ಹೂಳು ತುಂಬಿರುವ ಹಾಗು ನಿರ್ವಹಣೆಯಿಲ್ಲದ ಕೆರೆಗಳ ಪುನಃಶ್ಚೇತನಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದ್ದು ತಾಲ್ಲೂಕಿನಲ್ಲಿ ಬಶೆಟ್ಟಹಳ್ಳಿ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮೀಣಾಬಿವೃದ್ಧಿ ಜಿಲ್ಲಾ ನಿರ್ದೆಶಕ ರಾಧಾಕೃಷ್ಣರಾವ್ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿಯ ಕೆರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆಯಲ್ಲಿರುವ ಹೂಳನ್ನು ತೆಗೆಯುವ ಕಾರ್ಯಕ್ರಮವನ್ನು ಪರಿವೀಕ್ಷಿಸಿ ಅವರು ಮಾತನಾಡಿದರು.
ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳು ಒಂದು ಕಾಲದಲ್ಲಿ ಕೆರೆ ಕುಂಟೆಗಳ ಸಾಲನ್ನೇ ಹೊಂದಿದ್ದು, ಅವುಗಳಲ್ಲಿ ಸದಾ ನೀರಿರುತ್ತಿತ್ತು. ಆದರೆ ಈಗ ಬರಪೀಡಿತ ಜಿಲ್ಲೆಗಳಗಳಾಗಿದ್ದು ಕೆರೆಗಳ ಜೀರ್ಣೋದ್ದಾರದಿಂದ ಮಾತ್ರ ಅಬಿವೃದ್ಧಿ ಹೊಂದಲು ಸಾಧ್ಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಬಾಗೆಪಲ್ಲಿ ಹಾಗೂ ಚಿಂತಾಮಣಿ ತಾಲ್ಲೂಕುಗಳಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಆರಂಭಿಸಲಾಗಿದೆ. ಈಗಾಗಲೇ ಕೆರೆ ಹೂಳೆತ್ತುವ ಕಾರ್ಯಕ್ಕೆ ಸುಮಾರು ೩೫ ಲಕ್ಷ ರೂ ಬಿಡುಗಡೆ ಮಾಡಿದ್ದು, ಜನರ ಸಹಕಾರದೊಂದಿಗೆ ಈ ಕಾರ್ಯವನ್ನು ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಬಶೆಟ್ಟಹಳ್ಳಿಯ ಸುಮಾರು ಎರಡು ಸಾವಿರ ಕುಟುಂಬಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲು ಈಗಾಗಲೇ ನಾಲ್ಕು ಕೊಳವೆಬಾವಿಗಳನ್ನು ಕೊರೆಸಿ ಗಮ ಪಂಚಾಯಿತಿಯಿಂದ ನೀರು ಪೂರೈಸಲಾಗುತ್ತಿದೆ. ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಪುನಃಶ್ಚೇತನ ಸಮಿತಿ ಬಶೆಟ್ಟಹಳ್ಳಿ ಸಹಯೋಗದಲ್ಲಿ ಕೆರೆ ಹೂಳೆತ್ತುವ ಕೆಲಸ ಮಾಡಲಾಗುವುದು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮೋಹನ್ ಮಾತನಾಡಿ, ಪ್ರಕೃತಿ ಮನುಷ್ಯನಿಗೆ ಅನೇಕ ವರಗಳನ್ನು ನೀಡಿದೆ. ಅದರಲ್ಲಿ ಕಾಡು, ಬೆಟ್ಟ, ನೀರು ಮುಂತಾದುವುಗಳನ್ನು ಮನುಷ್ಯ ತನ್ನ ದುರಾಸೆಯಿಂದ ಹಾಳು ಮಾಡುತ್ತಿದ್ದಾನೆ. ಪ್ರಕೃತಿ ಮುನಿದರೆ ಮನುಷ್ಯ ಉಳಿಯುವುದು ಕಷ್ಟ, ಪ್ರಕೃತಿ ಉಳಿಸಿ ಮನುಜ ಕುಲವನ್ನು ಉಳಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಶೆಟ್ಟಹಳ್ಳಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಾಯಿತ್ರಿ, ಜರ್ನಾಧನ್, ಶಶಿಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -