ಹಲವು ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಆಹಾರ ಹಾಗೂ ಭೌಗೋಳಿಕ ಪರಿಸರವುಳ್ಳ ಭಾರತದ ವಿಭಿನ್ನತೆಯಲ್ಲಿ ಏಕತೆಯನ್ನು ಮಕ್ಕಳು ಸಾಂಸ್ಕೃತಿಕ ಪ್ರದರ್ಶನದ ಮೂಲಕ ಮಾಡಿದ್ದಾರೆ. ಈ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಮಕ್ಕಳಿಗೆ ವಿಶಾಲ ದೃಷ್ಟಿಕೋನ ಲಭಿಸಲಿದೆ, ಅವರ ಭವಿಷ್ಯಕ್ಕೆ ನೆರವಾಗಲಿದೆ ಎಂದು ಸುಗಮ ಸಂಗೀತ ಗಾಯಕ ಪಂಚಮ್ ಹಳಿಬಂಡಿ ತಿಳಿಸಿದರು.
ನಗರದ ಹನುಮಂತಪುರ ಗೇಟ್ ನಲ್ಲಿರುವ ಬಿ.ಜಿ.ಎಸ್. ಪಬ್ಲಿಕ್ ಶಾಲೆಯ ಜ್ಞಾನಾಂಕುರ ಕ್ಯಾಂಪಸ್ನಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಕ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವಿನ ಮನಸ್ಸಿನಲ್ಲಿ ತನ್ನ ದೇಶ, ರಾಜ್ಯ, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಗೌರವಭಾವನೆ ಮೂಡಿಸುವ ಸಾಂಸ್ಕೃತಿಕ ಹಬ್ಬಗಳು ಅತ್ಯಂತ ಅವಶ್ಯಕ. ಸಂಸ್ಕಾರದ ಬೀಜವು ಬಿತ್ತುವ ಈ ರೀತಿಯ ಕಾರ್ಯಕ್ರಮಗಳು ಪಠ್ಯಕ್ಕಿಂತಲೂ ಮುಖ್ಯವಾದುದು. ಈಗ ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಸಾಂಸ್ಕೃತಿಕ ಬೀಜ ಮುಂದಿನ ಜನಾಂಗಕ್ಕೂ ಮಕ್ಕಳ ಮೂಲಕ ಮುಂದುವರೆಯುತ್ತದೆ. ಮಕ್ಕಳು ರೂಪಿಸಿದ್ದ ಕಲಾಕೃತಿಗಳು, ವೇಷಭೂಷಣಗಳು, ಸರ್ವಧರ್ಮ ಸಮನ್ವಯತೆಯ ರೂಪಕಗಳು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಬಿ.ಜಿ.ಎಸ್. ಸಂಸ್ಥೆಗಳ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಮಕ್ಕಳನ್ನು ಕೇವಲ ಅಂಕಗಳನ್ನು ಗಳಿಸಿಕೊಳ್ಳುವಂತಹ ಯಂತ್ರಗಳಂತೆ ಅಲ್ಲದೆ ಅವರನ್ನು ಸಮಾಜದಲ್ಲಿ ಪರಿಪೂರ್ಣವಾದ ವ್ಯಕ್ತಿಯನ್ನಾಗಿ ಮಾಡಬೇಕು ಎಂಬುದು ಸಾಂಸ್ಕೃತಿಕ ಹಬ್ಬದ ಹಿಂದಿನ ಉದ್ದೇಶ. ಪಠ್ಯಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವಂತೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಸಂಪ್ರದಾಯಿಕ ಆಚರಣೆಗಳ ಬಗ್ಗೆ ಶಿಕ್ಷಣ ನೀಡಬೇಕು. ಮಕ್ಕಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಒತ್ತಡ ಹೇರಬಾರದು. ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡದಿದ್ದರೆ, ನಮ್ಮ ಸಂಪ್ರದಾಯಗಳು ಇತಿಹಾಸಗಳ ಪುಟಗಳನ್ನು ಸೇರುತ್ತವೆ ಎಂದರು.
ಶಾಲೆಯಲ್ಲಿ ಮಕ್ಕಳಿಂದ ಆಯೋಜನೆ ಮಾಡಲಾಗಿದ್ದ ವಿವಿಧ ಬಗೆಯ ಸಂಪ್ರದಾಯ, ಪರಂಪರೆಗಳನ್ನು ಬಿಂಬಿಸುವಂತಹ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಶಾಲೆಯ ಮಕ್ಕಳು ದೇಶದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸ್ವಾಗತಿಸಿದರು. ದೇಶದ ಪ್ರಮುಖ ಹಬ್ಬಗಳ ಆಚರಣೆಗಳ ಮಾದರಿಗಳನ್ನು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ನಾಡಹಬ್ಬಗಳ ಮಾದರಿ, ತರಕಾರಿ ಮಾರಾಟ, ಬೆಂಕಿ ಬಳಸದೆ ಅಡುಗೆ ತಯಾರಿಕೆ, ಲಕ್ಷ್ಮೀ ಪೂಜೆ, ಚರ್ಚ್ ಮಸೀದಿ ಬೌದ್ಧ ಸ್ಥೂಪ ದೇವಾಲಯಗಳ ಮಾದರಿ ಹಾಗೂ ಆಚರಣೆಗಳು, ಪಾರಂಪರಿಕ ವಸ್ತುಗಳು, ರೈತ ಪರಿಕರಗಳು, ಗುಡಿ ಕೈಗಾರಿಕೆಗಳು, ವೇದಗಳ ಕಾಲದ ಸಂಸ್ಕೃತಿ, ಮೂಢ ನಂಬಿಕೆಗಳು, ಸುಗ್ಗಿ ಆಚರಣೆ, ಪುಷ್ಪಪ್ರದರ್ಶನ, ರಂಗೋಲಿ ಮೊದಲಾದ ಮಾದರಿಗಳನ್ನು ಪ್ರದರ್ಶಿಸಿ, ವಿವರಿಸಿದರು.
ಕವಿಗಳ ಗೀತೆಗಳನ್ನು ಹಾಡಿದ ಗಾಯಕ ಪಂಚಮ್ ಹಳಿಬಂಡಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪ್ರಾಂಶುಪಾಲ ಮಹದೇವಯ್ಯ, ನಗರಸಭಾ ಸದಸ್ಯ ವೆಂಕಟಸ್ವಾಮಿ, ಮುರಳಿ, ಜೆ.ಎಸ್. ವೆಂಕಟಸ್ವಾಮಿ, ಕೆಂಪರೆಡ್ಡಿ, ಪುರುಷೋತ್ತಮ್, ವಾರ್ಡನ್ ರಾಜು, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮುಖ್ಯಾಂಶಗಳು…
ಗಾಯಕ ಪಂಚಮ್ ಹಳಿಬಂಡಿಯವರಿಂದ ಗೀತಗಾಯನ
ಶಾಲಾ ಮಕ್ಕಳಿಂದ ಸಂಪ್ರದಾಯ, ಪರಂಪರೆಗಳನ್ನು ಬಿಂಬಿಸುವ ಪ್ರದರ್ಶನ
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ
- Advertisement -
- Advertisement -
- Advertisement -
- Advertisement -