ಸಮಾನ ಮನಸ್ಕರ ಹೋರಾಟ ಸಮಿತಿಯೊಂದಿಗೆ ವಿವಿಧ ಸಂಘಟನೆಗಳು ಒಗ್ಗೂಡಿ ಸೋಮವಾರ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡು ಬೆಸ್ಕಾಂ ಕಚೇರಿಗೆ ಬೀಗ ಜಡಿದು ಧರಣಿಯನ್ನು ನಡೆಸಿದರು.
ರೈತರು ಲಕ್ಷಾಂತರ ರೂಪಾಯಿಗಳ ಬಂಡವಾಳ ಹಾಕಿ ಕೊರೆಸಿರುವ ಕೊಳವೆ ಬಾವಿಗಳಿಂದ ವಿದ್ಯುತ್ ಇಲ್ಲದ ಕಾರಣ ನೀರೆತ್ತಲಾಗದೆ ಬೆಳೆಗಳು ಒಣಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ರಮ ಸಕ್ರಮ ಯೋಜನೆಯಲ್ಲಿ 18 ಸಾವಿರ ರೂಗಳನ್ನು ಕಟ್ಟಿಸಿಕೊಂಡು 2 ವರ್ಷಗಳಾದರೂ ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ. ಖಾಸಗಿ ಗುತ್ತಿಗೆದಾರರಿಂದ ನಡೆಯುವ ಅಕ್ರಮವನ್ನು ತಡೆದು ಈಗಾಗಲೇ ಹಣ ಕಟ್ಟಿರುವ ರೈತರಿಗೆಲ್ಲ ಅನುಕೂಲವಾಗುವಂತೆ ತಕ್ಷಣ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಬೇಕು. ನಗರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ರೇಷ್ಮೆ ರೀಲರುಗಳಿದ್ದು, ಲಕ್ಷಾಂತರ ರೂಗಳ ಬಂಡವಾಳ ಹೂಡಿ ಅವರು ರೇಷ್ಮೆ ಬಿಚ್ಚಾಣಿಕೆ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಈ ಉದ್ದಿಮೆಯನ್ನು ನಂಬಿ ಲಕ್ಷಾಂತರ ಕುಟುಂಬಗಳಿವೆ. ಸಮರ್ಪಕ ವಿದ್ಯುತ್ ಇಲ್ಲದ ಕಾರಣ ರೇಷ್ಮೆ ಬಿಚ್ಚಾಣಿಕೆ ಕೇಂದ್ರಗಳನ್ನು ಮುಚ್ಚುವ ಹಂತಕ್ಕೆ ರೀಲರುಗಳು ಬಂದಿದ್ದಾರೆ. ಬ್ಯಾಂಕಿಂಗ್ ವ್ಯವಹಾರ, ಓದುವ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ವರ್ಗದವರಿಗೂ ತೊಂದರೆಯಾಗಿದೆ.
ವಿದ್ಯುತ್ ಸಮಸ್ಯೆಯಿಂದಾಗಿ ಆರ್ಥಿಕತೆ ಕುಂಠಿತಗೊಂಡಿದೆ. ವಿದ್ಯುತ್ ಸಮರ್ಪಕವಾಗಿ ವಿತರಿಸಬೇಕು. ನಿರಂತರ 3 ಫೇಸ್ ವಿದ್ಯುತ್ 8 ಗಂಟೆಗಳ ಕಾಲ ಪೂರೈಕೆ ಮಾಡಬೇಕು. ನಗರದಲ್ಲಿ ಮೇನ್ ಕನೆಕ್ಷನ್ ತಂತಿಗಳು ಅಲುಗಾಡುತ್ತಿದ್ದು, ಜೋತುಬಿದ್ದಿರುವ ವಿದ್ಯುತ್ ತಂತಿಗಳನ್ನು ತಕ್ಷಣ ಸರಿಪಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕರ್ತವ್ಯ ನಿರತ ಲೈನ್ಮನ್ಗಳು ಹಳ್ಳಿಗಳಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ತಾಲ್ಲೂಕು ಕಚೇರಿಯ ಬಳಿ ಹಾಗೂ ಓ.ಟಿ.ವೃತ್ತದ ಬಳಿ ಮಾನವ ಸರಪಣಿಯನ್ನು ನಿರ್ಮಿಸಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದರು. ನಂತರ ಬೆಸ್ಕಾಂ ಕಚೇರಿಗೆ ಬೀಗ ಜಡಿದು ಧರಣಿಯನ್ನು ನಡೆಸಿ, ಎ.ಇ.ಇ ಬೈರೇಗೌಡ ಅವರಿಗೆ ಮನವಿಯನ್ನು ಸಲ್ಲಿಸಿದರು.
ಸಮಾನ ಮನಸ್ಕರ ಹೋರಾಟ ಸಮಿತಿ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಕನ್ನಡ ಸೇನೆ ಬಿ.ಮಂಜುನಾಥ್, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ) ಜಿಲ್ಲಾಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ಮುನಿಕೆಂಪಣ್ಣ, ಯೂನಿಟಿ ಸಿಲ್ಸಿಲಾ ಫೌಂಡೇಷನ್ ಅಧ್ಯಕ್ಷ ಮಹಮ್ಮದ್ ಅಸಾದ್, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಬಿ.ಎಸ್.ಅಫ್ಜಲ್ಪಾಷ, ಅಖಿಲ ಕರ್ನಾಟಕ ಅಲ್ಪಸಂಖ್ಯಾತರ ಸಂಘದ ಅಧ್ಯಕ್ಷ ಬಿ.ಎಸ್.ಸಾದಿಕ್ಪಾಷ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ತಾಲ್ಲೂಕು ಅಧ್ಯಕ್ಷ ಜಿಯಾ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ಜಿ.ಎಲ್.ವಸಂತ್ಕುಮಾರ್, ದಲಿತ ಸೇನೆ ಆರ್.ಸುರೇಶ್, ಟಿಪ್ಪು ಸೆಕ್ಯುಲರ್ ಸೇನಾ ತಾಲ್ಲೂಕು ಶಾಖೆಯ ಮೌಲಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -