ದೇಶದ ಐಕ್ಯತೆ, ಸಮಗ್ರತೆ ಹಾಗೂ ಅಭಿವೃದ್ಧಿಗಾಗಿ ಸಾಕ್ಷರತೆ ಬಹಳ ಮುಖ್ಯ. ಅವಿದ್ಯಾವಂತರನ್ನು ಓದಿನೆಡೆಗೆ ಆಕರ್ಷಿಸಿ ಅದರ ಉಪಯುಕ್ತತೆಯನ್ನು ಮನಗಾಣಿಸಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಸಾಕ್ಷರ ಭಾರತ್ ಕಾರ್ಯಕ್ರಮದಡಿ ಮೂರು ದಿನಗಳ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇವಲ ಸಹಿ ಮಾಡುವುದನ್ನು ಕಲಿತರೆ ಸಾಕ್ಷರರಾಗುವುದಿಲ್ಲ. ಗ್ರಾಮ ಲೋಕ ಶಿಕ್ಷಣ ಕೇಂದ್ರದಲ್ಲಿ ತರಿಸುವ ದಿನಪತ್ರಿಕೆ, ವಾರಪತ್ರಿಕೆಗಳು, ನಿಯಕಾಲಿಕಗಳನ್ನು ಓದುವ ರೀತಿಯಲ್ಲಿ ಅಕ್ಷರಸ್ಥರನ್ನಾಗಿಸಬೇಕು. ಸ್ವತಂತ್ರವಾಗಿ ವ್ಯವಹರಿಸುವ ರೀತಿಯಲ್ಲಿ ಸ್ವಯಂ ಸೇವಕರು ತರಬೇತಿ ನೀಡಬೇಕು. ಗ್ರಾಮದ ಮಹಿಳೆಯರಲ್ಲಿ ಅಕ್ಷರ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
ತಾಲ್ಲೂಕು ಸಾಕ್ಷರತಾ ಸಂಯೋಜಕ ಟಿ.ವಿ.ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳಲ್ಲಿ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರವನ್ನು ನಡೆಸುತ್ತಿದ್ದು, ಈಗಾಗಲೇ 4 ಪಂಚಾಯತಿಗಳಲ್ಲಿ ಕಾರ್ಯಾಗಾರ ಮುಗಿದು, ಕಲಿಕೆಯು ಪ್ರಾರಂಭಗೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿ ಕಲಿಕಾರ್ಥಿಗೂ ನೀಡಬೇಕಾದ ಕಲಿಕೋಪಕರಣಗಳನ್ನು ವಿತರಿಸಿ ಪ್ರೇರಕರು ಹಾಗೂ ಭಾಗವಹಿಸಿದ್ದ 39 ಮಂದಿ ಸ್ವಯಂ ಸೇವಕರಿಗೆ ಅವರವರ ಜವಾಬ್ದಾರಿಗಳ ಬಗ್ಗೆ ವಿವರಿಸಲಾಯಿತು.
ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ರೋಜಲಿನ್ ಫೆರೆರಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೈ.ರಾಮಕೃಷ್ಣ, ಜಿಲ್ಲಾ ಸರ್ಕಾರೇತರ ಸಾಕ್ಷರತಾ ಸಂಯೋಜಕ ಆನಂದಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ದಾವುದ್ ಪಾಷ, ಎಲ್.ವಿ.ವೆಂಕಟರೆಡ್ಡಿ, ಪ್ರಭಾಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -