೋಮವಾರ ರಾತ್ರಿ ಮನೆಯ ಛಾವಣಿ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಚಿಕ್ಕತಮ್ಮಯ್ಯ ಅವರ ಪತ್ನಿ ನಾಗರತ್ನಮ್ಮ(55) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ರಾತ್ರಿ ಮನೆಯಲ್ಲಿ ಚಿಕ್ಕತಮ್ಮಯ್ಯ, ನಾಗರತ್ನಮ್ಮ ಮತ್ತು ಮಗಳು ಗಂಗೋತ್ರಿ ಮಲಗಿದ್ದಾಗ, ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಶಿಥಿಲವಾಗಿದ್ದ ಜಂತಿಕೆ ಮನೆಯ ಮಾಳಿಗೆ ರಾತ್ರಿ 11 ಗಂಟೆ ಸುಮಾರಿಗೆ ಕುಸಿದಿದೆ. ಮಲಗಿದ್ದವರ ಮೇಲೆ ಮನೆಯ ಸೂರು ಬಿದ್ದ ಪರಿಣಾಮ ನಾಗರತ್ನಮ್ಮ ಸ್ಥಳದಲ್ಲೇ ಮೃತಪಟ್ಟು, ಮಗಳು ಗಂಗೋತ್ರಿ(12)ಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಭೇಟಿ ನೀಡಿ ಅಂತ್ಯಸಂಸ್ಕಾರಕ್ಕೆ ಸರ್ಕಾರದ ವತಿಯಿಂದ 5000 ರೂಗಳನ್ನು ನೀಡಿದರು. ಶಾಸಕ ಎಂ.ರಾಜಣ್ಣ ಭೇಟಿ ನೀಡಿ ಮೃತರ ಕುಟುಂಬಕ್ಕೆ 5000 ರೂಗಳನ್ನು ನೀಡಿದರು. ಗ್ರಾಮ ಪಂಚಾಯತಿ ವತಿಯಿಂದ 10 ಸಾವಿರ ರೂಗಳನ್ನು ನೀಡಲಾಯಿತು. ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಮ್ಮ, ರಾಜಸ್ವ ನಿರೀಕ್ಷಕ ಸುಬ್ರಮಣಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಆರ್.ಶ್ರೀನಿವಾಸ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
- Advertisement -
- Advertisement -
- Advertisement -
- Advertisement -